ಬಿಹಾರದ ನಿರ್ಮಾಣಹಂತದಲ್ಲಿರುವ ಸೇತುವೆ ಕುಸಿತಕ್ಕೆ ಅಧಿಕಾರಿಯ ಉತ್ತರ ಕೇಳಿ ಆಶ್ಚರ್ಯಚಕಿತರಾದ ನಿತಿನ್ ಗಡ್ಕರಿ
ಹೊಸದಿಲ್ಲಿ: ಸುಲ್ತಾನ್ ಗಂಜ್ನಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆ ಸೇತುವೆಯ ಒಂದು ಭಾಗ ಕುಸಿದು ಬಿದ್ದಿರುವುದಕ್ಕೆ 'ಜೋರಾಗಿ ಬೀಸಿದ ಗಾಳಿ' ಕಾರಣ ಎಂದು ಐಎಎಸ್ ಅಧಿಕಾರಿಯೊಬ್ಬರು ನೀಡಿದ ಉತ್ತರಕ್ಕೆ ತಾನು ಆಶ್ಚರ್ಯಚಕಿತನಾಗಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.
ಬಿಹಾರದ ಸುಲ್ತಾನ್ ಗಂಜ್ ನಲ್ಲಿ ಗಂಗಾನದಿಯ ಮೇಲೆ ನಿರ್ಮಾಣ ಹಂತದಲ್ಲಿರುವ ರಸ್ತೆ ಸೇತುವೆಯ ಒಂದು ಭಾಗವು ಎಪ್ರಿಲ್ 29 ರಂದು ಗುಡುಗು-ಸಿಡಿಲು ಸಹಿತ ಗಾಳಿ-ಮಳೆಗೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.
"ಎಪ್ರಿಲ್ 29 ರಂದು ಬಿಹಾರದಲ್ಲಿ ಸೇತುವೆ ಕುಸಿದು ಬಿದ್ದಿದೆ. ಇದಕ್ಕೆ ಕಾರಣವೇನೆಂದು ನಾನು ನನ್ನ ಕಾರ್ಯದರ್ಶಿಯನ್ನು ಕೇಳಿದೆ. ಅವರು (ಕಾರ್ಯದರ್ಶಿ) ಇದಕ್ಕೆ ಜೋರಾಗಿ ಬೀಸಿದ ಗಾಳಿ ಕಾರಣ ಎಂದು ಹೇಳಿದರು’’ ಎಂದು ಗಡ್ಕರಿ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಐಎಎಸ್ ಅಧಿಕಾರಿಯೊಬ್ಬರು ಇಂತಹ ವಿವರಣೆಯನ್ನು ಹೇಗೆ ನಂಬುತ್ತಾರೆ ಎಂದು ನನಗೆ ಆಶ್ಚರ್ಯವಾಯಿತು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೇಳಿದರು.
"ಬಲವಾದ ಗಾಳಿಯಿಂದ ಸೇತುವೆಯು ಹೇಗೆ ಕುಸಿಯುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಕೆಲವು ದೋಷವಿರಬೇಕು . ಇದು ಸೇತುವೆಯ ಕುಸಿತಕ್ಕೆ ಕಾರಣವಾಯಿತು'' ಎಂದು ತಮ್ಮ ಸ್ಪಷ್ಟ ದೃಷ್ಟಿಕೋನಗಳಿಗೆ ಹೆಸರುವಾಸಿಯಾದ ಗಡ್ಕರಿ ಹೇಳಿದರು.