ಸುಳ್ಯ ನಗರ ಪಂಚಾಯತ್ ಎದುರಿನ ಕಸ: ನಟ ಅನಿರುದ್ಧ್ ವೀಡಿಯೊ ವೈರಲ್

ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ಹಲವು ವರ್ಷಗಳಿಂದ ತುಂಬಿರುವ ಕಸದ ರಾಶಿಯ ಬಗ್ಗೆ ಚಲನಚಿತ್ರ ನಟ ಹಾಗು ಕಿರು ತೆರೆಯ ನಟ ಅನಿರುದ್ಧ್ ಹೇಳಿಕೆ ಭಾರೀ ವೈರಲ್ ಆಗಿದೆ.
ಸುಳ್ಯದ ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿಯ ನಿರ್ದೇಶಕ ಹಾಗು ಬಿಜೆಪಿ ಮಂಡಲ ಸಾಮಾಜಿಕ ಜಾಲತಾಣ ವಿಭಾಗದ ಸಹ ಸಂಚಾಲಕ ಸುಪ್ರೀತ್ ಮೋಂಟಡ್ಕ ಅವರು ನಗರ ಪಂಚಾಯಿತಿ ಎದುರಿನ ಕಸದ ಚಿತ್ರಗಳನ್ನು ಅನಿರುದ್ಧ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿದ ಚಿತ್ರ ನಟ ಅನಿರುದ್ಧ್ ಅವರು ಹೇಳಿಕೆ ನೀಡಿದ್ದು ನಗರ ಪಂಚಾಯಿತಿ ಕಸದ ರಾಶಿ ಬೆಟ್ಟದ ಹಾಗೆ ಇದೆ. ಹಲವು ವರ್ಷಗಳಿಂದ ಅದಕ್ಕೆ ಪರಿಹಾರ ಕಂಡುಕೊಂಡಿಲ್ಲ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಇದನ್ನು ತೆರವು ಮಾಡಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಕಳಕಳಿಯಿಂದ ವಿನಂತಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತಿದೆ.
ಅನಿರುದ್ಧ್ ವೀಡಿಯೋ ವೈರಲ್ ಆಗುತ್ತಿದ್ದಂತೆ ಆ ವೀಡಿಯೋವನ್ನು ಬಿಜೆಪಿ ಮಾಧ್ಯಮ ವಾಟ್ಸಾಪ್ ಗ್ರೂಪ್ನಲ್ಲಿ ಸುಪ್ರೀತ್ ಹಂಚಿಕೊಂಡರು. ಕೂಡಲೇ ಬಿಜೆಪಿ ಮಂಡಲ ಪ್ರಧಾನ ಸುಬೋದ್ ಶೆಟ್ಟಿ ಮೇನಾಲ ಸುಪ್ರೀತ್ ಮೋಂಟಡ್ಕ ಅವರನ್ನು ಬಿಜೆಪಿ ಮಾಧ್ಯಮ ಗ್ರೂಪ್ನಿಂದ ರಿಮೂವ್ ಮಾಡಲಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕನೇ ಮಾಧ್ಯಮ ಗ್ರೂಪ್ನಿಂದ ಔಟ್ ಆಗಿರುವುದು ಕೂಡ ಈಗ ಚರ್ಚೆಗೆ ಕಾರಣವಾಗಿದೆ.