ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ : ಬಿಪಿಸಿಎಲ್ ಕೊಚ್ಚಿನ್ ಮುಡಿಗೆ ಪ್ರಶಸ್ತಿ

ಸುಳ್ಯ : ಅಂತಾರಾಷ್ಟ್ರೀಯ ಸ್ಟಾರ್ ಆಟಗಾರ ಜೆರೋಂ ವಿನೀತ್ ಅವರ ಸಿಡಿಲಬ್ಬರದ ಸ್ಮಾಶ್ಗಳು ಮತ್ತು ತಂಡದ ಸಂಘಟಿತ ಆಟದ ನೆರವಿನಿಂದ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಲ್ಲಿ ಬಿಪಿಸಿಎಲ್ ಕೊಚ್ಚಿನ್ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಫೈನಲ್ ಪಂದ್ಯದಲ್ಲಿ ವೀರೋಚಿತ ಹೋರಾಟ ನಡೆಸಿದ ಪೋಸ್ಟಲ್ ಕರ್ನಾಟಕ ತಂಡ ದ್ವಿತೀಯ ಸ್ಥಾನಿಯಾ ಯಿತು. ಯುನೈಟೆಡ್ ಸ್ಪೈಕರ್ಸ್ ಗುಜರಾತ್ ತೃತೀಯ ಮತ್ತು ಕೆಎಸ್ಇಬಿ ತಿರುವನಂತಪುರಂ ಚತುರ್ಥ ಸ್ಥಾನ ಪಡೆದುಕೊಂಡಿತು.
ರವಿವಾರ ತಡರಾತ್ರಿ ನಡೆದ 5 ಸೆಟ್ಗಳ ಮ್ಯಾರಥಾನ್ ಫೈನಲ್ ಪಂದ್ಯದಲ್ಲಿ ಬಿಪಿಸಿಎಲ್ 3-2 ಸೆಟ್ಗಳ ಅಂತರದಲ್ಲಿ ಪೋಸ್ಟಲ್ ಕರ್ನಾಟಕವನ್ನು ಮಣಿಸಿ ಕಪ್ ಎತ್ತಿತ್ತು. ಸ್ಕೋರ್: 25-20,21-25,25-17, 22-25,15-12.
ನಾಯಕ ಮುತ್ತುಸ್ವಾಮಿ ಸರ್ವ್ ನೊಂದಿಗೆ ಆರಂಭಗೊಂಡ ಪಂದ್ಯದ ಪ್ರಥಮ ಸೆಟ್ನಲ್ಲಿ ನಿರಂತರ ಎರಡು ಅಂಕಗಳೊಂದಿಗೆ ಶುಭಾರಂಭ ಮಾಡಿದ ಬಿಪಿಸಿಎಲ್ ಪರ ಜೆರೋಂ ವಿನೀತ್ ಶಕ್ತಿಶಾಲಿ ಹೊಡೆತ ಹಾಗು ಜಾನ್ ಜೋಸೆಪ್ ಅದ್ಭುತ ತಡೆ ಮೂಲಕ ಅಂಕ ಪಡೆದು 6-1 ಅಂತರದಲ್ಲಿ ಮುನ್ನಡೆ ಪಡೆದರು. ಕಾರ್ತಿಕ್ ನೇತೃತ್ವದಲ್ಲಿ ಸಂಘಟಿತ ಆಟದ ಪ್ರದರ್ಶಿಸಿದ ಕರ್ನಾಟಕ ಬೆನ್ನಟ್ಟಿ ಬಂದು 9-9, 10-10 ಸಮಬಲ ಸಾಧಿಸಿತು. ಆದರೆ ಜೆರೋಂ, ಜಾನ್ಜೋಸೆಫ್, ರೋಹಿತ್ ಅವರ ಪವರ್ ಸ್ಮಾಶ್ಗಳು, ಸಮಬಲದ ಹೋರಾಟ ಕಂಡರೂ ಪ್ರಥಮ ಸೆಟ್ 25-20 ಅಂತರದಲ್ಲಿ ಬಿಪಿಸಿಎಲ್ ಪಾಲಾಯಿತು.
ಆದರೆ ಎರಡನೇ ಸೆಟ್ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿದ ಕರ್ನಾಟಕ ಅಂಕ ಏರಿಸುತ್ತಾ ಸಾಗಿದರು. ಕಾರ್ತಿಕ್, ವರುಣ್ ಅವರ ಹೊಡೆತಗಳು, ಬ್ಲಾಕ್ಗಳು ಪೋಸ್ಟಲ್ ತಂಡಕ್ಕೆ ಮುನ್ನಡೆ ಒದಗಿಸಿತು. ಜೆರೋಂ, ಜಾನ್ ಜೋಸೆಫ್ ಅತ್ಯುತ್ತಮ ಹೊಡೆತಗಳ ಮೂಲಕ ಎರಡನೇ ಸೆಟ್ನಲ್ಲೂ ಮಿಂಚಿದರು. ಮುನ್ನಡೆ ಕಾಯ್ದುಕೊಂಡು ಮುನ್ನುಗ್ಗಿದ ಕರ್ನಾಟಕ ಎರಡನೇ ಸೆಟ್ 25-21ಅಂಕಗಳ ಅಂತರದಲ್ಲಿ ಗೆದ್ದುಕೊಂಡಿತು. ಮೂರನೇ ಸೆಟ್ನಲ್ಲಿಯೂ ಬಿಪಿಸಿಎಲ್ ಪರಾಕ್ರಮ ಮುಂದುವರಿಯಿತು. ಆರಂಭದಲ್ಲಿಯೇ ಮುನ್ನಡೆ ಕಾಯ್ದಕೊಂಡ ಬಿಪಿಸಿಎಲ್ ಪರ ಜೆರೋಂ ಸತತ ಬಲಶಾಲಿ ಹೊಡೆತಗಳ ಮೂಲಕ ಅಂಕಣದಲ್ಲಿ ಸಂಚಲನ ಸೃಷ್ಠಿಸಿದರು. ಅಂತಿಮವಾಗಿ ಮೂರನೇ ಸೆಟ್ 25-17 ಅಂತರದಲ್ಲಿ ಗೆದ್ದು ಬಿಪಿಸಿಎಲ್ 2-1 ಅಂತರದ ನಿರ್ಣಾಯಕ ಮುನ್ನಡೆ ಪಡೆಯಿತು.
ನಾಲ್ಕನೇ ಸೆಟ್ನಲ್ಲಿ ಅತ್ಯುತ್ತಮ ಆಟದ ಮೂಲಕ ಕರ್ನಾಟಕ ತಂಡ ತಿರುಗಿಬಿದ್ದಿತು. ಕರ್ನಾಟಕ ಮತ್ತು ಬಿಪಿಸಿಲ್ ತಂಡಗಳು ತಮ್ಮ ಅತ್ಯುತ್ತಮ ಆಟ ಹೊರ ತೆಗೆದಾಗ ಪಂದ್ಯ ಸಮಬಲದಲ್ಲಿ ಹಾಗು ಅತ್ಯಂತ ರೋಚಕವಾಗಿ ಮುಂದುವರಿಯಿತು. 6-6, 7-7, 13-13,17-17, 19-19,20-20 ರೋಮಾಂಚನಕಾರಿಯಾಗಿ ಸಾಗಿದ ಮ್ಯಾರಥಾನ್ ಸೆಟ್ ಪ್ರೇಕ್ಷಕರಿಗೆ ವಾಲಿಬಾಲ್ನ ರಸಾನುಭವ ನೀಡಿತು. ಅಂತಿಮವಾಗಿ 25-22 ಅಂಕಗಳೊಂದಿಗೆ ಕರ್ನಾಟಕ ಸೆಟ್ ಗೆದ್ದುಕೊಂಡಿತು. 2-2 ಸೆಟ್ಗಳೊಂದಿಗೆ ಐದನೇ ಸೆಟ್ಗಿಳಿದ ಬಿಪಿಸಿಎಲ್ ಆಟಗಾರರು ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದರು.ಇದಕ್ಕೆ ಪೋಸ್ಟಲ್ ತಂಡ ಕೂಡ ತಕ್ಕ ಉತ್ತರ ನೀಡಿದಾಗ ಕೊನೆಯ ಸೆಟ್ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು.
ಜೆರೋಂ, ಜಾನ್ ಶಕ್ತಿಶಾಲಿ ಹೊಡೆತಗಳಿಗೆ ಅಂಕಣ ಮತ್ತೆ ಮತ್ತೆ ಸಾಕ್ಷಿಯಾದರೆ ಕಾರ್ತಿಕ್ ಮತ್ತು ತಂಡ ಭರ್ಜರಿ ತಡೆಗೋಡೆ ನಿರ್ಮಿಸಿ ಕರ್ನಾಟಕವೂ ಎಚ್ಚರಿಕೆಯ ಆಟವಾಡಿದರು. ಆರಂಭದಿಂದಲೂ ಬಿಪಿಸಿಎಲ್ ಮುನ್ನಡೆ ಕಾಯ್ದುಕೊಂಡಿತು. 10-6, 11-7,11-8,11-9,12-9,13-1013-11, 14-12 ನೆಲೆಯಲ್ಲಿ ಮುಂದುವರಿದು 15-12 ಅಂಕದಲ್ಲಿ ಬಿಪಿಸಿಎಲ್ ಕೊಚ್ಚಿನ್ ಸೆಟ್ ಮತ್ತು ಪಂದ್ಯ ಗೆದ್ದು ಕಪ್ ಎತ್ತಿತು.
ಪುರುಷ ವಿಭಾಗದಲ್ಲಿ ಯುನೈಟೆಡ್ ಸ್ಪೈಕರ್ಸ್ ಗುಜರಾತ್ ತೃತೀಯ ಸ್ಥಾನ ಮತ್ತು ಕೆಎಸ್ಇಬಿ ತಿರುವನಂತಪುರಂ ಚತುರ್ಥ ಸ್ಥಾನ ಪಡೆದುಕೊಂಡಿತು. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ಪೈಕರ್ಸ್ ತಂಡ ಕೆಎಸ್ಇಬಿ ತಂಡವನ್ನು ನೇರ ಸೆಟ್ಗಳಿಂದ (25-16, 25-19, 26-24) ಸೋಲಿಸಿ ಪಂದ್ಯ ಗೆದ್ದುಕೊಂಡಿತು.







