ದೇಶದಲ್ಲಿ ಮತ್ತೊಂದು ಬಿಸಿ ಗಾಳಿಯ ಅಲೆ: ಹವಾಮಾನ ಇಲಾಖೆ ಎಚ್ಚರಿಕೆ

ಹೊಸದಿಲ್ಲಿ: ದೇಶದಲ್ಲಿ ಶನಿವಾರದಿಂದ ಮತ್ತೊಂದು ಉಷ್ಣಗಾಳಿ ಅಲೆ ಬೀಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ವಾಯುವ್ಯ ಹಾಗೂ ಕೇಂದ್ರ ಭಾರತದಲ್ಲಿ ಮೂರು ದಿನಗಳ ಕಾಲ ಉಷ್ಣಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ.
ಈ ಭಾಗದ ಬಹುತೇಕ ಕಡೆಗಳಲ್ಲಿ ತಾಪಮಾನ 42-44 ಡಿಗ್ರಿ ಸೆಲ್ಷಿಯಸ್ಗೆ ಏರಲಿದೆ. ಶನಿವಾರ ದೇಶದಲ್ಲೇ ಅತ್ಯಧಿಕ ಅಂದರೆ 45 ಡಿಗ್ರಿ ಸೆಲ್ಷಿಯಸ್ ತಾಪಮಾನ ಪಶ್ಚಿಮ ರಾಜಸ್ಥಾನದ ಬರ್ಮೇರ್ ನಲ್ಲಿ ದಾಖಲಾಗಿದೆ.
ಶನಿವಾರ ಹವಾಮಾನ ಮುನ್ಸೂಚನೆ ಬಿಡುಗಡೆ ಮಾಡಿರುವ ಇಲಾಖೆ, ಮುಂದಿನ ಮೂರು ದಿನಗಳಲ್ಲಿ ಗರಿಷ್ಠ ತಾಪಮಾನ 2-4 ಡಿಗ್ರಿ ಸೆಲ್ಷಿಯಸ್ ಹೆಚ್ಚಲಿದೆ. ದೇಶದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನದ ಏರಿಕೆ ಸಾಧ್ಯತೆ ಕಡಿಮೆ ಎಂದು ಸ್ಪಷ್ಟಪಡಿಸಿದೆ.
ವಿಧರ್ಭ ಪ್ರದೇಶದಲ್ಲಿ ಮೇ 11ರವರೆಗೂ ಉಷ್ಣಗಾಳಿಯ ವಾತಾವರಣ ಇರಲಿದೆ. ಪಶ್ಚಿಮ ರಾಜಸ್ಥಾನದಲ್ಲಿ ಮೇ 8-11ರವರೆಗೆ, ದಕ್ಷಿಣ ಹರ್ಯಾಣ ಮತ್ತು ಪೂರ್ವ ರಾಜಸ್ಥಾನದಲ್ಲಿ ಮೇ 9-11ರವರೆಗೆ, ಪಶ್ಚಿಮ ಮಧ್ಯಪ್ರದೇಶದಲ್ಲಿ ಮೇ 8-9 ಮತ್ತು ದಕ್ಷಿಣ ಪಂಜಾಬ್ ಮತ್ತು ಜಮ್ಮು ಪ್ರದೇಶದಲ್ಲಿ ಮೇ 10-11ರ ಅವಧಿಯಲ್ಲಿ ಉಷ್ಣಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ.





