ಮಂಗಳೂರು: ತ್ಯಾಜ್ಯ ನಿರ್ವಾಹಕರ ಸಮಾವೇಶ

ಮಂಗಳೂರು, ಮೇ 8: ಪ್ಲಾಸ್ಟಿಕ್ಸ್ ಫಾರ್ ಚೇಂಜ್, ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ರವಿವಾರ ನಗರದ ಪುರಭವನದಲ್ಲಿ ತ್ಯಾಜ್ಯ ನಿರ್ವಾಹಕರ ಸಮಾವೇಶ ನಡೆಯಿತು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಮನಪಾ ವಲಯ ಆಯುಕ್ತ ಶಬರೀನಾಥ್ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ 300-350 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಸಂಸ್ಕರಿಸಿ ನಿರ್ವಹಿಸುವುದು ದೊಡ್ಡ ಸವಾಲಾಗಿದೆ. ಆರಂಭದಲ್ಲೇ ತ್ಯಾಜ್ಯ ವಿಂಗಡಣೆಯು ಸಮರ್ಪಕವಾಗಿ ನಡೆದರೆ ಬಳಿಕ ಹೆಚ್ಚಿನ ಸಮಸ್ಯೆ ಆಗಲಾರದು ಎಂದು ಹೇಳಿದರು.
ಹಸಿ ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಘನ ತ್ಯಾಜ್ಯದ ಮರುಬಳಕೆ ಸಾಧ್ಯವಿದೆ. ಆದರೆ ಅದರ ಸಂಗ್ರಹಕ್ಕೆ ಸಾಕಷ್ಟು ಸ್ಥಳಾವಕಾಶ ಬೇಕು. ಅಲ್ಲದೆ ಸಂಗ್ರಹಿಸಿಟ್ಟ ಸ್ಥಳಕ್ಕೆ ಬೆಂಕಿ ಬೀಳುವ ಅಪಾಯವೂ ಇದೆ. ಘನತ್ಯಾಜ್ಯ ವಿಲೇವಾರಿಗೆ ಪ್ಲಾಸ್ಟಿಕ್ ಫಾರ್ ಚೇಂಜ್ನಂತಹ ಸಂಸ್ಥೆಗಳು ಸಹಕಾರಿಯಾಗಿದೆ ಎಂದು ಶಬರೀನಾಥ್ ಅಭಿಪ್ರಾಯಪಟ್ಟರು.
ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ವೈಜಯಂತಿ ಎಂ.ಚೌಗಲಾ ಮಾತನಾಡಿ ಪ್ಲಾಸ್ಟಿಕ್ ಫಾರ್ ಚೇಂಜ್ ಸಂಸ್ಥೆಯ ಮೂಲಕ ತಾಜ್ಯ ನಿರ್ವಾಹಕರ ಸಾಮಾಜಿಕ, ಆರ್ಥಿಕ, ನೃತಿ, ಶೈಕ್ಷಣಿಕ ಬೆಳವಣಿಗೆ, ಜೀವನ ಮಟ್ಟದಲ್ಲಿ ಸುಧಾರಣೆ ಆಗುತ್ತದೆ. ಪ್ಲಾಸ್ಟಿಕ್ ಸಂಗ್ರಹಣೆ, ನಿರ್ವಹಣೆ, ಮರುಬಳಕೆ ಕಾರ್ಯವೂ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಪ್ಲಾಸ್ಟಿಕ್ ಫಾರ್ ಚೇಂಜ್ ಸಂಸ್ಥೆಯ ಎಥಿಕಲ್ ಸೋರ್ಸಿಂಗ್ ಆ್ಯಂಡ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ನಿರ್ದೇಶಕ ಚಂದನ್ ಎಂ.ಸಿ. ಮಾತನಾಡಿ ಪ್ಲಾಸ್ಟಿಕ್ ಫಾರ್ ಚೇಂಜ್ ಸಂಸ್ಥೆಯು ತ್ಯಾಜ್ಯ ನಿರ್ವಾಹಕರ ಮೂಲಕ ಕಳೆದ ಎರಡು ವರ್ಷದಲ್ಲಿ 20,76,311 ಕೆ.ಜಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ ಮರು ಬಳಕೆ ಮಾಡಿದೆ. ತ್ಯಾಜ್ಯ ನಿರ್ವಾಹಕರಿಗೆ ಗುಜರಿ ಅಂಗಡಿಗಳಲ್ಲಿ ನ್ಯಾಯಯುತ ಬೆಲೆ ದೊರೆಯುವಂತೆ ಮಾಡಲಾಗಿದೆ.
ಮಂಗಳೂರು, ಉಡುಪಿ, ಕಾಸರಗೋಡು ವ್ಯಾಪ್ತಿಯ 54 ಗುಜರಿ ಅಂಗಡಿಗಳು ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದೆ. 302 ತ್ಯಾಜ್ಯ ಸಂಗ್ರಹಕಾರರು ಮತ್ತು 333 ಗುಜರಿ ಅಂಗಡಿಗಳ ವ್ಯಾಪಾರಿಗಳು ಸಂಸ್ಥೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪರಿಸರ) ದೀಪ್ತಿ ಎನ್. ಉಪಸ್ಥಿತರಿದ್ದರು. ಚರಿತ್ರಾ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು. ಉಷಾರಾಣಿ ವಂದಿಸಿದರು.










