Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾತು ಮೀರಿದ ಕ್ರಿಯಾರೂಪ

ಮಾತು ಮೀರಿದ ಕ್ರಿಯಾರೂಪ

ಬರಗೂರು ರಾಮಚಂದ್ರಪ್ಪಬರಗೂರು ರಾಮಚಂದ್ರಪ್ಪ11 May 2022 11:23 AM IST
share
ಮಾತು ಮೀರಿದ ಕ್ರಿಯಾರೂಪ

ಲೋಕೇಶ ಅಗಸನಕಟ್ಟೆಯವರ ‘ವೈಷ್ಣವ ಜನತೋ’ ಕಾದಂಬರಿಯು ಗ್ರಾಮೀಣ ಕೇಂದ್ರಿತ ವಸ್ತುವಿನ ಮೂಲಕವೇ ದೇಶವ್ಯಾಪಿ ತಾತ್ವಿಕತೆಯತ್ತ ಸಾಗುವ ಅಂತರ್ಮುಖಿ ಚಲನೆಯನ್ನು ಒಳಗೊಂಡಿದೆ. ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಕೃತಿಯಾದ್ದರಿಂದ ಇದೊಂದು ಪ್ರಾದೇಶಿಕ ಪ್ರಧಾನತೆಯ ಕಾದಂಬರಿಯೆಂದು ಮೇಲ್ನೋಟಕ್ಕೆ ಅನ್ನಿಸುವುದು ಸಹಜವಾದರೂ, ಪ್ರಾದೇಶಿಕ ಸೊಗಡಿನ ಸಂಭ್ರಮದಲ್ಲಿ - ಮುಳುಗಿ ಹೋಗುವುದಿಲ್ಲವೆಂಬುದು ಗಮನಿಸಲೇ ಬೇಕಾದ ಸಂಗತಿಯಾಗಿದೆ. ಕನ್ನಡದಲ್ಲಿ ಪ್ರಾದೇಶಿಕ ಪರಂಪರೆಯನ್ನು ಕಟ್ಟಿಕೊಟ್ಟ ವಿವಿಧ ಮಾದರಿಯ ಕಾದಂಬರಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಮಾತು ಹೇಳುತ್ತಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಯೂರಿದ ಸಾಮಾಜಿಕ ಸಾಂಸ್ಕೃತಿಕ ನಮೂನೆಗಳನ್ನು ನಲಿವಿನಿಂದ ನಿರೂಪಿಸಿದ ಕೃತಿಗಳು ಕೂಡ ನಮ್ಮಲ್ಲಿವೆ. ಈ ಮಾದರಿಯ ಕೃತಿಗಳು ಊಳಿಗಮಾನ್ಯ ಪದ್ಧತಿಯ ಪ್ರಾದೇಶಿಕ ‘ವೈಭವ’ವನ್ನು ಮನತುಂಬಿಸಿಕೊಂಡು ಮಾತಾಡುತ್ತವೆ.

‘ವೈಭವ’ದ ಜೊತೆಗೆ ಒಳವಿಷಾದದ ಎಳೆ ಇರುವುದಿಲ್ಲ. ಸಮೃದ್ಧಿಯ ಸಂಕೇತಗಳಲ್ಲಿ ಸುಖಿಸುವ ಮನೋಧರ್ಮವನ್ನು ಇಂಥ ರಚನೆಗಳಲ್ಲಿ ಕಾಣಬಹುದು. ಇನ್ನು ಕೆಲವು ಕೃತಿಗಳಲ್ಲಿ ವಿಷಾದದ ಎಳೆಯೊಂದು ಬೆಳೆದಿರುವುದುಂಟು; ಆದರೆ ಈ ವಿಷಾದವು ಬದುಕಿನ ಬವಣೆಗಳನ್ನು ಕಂಡು ಕರುಳಲ್ಲಿ ಕೆಂಡ ಕಟ್ಟಿಕೊಂಡು ಹುಟ್ಟಿರುವುದಿಲ್ಲ; ಬದಲಾಗಿ, ಗ್ರಾಮೀಣ ಪ್ರದೇಶದ ರೂಢಮೂಲ ಮೌಲ್ಯಗಳು ಕರಗುತ್ತಿವೆಯೆಂಬ ಕೊರಗಿನಿಂದ ಹುಟ್ಟಿದ ವಿಷಾದವಾಗಿರುತ್ತದೆ. ಇಂಥ ವಿಷಾದದಲ್ಲಿ ಹಳಹಳಿಕೆಯ ಭಾವವೇ ಪ್ರಧಾನವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಊಳಿಗಮಾನ್ಯ ಪದ್ಧತಿಯ ಪ್ರಾದೇಶಿಕ ಕಟ್ಟಡ ಕುಸಿಯುತ್ತಿದೆಯೆಂದೂ ‘ಸಮೃದ್ಧಿ’ಯು ಸೊರಗಿ ಸೋರಿಹೋಗುತ್ತಿದೆ ಎಂದೂ ಸಂಕಟಪಡುವ ಪ್ರವೃತ್ತಿಯು ಹಳಹಳಿಕೆಯ ಅಂತರ್ಗತ ಅನುಭವವಾಗಿರುತ್ತದೆ. ಎಪ್ಪತ್ತರ ದಶಕದಿಂದ ಗ್ರಾಮೀಣ ಪ್ರಾದೇಶಿಕ ಬದುಕನ್ನು ಕಂಡುಕೊಳ್ಳುವ ಕ್ರಮ ಬದಲಾಗಿದೆ; ಬದಲಾಗುತ್ತಿರುವ ಗ್ರಾಮೀಣ ಬದುಕನ್ನು ಸಾಮಾಜಿಕ ನೆಲೆಗಳ ಮೂಲಕ ಪರಿಶೀಲಿಸುವ ಕ್ರಮದ ಜೊತೆಗೆ ‘ಸಮೃದ್ಧಿ’ಯ ಕಲ್ಪನೆಯೇ ಹುಸಿಯೆಂದು ಅನಾವರಣಗೊಳಿಸುವ ಆಯಾಮವೊಂದು ಕನ್ನಡ ಕಥನ ಲೋಕಕ್ಕೆ ಲಭ್ಯವಾಗಿದೆ. ಊಳಿಗಮಾನ್ಯ ಗ್ರಾಮೀಣ ವ್ಯವಸ್ಥೆಯೊಳಗಿನ ವೈರುಧ್ಯ ಮತ್ತು ವಿವಿಧ ಸಾಮಾಜಿಕ ಸಮುದಾಯಗಳ ಬದುಕಿನ ಚಹರೆಗಳನ್ನು ದಾಖಲಿಸುತ್ತಲೇ ಮುಖಾಮುಖಿಯಾಗುವ ಮನೋಧರ್ಮವೊಂದನ್ನು ಇಂತಹ ಕಥನಗಳಲ್ಲಿ ಕಾಣಬಹುದು. ಪ್ರಜಾಸತ್ತಾತ್ಮಕ ಸಮಾಜವೊಂದರಲ್ಲಿ ನಡೆಯುತ್ತಿರುವ ಸ್ಥಿತ್ಯಂತರದ ಸಂಕಟಗಳನ್ನು, ಅಲ್ಲಿಯವರೆಗೆ ಅಜ್ಞಾತವಾಗಿದ್ದ ಸಮುದಾಯಗಳ ಬದುಕಿನ ಮೂಲಕ ಪರಿಶೀಲಿಸುವ ಪ್ರತಿಭಟನಾ ಪ್ರತೀಕಗಳನ್ನೂ ಕಾಣಬಹುದು. ಈ ಮಾದರಿಯ ರಚನೆಗಳಲ್ಲಿ ಚಲನಶೀಲತೆಯ ಒರತೆ ಉಕ್ಕುವುದುಂಟು. ಈ ಒರತೆಯನ್ನು ಕೃತಿಕಾರರು ತಂತಮ್ಮ ಬೊಗಸೆಯಲ್ಲಿ ಎಷ್ಟೆಷ್ಟು ಮತ್ತು ಹೇಗೆ ಹೇಗೆ ತುಂಬಿಕೊಳ್ಳುತ್ತಾರೆಂಬ ಆಧಾರದಲ್ಲಿ ಕೃತಿಯ ವಸ್ತು ವಿನ್ಯಾಸಗಳು ಕಟ್ಟಿಕೊಳ್ಳುತ್ತವೆ. ಬದಲಾವಣೆಯ ಬೊಗಸೆಯನ್ನು ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ನೆಲೆ-ನಿಲುವುಗಳು ರೂಪುಗೊಳ್ಳುತ್ತವೆ; ಸಮಕಾಲೀನವಾಗುತ್ತವೆ.

ಲೋಕೇಶ ಅಗಸನಕಟ್ಟೆಯವರ ಕಾದಂಬರಿಯು ಬದಲಾಗುತ್ತಿರುವ ಗ್ರಾಮೀಣ ಬದುಕಿನ ರೂಪಕಾತ್ಮಕ ಸ್ಥಿತ್ಯಂತರಗಳನ್ನು ತೆರೆಯುತ್ತ ಹೋಗುತ್ತಿರುವ ಕಾರಣದಿಂದ ಹೆಚ್ಚು ಸಮಕಾಲೀನವೂ, ಸಾಮುದಾಯಿಕವೂ ಆಗುತ್ತದೆ. ಸಾಮುದಾಯಿಕವಾಗುವುದಕ್ಕೆ ಪೂರಕವಾದ ವಿವಿಧ ಸಮುದಾಯಗಳ ಪ್ರಾತಿನಿಧಿಕ ಪಾತ್ರಗಳನ್ನು ಕಾದಂಬರಿಯ ತುಂಬ ಕಾಣಬಹುದಾಗಿದೆ. ಇಲ್ಲಿ ಬರುವ ಪ್ರಮುಖ ಪಾತ್ರಗಳು ತಂತಮ್ಮ ಜನ್ಮಮೂಲ ಸಮುದಾಯದ ಪ್ರತಿನಿಧಿಗಳೂ ಆಗುವುದೊಂದು ವಿಶೇಷ. ಬಹುಪಾಲು ಪಾತ್ರಗಳು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಸಿದ್ಧ ಬದುಕಿನ ಬಂಧದಿಂದ ಬಿಡುಗಡೆಗೊಳ್ಳುತ್ತ ಬೆಳೆಯುವಲ್ಲಿ ಕಾದಂಬರಿಯ ಬೆಳಕಿನ ಹಾದಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರತಿ ಪ್ರಧಾನ ಪಾತ್ರವೂ ತನ್ನನ್ನು ತಾನು ಮೀರುವ ಮನೋಧರ್ಮದಿಂದ ಸಾಮಾಜಿಕ ಸ್ಥಿತ್ಯಂತರದ ಸಂಕೇತವಾಗುತ್ತದೆ. ಇಂತಹ ಪಾತ್ರಗಳ ಮೂಲಕ ಅನಾವರಣಗೊಳ್ಳುವ ವ್ಯಕ್ತಿತ್ವ ಕೂಡ ಜೀವನ ವಿಧಾನವೊಂದರ ಪ್ರತೀಕವಾಗುವುದರಿಂದ ಇಡೀ ಕಾದಂಬರಿಯು ಬಹುಮುಖೀ ಬದುಕನ್ನು ಸಮರ್ಥವಾಗಿ ನಿರೂಪಿಸುವ ಸಾರ್ಥಕತೆಗೆ ಪಾತ್ರವಾಗುತ್ತದೆ. ಈ ಬಹುಮುಖೀ ಬದುಕಿನ ರೂಪಿಕೆಗಳಲ್ಲಿ ವೈರುಧ್ಯ, ವೈವಿಧ್ಯ, ವೈಷಮ್ಯ, ಸಂತೋಷ, ಸಂಕಟ - ಎಲ್ಲವೂ ಆಯಾಯ ಸನ್ನಿವೇಶದ ಜೀವಜಲವಾಗಿ ಹೊಮ್ಮುತ್ತವೆ; ಚಿಮ್ಮುತ್ತವೆ; ಹರಿಯುತ್ತವೆ; ಉರಿಯುತ್ತವೆ; ಹರಿಯುತ್ತ ಉರಿಯುತ್ತ, ಅರಿವಾಗಿಯೂ ರೂಪಾಂತರಗೊಳ್ಳುತ್ತವೆ. ಈ ರೂಪಾಂತರ ಪ್ರಕ್ರಿಯೆಯನ್ನು ಡಾ. ಲೋಕೇಶ ಅಗಸನಕಟ್ಟೆ ನಿರುದ್ವಿಗ್ನ ನಿರೂಪಣೆಯ ಮೂಲಕ ಅನುಭವಾತ್ಮಕಗೊಳಿಸಿದ್ದಾರೆ.

ಸ್ಥಿತ್ಯಂತರ ಮತ್ತು ರೂಪಾಂತರ ಪ್ರಕ್ರಿಯೆಗಳನ್ನು ಗ್ರಹಿಸುವ ವಿಧಾನ ಒಂದೇ ರೀತಿಯಾಗಿರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಹೊರಬೀಳುವ ಸಾಮಾಜಿಕ ಸತ್ಯಗಳನ್ನು ತಮ್ಮವಾಗಿಯೇ ಅನುಭವಿಸುವ ಸಂಕಟಾತ್ಮಕ ಸಮುದಾಯಗಳ ಸಂವೇದನೆಯ ತೀವ್ರತೆಗೂ ಮಾನಸಿಕ ದೂರವನ್ನು ಕಾಪಿಟ್ಟುಕೊಂಡ ಕಣ್ಣೋಟದ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ಹೀಗಾಗಿ ಅಭಿವ್ಯಕ್ತಿ ಕ್ರಮದಲ್ಲೂ ಈ ವ್ಯತ್ಯಾಸ ಗೋಚರಿಸುತ್ತದೆ. ಅಭಿವ್ಯಕ್ತಿಸುವ ವ್ಯಕ್ತಿಗಳು ನಿಂತ ನೆಲೆಗಳನ್ನು ನಿರ್ದೇಶಿಸುತ್ತದೆ. ಇಂತಹ ಅಭಿವ್ಯಕ್ತಿ ವಿಧಾನಗಳಲ್ಲಿ ಒಂದು ಸರಿ, ಇನ್ನೊಂದು ಸರಿಯಲ್ಲ ಎಂದು ಹೇಳುವುದು ಸರಿಯಲ್ಲ. ಇದು ಅವರವರ ಗ್ರಹಿಕಾ ವಿಧಾನಕ್ಕೆ ಸಂಬಂಧಿಸಿದ ಸಂಗತಿ. ಜೊತೆಗೆ ಸಾಮಾಜಿಕ - ಆರ್ಥಿಕ ಆಯಾಮಗಳ ಅನುಭವ ಸ್ತರಗಳ ಸಂಗತಿ. ಈ ಕಾದಂಬರಿಯಲ್ಲಿ ಕಾದಂಬರಿಕಾರರು ಪಾತ್ರಗಳ ಒಳಹೋಗುತ್ತಲೇ ಹೊರಬಂದು, ಮಾನಸಿಕ ದೂರದಿಂದ ನೋಡುವ ಮತ್ತು ನಿರೂಪಿಸುವ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ; ತನ್ಮೂಲಕ ವೈವಿಧ್ಯಮಯ ವ್ಯಕ್ತಿತ್ವಗಳಿಂದ ಕೂಡಿದ ಬಹುತ್ವದ ಬದುಕನ್ನು ಕಣ್ಣಲ್ಲಿ ಕಣ್ಣಿಟ್ಟು ಕಟ್ಟಿಕೊಟ್ಟಿದ್ದಾರೆ.

(ಮುನ್ನುಡಿಯಿಂದ)

share
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ
Next Story
X