ಮೋದಿ ಶ್ರೀಮಂತ್ರಿಗೆ ಮತ್ತು ಬಡವರಿಗಾಗಿ ಎರಡು ಭಾರತವನ್ನು ಸೃಷ್ಟಿಸಿದ್ದಾರೆ: ರಾಹುಲ್ ಗಾಂಧಿ
![ಮೋದಿ ಶ್ರೀಮಂತ್ರಿಗೆ ಮತ್ತು ಬಡವರಿಗಾಗಿ ಎರಡು ಭಾರತವನ್ನು ಸೃಷ್ಟಿಸಿದ್ದಾರೆ: ರಾಹುಲ್ ಗಾಂಧಿ ಮೋದಿ ಶ್ರೀಮಂತ್ರಿಗೆ ಮತ್ತು ಬಡವರಿಗಾಗಿ ಎರಡು ಭಾರತವನ್ನು ಸೃಷ್ಟಿಸಿದ್ದಾರೆ: ರಾಹುಲ್ ಗಾಂಧಿ](https://www.varthabharati.in/sites/default/files/images/articles/2022/05/10/334686-1652200484.jpg)
ದಾಹೋದ್, ಮೇ 10: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಭಾರತವನ್ನು ಸೃಷ್ಟಿಸಿದ್ದಾರೆ. ಒಂದು ಶ್ರೀಮಂತರಿಗೆ ಹಾಗೂ ಇನ್ನೊಂದು ಬಡವರಿಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಈ ವರ್ಷ ಗುಜರಾತ್ನಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ತಮ್ಮ ಪಕ್ಷದ ಪ್ರಚಾರ ‘ಆದಿವಾಸಿ ಸತ್ಯಾಗ್ರಹ ರ್ಯಾಲಿ’ಯನ್ನು ಬುಡಕಟ್ಟು ದಾಹೋದ್ ಜಿಲ್ಲೆಯಲ್ಲಿ ಆರಂಭಿಸಿದ ರಾಹುಲ್ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ‘‘2014ರಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಆದರು. ಅದಕ್ಕಿಂತ ಮುನ್ನ ಅವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ನಲ್ಲಿ ಅವರು ಕೆಲಸ ಪ್ರಾರಂಭಿಸಿದ್ದರು, ಈಗ ಅದು ದೇಶದಲ್ಲಿ ನಡೆಯುತ್ತಿದೆ. ಇದನ್ನು ಗುಜರಾತ್ ಮಾದರಿ ಎಂದು ಹೇಳಲಾಗುತ್ತಿದೆ’’ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
‘‘ಇಂದು ಎರಡು ರೀತಿಯ ಭಾರತವನ್ನು ಸೃಷ್ಟಿಸಲಾಗಿದೆ. ಒಂದು ಶ್ರೀಮಂತರ ಭಾರತ. ಇನ್ನೊಂದು ಬಡವರ ಭಾರತ. ಕೆಲವು ಆಯ್ಕೆಯ ಜನರು ಕೋಟ್ಯಧಿಪತಿಗಳು ಹಾಗೂ ಅಧಿಕಾರಶಾಹಿಗಳು. ಅವರಲ್ಲಿ ಅಧಿಕಾರ ಹಾಗೂ ಹಣ ಇದೆ’’ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಎರಡು ರೀತಿಯ ಭಾರತವನ್ನು ಬಯಸುವುದಿಲ್ಲ. ಬಿಜೆಪಿಯ ಮಾದರಿಯಲ್ಲಿ ಬುಡಕಟ್ಟು ಹಾಗೂ ಇತರ ಬಡ ಜನರಿಗೆ ಸೇರಿದ ನೀರು, ಅರಣ್ಯ ಹಾಗೂ ಭೂಮಿಯಂತಹ ಸಂಪನ್ಮೂಲಗಳನ್ನು ಕೆಲವೇ ಜನರಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಬುಡಕಟ್ಟು ಜನರ ಹಕ್ಕು ವಂಚಿತರನ್ನಾಗಿ ಮಾಡಿದೆ. ಬಿಜೆಪಿ ಸರಕಾರ ಅವರಿಗೆ ಏನನ್ನೂ ನೀಡುತ್ತಿಲ್ಲ. ಆದರೆ, ಅವರಿಂದ ಎಲ್ಲವನ್ನೂ ಕಿತ್ತುಕೊಳ್ಳುತ್ತಿದೆ. ನೀವು ನಿಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಬೇಕು. ಆಗ ಮಾತ್ರ ನೀವು ನಿಮ್ಮ ಹಕ್ಕುಗಳನ್ನು ಪಡೆಯುತ್ತೀರಿ ಎಂದು ರಾಹುಲ್ ಗಾಂಧಿ ಹೇಳಿದರು.