ನಾಲ್ವಡಿಯವರ ಮಾದರಿ: ಮೈಸೂರಿನ ಜುಮಾ ಮಸೀದಿ

ಎಪ್ರಿಲ್ 6, 1927ರಂದು ಮೈಸೂರಿನ ಹೊಸ ಜುಮಾ ಮಸೀದಿ ಉದ್ಘಾಟಿಸಿ ನಾಲ್ವಡಿಯವರು ಉರ್ದುವಿನಲ್ಲಿ ಮಾಡಿದ ಭಾಷಣ
ಮಹನೀಯರೇ, ನಿಮ್ಮ ಪ್ರಾರ್ಥನೆಗಾಗಿ ಮೈಸೂರಿ ನಲ್ಲಿ ಕಟ್ಟಿಸಲಾದ ಹೊಸ ಜುಮಾ ಮಸೀದಿಯ ಉದ್ಘಾಟನೆಗೆ ನಾನಿಂದು ಬಂದಿದ್ದೇನೆ.
ಭಾರತೀಯರಾದ ನಮ್ಮ ಬದುಕಿನಲ್ಲಿ ಧರ್ಮವು ಬಲುದೊಡ್ಡ ಪಾತ್ರ ವಹಿಸುತ್ತದೆ. ದೇವರನ್ನು ಹಲವು ವಿಧಗಳಲ್ಲಿ ಪೂಜಿಸಿದರೂ ನಮ್ಮ ವೈವಿಧ್ಯತೆಯಲ್ಲಿ ಏಕತೆ ಇದೆ. ನಮ್ಮೆಲ್ಲ ವೈವಿಧ್ಯಮಯ ಹಾದಿಗಳಲ್ಲಿ ನಾವು ಸರಿಯಾಗಿ ನಡೆದರೆ, ಇಂದಲ್ಲ ನಾಳೆ, ಅದೇ ಅನಂತ ಸತ್ಯದೆಡೆಗೆ ನಾವು ಸಾಗಲಿದ್ದೇವೆ.
ಇತ್ತೀಚೆಗಿನ ದಿನಗಳಲ್ಲಿ ಹಲವು ಭಾಗಗಳಲ್ಲಿ ಧರ್ಮದ ತಿರುಳಿನ ಬದಲು ಹೊರಾವರಣದ ಲಕ್ಷಣಗಳನ್ನಿಟ್ಟು ಕೊಂಡು ದೊಡ್ಡ ಕಲಹಗಳು ಹುಟ್ಟಿರುವುದು ನನಗೆ ದುಃಖತಂದಿದೆ. ಈ ಸ್ವಭಾವ ನೆರಳನ್ನು ಬೆನ್ನಟ್ಟುವ ರೀತಿಯದ್ದು. ನನ್ನ ಪ್ರಜೆಗಳಲ್ಲಿ ಅಂತಹ ಸ್ವಭಾವ ಚಿಗಿತುಕೊಂಡಿಲ್ಲ ಎಂಬುದು ಸಂತೋಷದ ವಿಚಾರ. ನಾನಿಂದು ಉದ್ಘಾಟಿಸುತ್ತಿ ರುವ ಜುಮಾ ಮಸೀದಿಯು ಅನಂತ ವೈವಿಧ್ಯತೆಗಳ ಹುಡುಕಾಟಗಳನ್ನು ಪ್ರೋತ್ಸಾಹಿಸಲಿ ಹಾಗೂ ಕೋಮು ಜಗಳ ಮತ್ತು ಪೂರ್ವಾಗ್ರಹಗಳನ್ನು ನಿಗ್ರಹಿಸಲಿ.
ಈ ಮಸೀದಿ ಕುರಿತಂತೆ ನನಗೆ ಕೌಟುಂಬಿಕ ಮತ್ತು ವೈಯಕ್ತಿಕ ಆಸಕ್ತಿಯೂ ಇದೆ. 1799ರಲ್ಲಿ ಅಧಿಕಾರ ಕೇಂದ್ರವು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರ ಗೊಂಡಾಗ, ಈ ನಗರದಲ್ಲಿ ಜುಮಾ ಮಸೀದಿ ಇರಲಿಲ್ಲ. ಶ್ರೀರಂಗಪಟ್ಟಣದಿಂದ ವಲಸೆ ಬಂದಿದ್ದ ಮುಸಲ್ಮಾನ ನಿವಾಸಿಗಳು ಈ ಮಸೀದಿ ಕಟ್ಟಿಸುವಂತೆ ನಮ್ಮಲ್ಲಿ ಪ್ರಾರ್ಥಿಸಿದರು.
ನಮ್ಮ ತಾತನವರು ಈ ಪ್ರಾರ್ಥನೆಯನ್ನು ಮನ್ನಿಸಿ ಒಂದು ಮಸೀದಿಯನ್ನು ಕಟ್ಟಿಸಿ, ಬಡ ಪ್ರಯಾಣಿಕರಿಗಾಗಿ ಅಲ್ಲೊಂದು ಲಂಗಾರ್ ಖಾನಾ (ಭೋಜನ ಶಾಲೆ)ವನ್ನೂ ಕಟ್ಟಿಸಿ, ಅದರ ನಿರ್ವಹಣೆಗೆ ಸರಕಾರದ ಅನುದಾನವನ್ನೂ ಕಲ್ಪಿಸಿದರು. ಕಾಲ ಕಳೆದಂತೆ, ನಮ್ಮ ಮಹಮ್ಮದೀಯ ಸಮುದಾಯದ ಅಗತ್ಯಗಳಿಗೆ ಇಲ್ಲಿ ಸ್ಥಳಾವಕಾಶ ಸಾಲದಾಯಿತು. ಇದೇ ಕಾರಣಕ್ಕಾಗಿ ಇದು ನಿರುಪಯೋಗಿಯಾಗಿ ಜೀರ್ಣಾವಸ್ಥೆಗೆ ಬಂದಿತ್ತು. ಹತ್ತು ವರ್ಷಗಳ ಹಿಂದೆ ಇದರ ಜೀರ್ಣೋದ್ಧಾರದ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳಲಾಯಿತು. ಈಗ ನಮ್ಮ ಸರಕಾರದ ಇಂಜಿನಿಯರುಗಳ ಮೂಲಕ, ರೂ. 38,000 ಸರಕಾರಿ ಅನುದಾನದಲ್ಲಿ ಈ ಮಸೀದಿಯನ್ನು ಪುನರ್ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಸಾಕಷ್ಟು ಸಮಯ ತಗಲಿದೆ.
ಮುಂದಿನ ತಲೆಮಾರುಗಳಿಗೆ ಇದೊಂದು ಸ್ಫೂರ್ತಿಯ ಮೂಲವಾಗಿ, ಸದಾಶಯದ ತಾಣವಾಗಿ, ನಿಮ್ಮ ಧರ್ಮದಲ್ಲಿರುವ ಅತ್ಯುಚ್ಚ, ಅತ್ಯುತ್ತಮ ವಿಚಾರಗಳ ಕೇಂದ್ರವಾಗಿ ಉಳಿದು ಬಾಳಲಿ. ಇದು ನಿಮ್ಮೆಲ್ಲರಲ್ಲೂ ನಾನು ಮಾಡುವ ಪ್ರಾರ್ಥನೆ







