ರೈತರ ಬದಲು ಅಜಯ್ ಮಿಶ್ರಾಗೆ ಬೆಂಬಲ ನೀಡಿದ ಮೋದಿ ಸರಕಾರ: ಪ್ರಿಯಾಂಕಾ ಗಾಂಧಿ
![ರೈತರ ಬದಲು ಅಜಯ್ ಮಿಶ್ರಾಗೆ ಬೆಂಬಲ ನೀಡಿದ ಮೋದಿ ಸರಕಾರ: ಪ್ರಿಯಾಂಕಾ ಗಾಂಧಿ ರೈತರ ಬದಲು ಅಜಯ್ ಮಿಶ್ರಾಗೆ ಬೆಂಬಲ ನೀಡಿದ ಮೋದಿ ಸರಕಾರ: ಪ್ರಿಯಾಂಕಾ ಗಾಂಧಿ](https://www.varthabharati.in/sites/default/files/images/articles/2022/05/10/334688-1652200575.jpg)
ಹೊಸದಿಲ್ಲಿ, ಮೇ 10: ಲಖಿಂಪುರ ಖೇರಿ ‘ರೈತರ ಹತ್ಯಾಕಾಂಡ’ದ ಅತಿ ಮುಖ್ಯ ಅಂಶವೆಂದರೆ ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರು ಬೆದರಿಕೆಯ ಭಾಷಣ ಮಾಡಿರುವುದು ಹಾಗೂ ಬಿಜೆಪಿ ಸರಕಾರ ರೈತರ ಬೆಂಬಲಕ್ಕೆ ನಿಲ್ಲದೆ ಅವರ ಬೆಂಬಲಕ್ಕೆ ನಿಂತಿರುವುದು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಹೇಳಿದ್ದಾರೆ.
ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಗಳು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬಾರದು. ತಮ್ಮ ಸ್ಥಾನಮಾನ ಹಾಗೂ ಹುದ್ದೆಯ ಘನತೆಗೆ ತಕ್ಕ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಹೇಳಿದ ಒಂದು ದಿನದ ಬಳಿಕ ಪ್ರಿಯಾಂಕಾ ಗಾಂಧಿ ಮೋದಿ ಸರಕಾರದ ವಿರುದ್ಧ ಈ ವಾಗ್ದಾಳಿ ನಡೆಸಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸಂದರ್ಭ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಿಂದಿಯಲ್ಲಿ ಮಾಡಿದ ಟ್ವೀಟ್ ಮಾಡಿದ ಪ್ರಿಯಾಂಕಾ ಗಾಂಧಿ, ‘‘ಲಖಿಂಪುರಖೇರಿ ರೈತರ ಹತ್ಯಾಕಾಂಡ’’ದ ಬಹುಮುಖ್ಯ ಅಂಶ ಅಜಯ್ ಮಿಶ್ರಾ ಅವರ ಭಾಷಣ ಹಾಗೂ ರೈತರಿಗೆ ಬೆದರಿಕೆ ಒಡ್ಡಿರುವುದು. ಬಿಜೆಪಿ ಸರಕಾರ ರೈತರಿಗೆ ಬೆಂಬಲವಾಗಿ ನಿಲ್ಲುವ ಬದಲು ತನ್ನ ಸಚಿವನಿಗೆ ಬೆಂಬಲವಾಗಿ ನಿಂತಿತು ಎಂದಿದ್ದಾರೆ.
ಅಲ್ಲದೆ, ನ್ಯಾಯಾಲಯದ ಪ್ರತಿಪಾದನೆ ಕುರಿತ ಮಾಧ್ಯಮ ವರದಿಯನ್ನು ಟ್ವೀಟ್ನೊಂದಿಗೆ ಲಗತ್ತೀಕರಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ. ಸಂತ್ರಸ್ತ ರೈತರ ಕುಟುಂಬಗಳು ಹಾಗೂ ಎಲ್ಲರೂ ಸಂಘಟಿತರಾಗಿ ನ್ಯಾಯ ಎಂಬ ಬೆಂಕಿಯನ್ನು ಆರಲು ಬಿಡಲಾರೆವು ಎಂದು ಪ್ರಿಯಾಂಕಾ ಗಾಂಧಿ ಪ್ರತಿಪಾದಿಸಿದ್ದಾರೆ.