ಮಾಹಿತಿ ಹಕ್ಕು ಆಯುಕ್ತ ಸತ್ಯನ್ ಆರೋಪಿಯಷ್ಟೇ, ಅಪರಾಧಿಯಲ್ಲ: ರಾಜ್ಯಪಾಲರ ಸ್ಪಷ್ಟನೆ

ಬೆಂಗಳೂರು, ಮೇ 9: ಮೈಸೂರಿನ ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಸತ್ಯನ್ ಅವರನ್ನು ಮಾಹಿತಿ ಹಕ್ಕು ಆಯುಕ್ತರಾಗಿ ನೇಮಕ ಮಾಡಿರುವುದು ನ್ಯಾಯಸಮ್ಮತವಲ್ಲವೆಂದು ಅವರನ್ನು ತತ್ ಕ್ಷಣ ಹುದ್ದೆಯಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ನಿಯೋಗಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಹಿತಿ ಹಕ್ಕು ಆಯುಕ್ತ ಸತ್ಯನ್ ಆರೋಪಿಯಷ್ಟೆ, ಅಪರಾಧಿಯಲ್ಲ ಎಂದು ಸ್ಪಷ್ಟನೆ ನೀಡಿದರು.
ಇಂದು ನೈಜ ಹೋರಾಟಗಾರರ ವೇದಿಕೆ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರ, ಸಾಮಾಜಿಕ ಹೋರಾಟಗಾರರ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ರಾಜ್ಯ ಸಮಿತಿಯ ಪದಾಧಿಕಾರಿಗಳು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿಯಾಗಿ ಲೋಕಾಯುಕ್ತವು ಹೆಚ್ಚುವರಿ ಚರ-ಸ್ಥಿರ ಆಸ್ತಿಯನ್ನು ಗಳಿಸಿರುವ ಕಾರಣಕ್ಕಾಗಿ ಸಲ್ಲಿಸಿದ ಚಾರ್ಜ್ಶೀಟಿನ ಪ್ರಕರಣವು ಮೈಸೂರಿನ ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಸತ್ಯನ್ ಅವರನ್ನು ಮಾಹಿತಿ ಹಕ್ಕು ಆಯುಕ್ತರಾಗಿ ನೇಮಕ ಮಾಡಿರುವುದು ನ್ಯಾಯಸಮ್ಮತವಲ್ಲವೆಂದು ಅವರನ್ನು ತತ್ತಕ್ಷಣ ಹುದ್ದೆಯಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ಖಾಲಿ ಇರುವ ಲೋಕಾಯುಕ್ತ ಹುದ್ದೆಯನ್ನು ತತಕ್ಷಣ ಕನ್ನಡಿಗ ನ್ಯಾಯಮೂರ್ತಿ ಒಬ್ಬರನ್ನು ನೇಮಕ ಮಾಡುವಂತೆ ಸರಕಾರಕ್ಕೆ ನಿರ್ದೇಶನವನ್ನು ನೀಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್, ಬಿ.ಹೆಚ್. ವೀರೇಶ್, ಎಂ.ಜಿ. ವಾಸುದೇವಮೂರ್ತಿ, ಟಿ.ನರಸಿಂಹಮೂರ್ತಿ, ರಮೇಶ್ ಕುಣಿಗಲ್ ಮತ್ತು ನಾಗೇಶ್ವರರಾವ್ ಬಾಬು ಉಪಸ್ಥಿತರಿದ್ದರು.





