ಮಾನವ- ಕಾಡುಪ್ರಾಣಿಗಳ ಸಂಘರ್ಷಕ್ಕೆ ಪರಿಹಾರ ಹುಡುಕಿ: ಸಚಿವ ಉಮೇಶ್ ಕತ್ತಿ ಸಲಹೆ
ಪ್ರಗತಿ ಪರಿಶೀಲನೆ ಸಭೆ
ಉಡುಪಿ : ಇತ್ತೀಚಿನ ದಿನಗಳಲ್ಲಿ ಮಾನವ ಹಾಗೂ ಕಾಡುಪ್ರಾಣಿಗಳ ನಡುವೆ ಸಂಘರ್ಷಗಳು ಹೆಚ್ಚಾಗುವುದರ ಜೊತೆಗೆ ಪ್ರಾಣ ಹಾನಿ ಹಾಗೂ ಬೆಳೆ ಹಾನಿಗಳು ಸಂಭವಿಸುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಅರಣ್ಯ ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಅವರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಉಮೇಶ್ ಕತ್ತಿ ಮಾತನಾಡುತಿದ್ದರು.
ಸಾಮಾನ್ಯವಾಗಿ ಕಾಡುಪ್ರಾಣಿಗಳು ಅರಣ್ಯದಲ್ಲಿ ತಮಗೆ ಅಗತ್ಯವಿರುವ ಆಹಾರದ ಕೊರತೆಯಿಂದಾಗಿ ಕಾಡು ಬಿಟ್ಟು ನಾಡಿನ ಕಡೆಗೆ ವಲಸೆ ಬಂದು, ಬೆಳೆ ನಷ್ಟ ಉಂಟು ಮಾಡುವುದರ ಜೊತೆಗೆ ಪ್ರಾಣಹಾನಿಗಳನ್ನು ಮಾಡುತ್ತಿವೆ. ಕಾಡಿನಲ್ಲಿ ಅವುಗಳಿಗೆ ಅಗತ್ಯವಿರುವ ಹಣ್ಣು ಹಂಪಲು ಗಿಡಗಳು ಸೇರಿದಂತೆ ಇತರೆ ಪ್ರಾಣಿ ಭಕ್ಷ್ಯ ಗಿಡ ಮರಗಳನ್ನು ಬೆಳೆಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಕರಾವಳಿ ಭಾಗದಲ್ಲಿ ಮಳೆಯು ಹೆಚ್ಚಾಗಿ ಬರುವುದರಿಂದ ಗಿಡಮರಗಳನ್ನು ಬೆಳೆಸಲು ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಎಂದ ಅವರು ಉಪಯುಕ್ತವಲ್ಲದ ಅಕೇಶಿಯಾ ಗಿಡಗಳನ್ನು ಕಡಿಮೆ ಮಾಡುವುದರ ಜೊತೆಗೆ ಇತರೆ ಗಿಡಮರಗಳನ್ನು ಬೆಳಸಲು ಮುಂದಾಗಬೇಕು.ಈ ಸಂದರ್ಭದಲ್ಲಿ ಸ್ಥಳೀಯ ಜನರ ಆಭಿಪ್ರಾಯವನ್ನು ತೆಗೆದುಕೊಳ್ಳುವುದು ಒಳಿತು ಎಂದರು.
ಕಾಡುಪ್ರಾಣಿಗಳ ವಲಸೆಯನ್ನು ತಡೆಯಲು ಹಾಗೂ ಜನ ಜಾನುವಾರುಗಳು ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡುವುದನ್ನು ತಡೆಯಲು ನಿರ್ಮಿಸಿರುವ ಸೋಲಾರ್ ವಿದ್ಯುತ್ ಬೇಲಿಯ ಉಪಯೋಗ ಅಷ್ಠಾಗಿ ಕಂಡು ಬರುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು.ಈಗಾಗಲೇ ಅಳವಡಿಸಿರುವ ಸೋಲಾರ್ ತಂತಿಬೇಲಿಗಳ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಅರಣ್ಯ ವ್ಯಾಪ್ತಿಯ ಗ್ರಾಮಗಳಿಗೆ ಸಂಚಾರಕ್ಕೆ ಹಾಲಿ ಇರುವ ರಸ್ತೆಗಳ ಕಾಮಗಾರಿಗಳನ್ನು ಕೈಗೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶವಿದ್ದಲ್ಲಿ ಕೂಡಲೇ ಅವುಗಳ ನಿರ್ಮಾಣಕ್ಕೆ ಅನುಮತಿ ಕೊಡಬೇಕು ಎಂದರು.
ಪಡಿತರ ಚೀಟಿಗಳು: ಜಿಲ್ಲೆಯಲ್ಲಿ ೨೮,೫೯೩ ಅಂತ್ಯೋದಯ ಪಡಿತರ ಚೀಟಿಗಳಿದ್ದು, ೧,೫೦,೮೭೫ ಅಂತ್ಯೋದಯ ಸದಸ್ಯರು ಪಡಿತರವನ್ನು ಪಡೆಯು ತ್ತಿದ್ದಾರೆ. ೧,೫೫,೬೧೫ ಆದ್ಯತಾ ಪಡಿತರ ಚೀಟಿಗಳಿದ್ದು, ೬,೩೪,೩೬೬ ಸದಸ್ಯ ರುಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಂದ ಅವರು, ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಎಚ್ಚರವಹಿಸಬೇಕು. ಒಂದೊಮ್ಮೆ ಸಿಕ್ಕಿಬಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಪಡಿತರ ಚೀಟಿಗಳ ಇ-ಕೆವೈಸಿಯನ್ನು ಸಂಪೂರ್ಣವಾಗಿ ನೊಂದಣಿ ಮಾಡುವಂತೆ ಸೂಚನೆ ನೀಡಿದ ಅವರು, ಒಂದೊಮ್ಮೆ ನೋಂದಣಿ ಮಾಡದೆ ಇರುವ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗದು ಹಾಕಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಬೆಂಬಲ ಬೆಲೆ: ಬೆಂಬಲ ಬೆಲೆ ಯೋಜನೆಯಡಿ ಸ್ಥಳೀಯ ರೈತರು ಬೆಳಯುವ ಭತ್ತ ಖರೀದಿಯನ್ನು ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲೇ ಖರೀದಿ ಮಾಡ ಬೇಕೆಂಬುದು ಈ ಭಾಗದ ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಜೊತೆಗೆ ಇತರೆ ಪರ್ಯಾಯ ಮಾರ್ಗಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾತನಾಡಿ,ಈ ಹಿಂದೆ ಕಾಡಿನಲ್ಲಿ ಹೇರಳವಾಗಿ ಹಲಸು, ನೇರಳೆ ಸೇರಿದಂತೆ ಇತರ ಹಣ್ಣಿನ ಗಿಡಮರಗಳು, ಆನೆಗಳಿಗೆ ಅಗತ್ಯವಿದ್ದ ಬಿದಿರು, ಬೈನ ಸೇರಿದಂತೆ ವಿವಿಧ ಮರಗಳು ಹೇರಳ ವಾಗಿದ್ದವು. ಆದರೆ ಪ್ರಸ್ತುತ ಅವುಗಳು ಕಂಡುಬರುತ್ತಿಲ್ಲ. ಹಾಗಾಗಿ ಪ್ರಾಣಿಗಳು ಆಹಾರವನ್ನು ಅರಸಿ ಜನವಸತಿಗಳತ್ತ ಬರುತ್ತಿವೆ. ನೈಸರ್ಗಿಕವಾಗಿ ಅರಣ್ಯ ಪ್ರದೇಶ ದಲ್ಲಿ ಬೆಳಯುವ ಮರಗಿಡಗಳನ್ನು ಬೆಳೆಯಲು ಒತ್ತು ನೀಡುವುದು ಅವಶ್ಯ ಎಂದು ಸಲಹೆ ನೀಡಿದರು.
ಸ್ಥಳೀಯ ಜನರಿಗೆ ಪಡಿತರದಲ್ಲಿ ನೀಡುತ್ತಿರುವ ಅಕ್ಕಿಯನ್ನು ಹೆಚ್ಚಾಗಿ ಕರಾವಳಿ ಭಾಗದ ಜನರು ಬಳಸುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರುಗಳಿಗೆ ಕುಚ್ಚಿಗೆ ಅಕ್ಕಿಯನ್ನು ಪಡಿತರದಲ್ಲಿ ವಿತರಣೆ ಮಾಡಬೇಕೆಂದು ಶಾಸಕ ರಘುಪತಿ ಭಟ್ ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಅರಣ್ಯ ಇಲಾಖೆ ಅಧಿಕಾರಿ ಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.