ಅಡ್ಯಾರ್-ಕಣ್ಣೂರ್ನಲ್ಲಿ 'ಎನ್ಹಾನ್ಸ್ ಇಂಡಿಯಾ ಕಾನ್ಫರೆನ್ಸ್'

ಮಂಗಳೂರು, ಮೇ 8: ಎಸ್ಸೆಸ್ಸೆಫ್ ಸುವರ್ಣ ಮಹೋತ್ಸವದ ಅಂಗವಾಗಿ ದೇಶದ 20 ರಾಜ್ಯಗಳಲ್ಲಿ ರವಿವಾರ ಎನ್ಹಾನ್ಸ್ ಇಂಡಿಯಾ ಕಾನ್ಫರೆನ್ಸ್ ನಡೆದಿದ್ದು, ಕರ್ನಾಟಕದ ಸಮಾವೇಶವು ನಗರ ಹೊರವಲಯದ ಅಡ್ಯಾರ್ ಕಣ್ಣೂರು ಹೈಸಂ ಮೈದಾನ್ನಲ್ಲಿ ನಡೆಯಿತು.
ಸಂಯುಕ್ತ ಖಾಝಿ ಕುರ್ರತುಸ್ಸಾದಾತ್ ಝಲ್ ಕೋಯಮ್ಮ ತಂಙಳ್ ಕೂರತ್ ದುಆಃಗೈದರು.
ಕಾನ್ಫರೆನ್ಸ್ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ, ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಒಳ್ಳೆಯ ಅಂಶಗಳನ್ನು ಮೈಗೂರಿಸಿಕೊಂಡು ಪರಸ್ಪರ ಹಂಚಿ, ಸಹಕರಿಸಿ ಈ ಜಗತ್ತಿನಲ್ಲಿ ಮುನ್ನಡೆಯಬೇಕು. ಯಾವ ಕಾರಣಕ್ಕೂ ಅಹಂಕಾರವನ್ನು ಮನಸ್ಸಿನಲ್ಲಿಟ್ಟುಕೊಳ್ಳಬಾರದು. ಸ್ವಚ್ಛ ಮನಸ್ಸಿನಿಂದ ಸ್ವಚ್ಛ ಸಮಾಜವನ್ನು ನಿರ್ಮಿಸಲು ಪಣತೊಡಬೇಕು. ಸಮಾಜದ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಂಡು ನೈಜ ಮುಸ್ಲಿಮನಾಗಿ ಬಾಳಬೇಕು ಎಂದು ಕರೆ ನೀಡಿದರು.
ದಿಕ್ಸೂಚಿ ಭಾಷಣಗೈದ ಎಸ್ವೈಎಸ್ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಇತಿಹಾಸ ಪುಟದಲ್ಲಿ 50 ವರ್ಷಗಳನ್ನು ಬರೆದ ಎಸ್ಸೆಸ್ಸೆಫ್ ಬಲಿಷ್ಟ ವಿದ್ಯಾರ್ಥಿ ಸಂಘಟನೆಯಾಗಿದೆ. ಭಾರತ ಬಹುತ್ವದಿಂದ ಮುನ್ನಡೆಯಬೇಕು. ಅದಕ್ಕಾಗಿ ಎಸ್ಸೆಸ್ಸೆಫ್ ಸೌಹಾರ್ದವನ್ನು ಎತ್ತಿ ಹಿಡಿದು ಕಾರ್ಯಾಚರಿಸುತ್ತಿದೆ. ಭಾರತದಲ್ಲಿ ಇದೀಗ ಧರ್ಮಗಳ ಮಧ್ಯೆ ಸವಾಲುಗಳು ಕಾಣಿಸಿಕೊಂಡಿವೆ. ಅದನ್ನು ಶಾಂತಿಯುತವಾಗಿ ಬಗೆಹರಿಸಿ ಬಹುತ್ವದ ಭಾರತ ಕಟ್ಟಲು ಮುಂದಾಗಬೇಕು ಎಂದರು.
ದೇಶದ ಬಹುತ್ವ ಸಂಸ್ಕೃತಿಯ ಮೇಲೆ ಏಕ ಸಂಸ್ಕೃತಿಯ ದಾಳಿಯಾಗುತ್ತಿದೆ. ಅದರ ವಿರುದ್ಧ ಪ್ರಬುದ್ಧ ಯುವ ಸಮೂಹವನ್ನು ತಯಾರುಗೊಳಿಸಲು ಎಸೆಸ್ಸೆಫ್ ಆಹೋರಾತ್ರಿ ದುಡಿಯುತ್ತಿದೆ ಎಂದು ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಹೇಳಿದರು.
ಎಸ್ಸೆಸ್ಸೆಫ್ ಕರ್ನಾಟಕ ಅಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹುಸೈನ್ ಸಅದಿ ಧ್ವಜಾರೋಹಣಗೈದರು.
ಮರ್ಕಝ್ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ಕಲ್ಲಿಕೋಟೆ, ಅಂತಾರಾಷ್ಟ್ರೀಯ ಭಾಷಣಗಾರ ಶ್ರೀಲಂಕಾದ ಹಾಫಿಝ್ ಇಹ್ಸಾನ್ ಖಾದ್ರಿ ಮುಖ್ಯ ಪ್ರಭಾಷಣಗೈದರು.
ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಉಲಮಾ-ಉಮರಾಗಳಾದ ಅಸ್ಸಯ್ಯದ್ ಕಿಲ್ಲೂರು ತಂಙಳ್, ಸೈಯದ್ ಅಲವೀ ತಂಙಳ್, ಹಾಮೀಂ ತಂಙಳ್, ಮದಕ ತಂಙಳ್, ಜಾಬಿರ್ ತಂಙಳ್, ಎಸ್.ಪಿ. ಹಂಝ ಸಖಾಫಿ, ಅಬೂಸುಫ್ಯಾನ್ ಮದನಿ, ಸುಫಿಯಾನ್ ಸಖಾಫಿ, ಇಸ್ಮಾಯಿಲ್ ಸಖಾಫಿ ಕೊಡಂಗೇರಿ, ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಬ್ದುರ್ರಝಾಕ್ ಮದನಿ, ವಳವೂರು ಉಸ್ತಾದ್, ಖಾದರ್ ಸಖಾಫಿ ಮಂಜನಾಡಿ, ಶೇಖ್ ಬಾವ ಹಾಜಿ, ನವಾಝ್ ಹಾಜಿ ಬಳ್ಳಾರಿ, ಹೈಸಮ್ ಶಾಕಿರ್ ಹಾಜಿ, ಸ್ವಾದಿಕ್ ಮಾಸ್ಟರ್, ಸಲೀಂ ಕನ್ಯಾಡಿ, ರಹೀಂ ಸಅದಿ, ಹಾಫಿಲ್ ಸಅದಿ ಕೊಡಗು, ಅಬ್ದುಲ್ಲತೀಫ್ ಸಖಾಫಿ, ಸಿರಾಜುದ್ದೀನ್ ಸಖಾಫಿ, ಸುನ್ನಿ ಫೈಝಿ, ಜೆ.ಎಂ. ಕಾಮಿಲ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ಕೆ.ಎಂ. ಮುಸ್ತಫಾ ನಈಮಿ ವಂದಿಸಿದರು.