ಜೈವಿಕ-ಅರಣ್ಯ ನಾಶವನ್ನು ಗುರುತಿಸಲು ಕ್ರಿಯಾ ಯೋಜನೆ ರೂಪಿಸಿ: ಮುಖ್ಯಮಂತ್ರಿ ಬೊಮ್ಮಾಯಿ
''ಕಾಡಿನ ಹೊರಗಿರುವ ಪ್ರಾಣಿಗಳ ಸಂರಕ್ಷಣೆಗೆ ಕ್ರಮ ವಹಿಸಿ'' ► ''ಶ್ರೀಗಂಧ ನೀತಿ ದುರ್ಬಳಕೆಯಾಗದಂತೆ ಎಚ್ಚರ ವಹಿಸಿ''

ಬೆಂಗಳೂರು, ಮೇ 6: ‘ರಾಜ್ಯದಲ್ಲಿ ಅರಣ್ಯ ಜೀವಿಶಾಸ್ತ್ರ ವ್ಯವಸ್ಥೆಯ ಮೇಲೆ ಉಂಟಾಗಿರುವ ದುಷ್ಪರಿಣಾಮಗಳನ್ನು ಸರಿದೂಗಿಸಲು ಐಐಎಸ್ಸಿ ಸಂಸ್ಥೆಯ ತಜ್ಞರ ನೆರವಿನೊಂದಿಗೆ ಕ್ರಿಯಾ ಯೋಜನೆ ರೂಪಿಸಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಯವ್ಯಯ ಘೋಷಣೆಗಳ ಅನುಷ್ಠಾನ ಸಂಬಂಧ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ‘ಕ್ರಿಯಾಯೋಜನೆ ಸಿದ್ದಪಡಿಸಿ ಜಿಲ್ಲೆಗಳಿಗೆ ಕಾಲಮಿತಿ ನಿಗದಿಪಡಿಸಿ ಅನುಷ್ಟಾನದ ರೂಪುರೇಷೆಗಳನ್ನು ಸಿದ್ಧಪಡಿಸುವುದು. ವಿಶ್ವಬ್ಯಾಂಕ್ ನೆರವಿನ ಪ್ಲಾಸ್ಟಿಕ್ ನಿರ್ವಹಣೆ ಯೋಜನೆಗೆ ದೊಡ್ಡ ಮೊತ್ತದ ಅನುದಾನ ನಿಗದಿಪಡಿಸಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕೆ ನಿರ್ದಿಷ್ಟ ಯೋಜನೆಯನ್ನು ರೂಪಿಸಬೇಕು. ವ್ಯಾಪಕ ಪ್ರಚಾರ ನೀಡಬೇಕು. ಸಾರ್ವಜನಿಕರನ್ನು ತೊಡಗಿಸಿಕೊಳ್ಳಬೇಕು. ಫಲಿತಾಂಶವನ್ನು ಜನರಿಗೆ ತಿಳಿಸಬೇಕು' ಎಂದು ನಿರ್ದೇಶನ ನೀಡಿದರು.
‘ಶ್ರೀಗಂಧ ನೀತಿ ದುರ್ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶಗಳಿಗೆ 5ಕೋಟಿ ರೂ.ಗಳ ವಿಶೇಷ ಅನುದಾನ ಒದಗಿಸಲಾಗಿದೆ. ಕಾಡಿನ ಹೊರಗಿರುವ ಪ್ರಾಣಿಗಳ ಸಂರಕ್ಷಣೆಯನ್ನು ಕೈಗೊಳ್ಳುವುದು. ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಮರಗಳ ಕಡಿತಲೆ ಮತ್ತು ಸಾಗಾಣಿಕೆ ಸರಳೀಕರಣ ಯೋಜನೆಯಡಿ ಖಾಸಗಿ ಭೂಮಿಗಳಲ್ಲಿ ರೈತರು ಬೆಳೆದಿರುವ ಮರಗಳನ್ನು ಕಡಿಯುವ ಮತ್ತು ಸಾಗಣಿಕೆ ಮಾಡಲು ಅನುಮತಿ ಪ್ರಕ್ರಿಯೆ ಸರಳೀಕರಣ ಮಾಡುವುದು-ದುರ್ಬಳಕೆಯಾಗದಂತೆ ಕ್ರಮ ವಹಿಸುವುದು. ಹಳಿಯಾಳ, ದಾಂಡೇಲಿಗಳಲ್ಲಿನ ಟಿಂಬರ್ ಮಾರುಕಟ್ಟೆ ಮೇಲೆ ನಿಯಂತ್ರಿಸಬೇಕು. ಆಡಳಿತದಲ್ಲಿ ಸುಧಾರಣೆ, ಮಾಲಿನ್ಯ ನಿಯಂತ್ರಣಾ ಮಂಡಳಿಯಲ್ಲಿ ಅರ್ಜಿಗಳ ಸರಳೀಕರಣ ಮಾಡುವುದು. ಮಾಲಿನ್ಯಗಳ ವರ್ಗೀಕರಣವನ್ನು ಮಂಡಳಿ ತೀರ್ಮಾನಿಸಲಿ' ಎಂದು ಹೇಳಿದರು.
‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಕ್ಲಿಷ್ಟವಿರುವ ಕೆಲವು ನಿಯಮಗಳನ್ನು ತೆಗೆದುಹಾಕಬೇಕು. ವ್ಯವಸ್ಥೆಯನ್ನು ಆದಷ್ಟು ಸರಳೀಕರಿಸಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೊಂದರೆಯಾಗಬಾರದು. ಸಮ್ಮತಿಗಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಅನುಮತಿ ನೀಡುವ ಮುನ್ನ ಕಡ್ಡಾಯವಾಗಿ ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸುವುದು. ಬೆಳಗಾವಿ ಹಿಡ್ಕಲ್ ಅಣೆಕಟ್ಟು ಪ್ರದೇಶದಲ್ಲಿ ಪಕ್ಷಿಧಾಮ ಮತ್ತು ಚಿಟ್ಟೆಗಳ ಉದ್ಯಾನವನ್ನು ಪ್ರವಾಸೋದ್ಯಮ ದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಪಡಿಸುವುದು' ಎಂದು ಅವರು ತಿಳಿಸಿದರು.
ಅರಣ್ಯ ಸಚಿವ ಉಮೇಶ್ ಕತ್ತಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಕೆ.ಸಿಂಗ್, ವಿಜಯ್ ಕುಮಾರ್ ಗೋಗಿ ಉಪಸ್ಥಿತರಿದ್ದರು.







