''ನಾನು ಮುಂದಿನ ತಿಂಗಳು ಕಾಂಗ್ರೆಸ್ ಸೇರುತ್ತಿದ್ದೇನೆ'': ವೈಎಸ್ವಿ ದತ್ತ ಫೋನ್ ಸಂಭಾಷಣೆ ಆಡಿಯೊ ವೈರಲ್

ವೈಎಸ್ವಿ ದತ್ತ
ಚಿಕ್ಕಮಗಳೂರು, ಮೇ 11: ಜೆಡಿಎಸ್ ಮುಖಂಡ ಹಾಗೂ ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ಅಕ್ಷರಶಃ ನಿಜ ಎಂಬುದಕ್ಕೆ ದತ್ತ ಅವರು ಹಣಕಾಸು ವಿಚಾರದಲ್ಲಿ ತಮ್ಮ ಆತ್ಮೀಯರೊಂದಿಗೆ ಕಳೆದ ಫೆಬ್ರವರಿಯಲ್ಲಿ ನಡೆಸಿದ ಮೊಬೈಲ್ ಸಂಭಾಷಣೆಯೊಂದರಲ್ಲಿ ಸಷ್ಟನೆ ಸಿಕ್ಕಿದೆ.
ಕಡೂರು ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ವೈಎಸ್ವಿ ದತ್ತ ಅವರು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಖ್ಯಾತರಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರ ಮಾನಸ ಪುತ್ರ ಎಂದು ಸಾರ್ವಜನಿಕರು ಕರೆಯುವುದು ವಾಡಿಕೆಯಾಗಿದೆ. ಇಂದಿಗೂ ಜೆಡಿಎಸ್ ಪಕ್ಷದಲ್ಲೇ ಗುರುತಿಸಿಕೊಂಡಿರುವ ಅವರು ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ನಗರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇತ್ತೀಚೆಗೆ ವೈಎಸ್ವಿ ದತ್ತ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ವದಂತಿಗಳು ವ್ಯಾಪಕವಾಗಿ ಜಿಲ್ಲೆಯಲ್ಲಿ ಚರ್ಚೆಯಲ್ಲಿದ್ದು. ಈ ಸಂಬಂಧ ಮಾಧ್ಯಮದವರು ಹಲವು ಬಾರಿ ವೈಎಸ್ವಿ ಅವರಿಂದ ಸ್ಪಷ್ಟನೆ ಕೇಳಿದಾಗ ಅವರು ನಾಜೂಕಿನಿಂದಲೇ, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದಿದ್ದರು. ವೈಎಸ್ವಿ ದತ್ತ ಕಾಂಗ್ರೆಸ್ ಸೇರ್ಪಡೆ ವಿಚಾರ ವ್ಯಾಪಕ ಚರ್ಚೆಯಲ್ಲಿರುವ ಮಧ್ಯೆಯೇ ಅವರು ಕಳೆದ ಫೆಬ್ರವರಿ, 2022ರಂದು ತಮ್ಮ ಆತ್ಮೀಯರೊಂದಿಗೆ ಮೊಬೈಲ್ನಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡಿದ್ದು, ಈ ಹಳೆಯ ಆಡಿಯೊ ಸಂಭಾಷಣೆಯ ತುಣುಕು ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈಎಸ್ವಿ ದತ್ತ ಅವರು ವ್ಯಕ್ತಿಯೊಬ್ಬರಿಂದ ಹಣಕಾಸಿನ ನೆರವು ಪಡೆದಿದ್ದು, ಹಣ ನೀಡಿದ್ದ ವ್ಯಕ್ತಿ ವೈಎಸ್ವಿ ದತ್ತ ಅವರಿಗೆ ಕರೆ ಮಾಡಿ ಹಣದ ತುರ್ತು ಇರುವ ಬಗ್ಗೆ ಕೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಎಸ್ವಿ ದತ್ತ ಅವರು ಹಣ ನೀಡಿದ್ದ ವ್ಯಕ್ತಿಗೆ ಚೆಕ್ ನೀಡಿ, ಆ ಚೆಕ್ ಅನ್ನು ಮಾ 15ಕ್ಕೆ ಕಲೆಕ್ಷನ್ಗೆ ಹಾಕುವಂತೆ ವಿನಂತಿಸಿದ್ದಾರೆ. ಈ ವೇಳೆ ಅವರು, ನಾನು ಮುಂದಿನ ತಿಂಗಳು ಕಾಂಗ್ರೆಸ್ ಸೇರುತ್ತಿದ್ದೇನೆ. ಸಿದ್ದರಾಮಯ್ಯ ಕರೆದಿದ್ದಾರೆ. ಮುಂದಿನ ಬಾರಿ ಶಾಸಕನಾಗಿ ಮಂತ್ರಿಯೂ ಆಗುವುದು ಖಚಿತ. ಮಂತ್ರಿ ಮಾಡುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಂತ್ರಿಯಾಗದಿದ್ದಲ್ಲಿ ನನ್ನ ಹೆಸರು ದತ್ತ ಅಲ್ಲವೇ ಅಲ್ಲ, ಮಂತ್ರಿ ಆದ ಮೇಲೆ ಅನುಕೂಲ ಆಗುತ್ತೆ ಎಂದು ವೈಎಸ್ವಿ ದತ್ತ ಅವರು ಹಣ ನೀಡಿದ್ದ ವ್ಯಕ್ತಿಗೆ ಹೇಳುವ ಮಾತುಗಳು ಆಡಿಯೋ ಸಂಭಾಷಣೆಯಲ್ಲಿದೆ.
ವೈಎಸ್ವಿ ದತ್ತ ಹಾಗೂ ಹಣ ನೀಡಿದ್ದ ವ್ಯಕ್ತಿ ನಡುವೆ ನಡೆದ ಮೊಬೈಲ್ ಸಂಭಾಷಣೆಯ ತುಣುಕು ಕಳೆದ ಫೆಬ್ರವರಿ ತಿಂಗಳಿನದ್ದಾಗಿದ್ದು, ಈ ಆಡಿಯೋ ತುಣುಕು ಈಗ ಏಕೆ ವೈರಲ್ ಆಗುತ್ತಿದೆ ಎಂಬುದು ತಿಳಿದಿಲ್ಲವಾದರೂ ವೈಎಸ್ವಿ ದತ್ತ ಅವರು ಕಾಂಗ್ರೆಸ್ ಸೇರುವುದು ಖಚಿತ ಎಂಬುದು ಈ ಆಡಿಯೊ ತುಣುಕಿನಿಂದ ಸ್ಪಷ್ಟವಾಗುತ್ತಿದೆ.
ಆಡಿಯೊದಲ್ಲಿರುವುದು ನನ್ನದೇ ಧ್ವನಿ. ಆತ್ಮೀಯರೊಂದಿಗೆ ಮಾತನಾಡುತ್ತಿದ್ದ ವೇಳೆ ಕ್ಷೇತ್ರದ ಜನರ ಅಭಿಪ್ರಾಯವನ್ನು ಅವರ ಬಳಿ ಹೇಳಿದ್ದೇನೆ ಅಷ್ಟೆ, ನಾನು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ನಾನು ಕಾಂಗ್ರೆಸ್ ಸೇರಿದಲ್ಲಿ ಗೆಲುವು ಸಾಧಿಸುವುದು ಸುಲಭ ಎಂದು ಜನರು ಅಭಿಪ್ರಾಯಿಸುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆಂದು ಅವರ ಬಳಿ ಹೇಳಿದ್ದೇನೆ. ನಾನಿನ್ನೂ ಜೆಡಿಎಸ್ನಲ್ಲೇ ಇದ್ದೇನೆ. ವೈಎಸ್ವಿ ದತ್ತ







