ಸಂರಕ್ಷಿತ ಸ್ಮಾರಕದಲ್ಲಿ ಜಮ್ಮುಕಾಶ್ಮೀರ ಲೆ.ಗವರ್ನರ್ ಭಾಗವಹಿಸಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಪುರಾತತ್ವ ಇಲಾಖೆ ಆಕ್ಷೇಪ

Photo: Twitter/manojsinha
ಹೊಸದಿಲ್ಲಿ: ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಎಂಟನೇ ಶತಮಾನದ ಮಾರ್ತಂಡ್ ಸೂರ್ಯ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದ ಬಗ್ಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
ರವಿವಾರ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾಗವಹಿಸಿದ್ದರು. ದೇವಳಕ್ಕೆ ಭೇಟಿ ನೀಡಿದ ಅನುಭವವನ್ನು ʼದೈವಿಕʼ ಎಂದು ಬಣ್ಣಿಸಿದ್ದ ಅವರು ಪ್ರಾಚೀನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಕ ಮಹತ್ವದ ಕ್ಷೇತ್ರಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ತಾವು ಬದ್ಧ ಎಂದು ಅವರು ಹೇಳಿದ್ದರು.
ಈ ಕಾರ್ಯಕ್ರಮ ಆಯೋಜಿಸುವ ಮುಂಚೆ ಇಲಾಖೆಯ ಅನುಮತಿ ಕೇಳಿಲ್ಲ ಎಂದು ಹೇಳಿರುವ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ಕುರಿತು ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿಗೂ ಮಾಹಿತಿ ನೀಡಿದೆ.
ಅಲ್ಲಿ ಪ್ರಾರ್ಥನೆಗೂ ಅನುಮತಿ ಕೇಳಿರಲಾಗಿಲ್ಲ, ಲೆಫ್ಟಿನೆಂಟ್ ಗವರ್ನರ್ ಅವರು ದೇವಸ್ಥಾದ ಹೊರಗೆ ಪ್ರಾರ್ಥನೆ ಸಲ್ಲಿಸಿದ್ದರೂ ಅದು ಕೂಡ ನಿಯಮಗಳ ಉಲ್ಲಂಘನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ, ಅಲ್ಲಿ ಕಾರ್ಯಕ್ರಮ ಆಯೋಜಿಸಲು ಪೂರ್ವಾನುಮತಿ ಅಗತ್ಯವಿಲ್ಲ ಎಂದು ಜಮ್ಮು ಕಾಶ್ಮಿರ ಆಡಳಿತ ಹೇಳಿದೆ.
ಪ್ರಾಚೀನ ಸ್ಮಾರಕ ರಕ್ಷಣೆ ಕಾಯಿದೆ ನಿಯಮಗಳ ಪ್ರಕಾರ ಮಾನ್ಯತೆ ಪಡೆದ ಧಾರ್ಮಿಕ ಪದ್ಧತಿಗಳಿಗೆ ಅನುಮತಿಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನಿರ್ದಿಷ್ಟ ದೇವಸ್ಥಾನ ದೇಶದಲ್ಲಿರುವ ಪ್ರಾಚೀನ ಸೂರ್ಯ ದೇವಾಲಯಗಳಲ್ಲಿ ಒಂದಾಗಿದ್ದು ಪುರಾತತ್ವ ಸವೇಕ್ಷಣಾ ಇಲಾಖೆ ಇದನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.