ಪ್ರಮೋದ್ ಪಕ್ಷ ಬಿಟ್ಟ ನೈಜ ಕಾರಣ ತಿಳಿಸಲಿ: ಗೋಪಾಲ ಪೂಜಾರಿ
ಕುಂದಾಪುರ : ಪ್ರಮೋದ್ ಮಧ್ವರಾಜ್ಗೆ ಕಾಂಗ್ರೆಸ್ ಎಲ್ಲಾ ಅವಕಾಶ ನೀಡಿದ್ದು, ಅದನ್ನು ಬಳಸಿಕೊಂಡಿದ್ದರೂ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರಿದ ನೈಜ ಕಾರಣವನ್ನು ಜನರ ಮುಂದಿಡಬೇಕು ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.
ಕುಂದಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಮೊದಲ ಬಾರಿ ಪ್ರಮೋದ್ ಶಾಸಕರಾಗಿ ಆಯ್ಕೆ ಆಗಿದ್ದರೂ ಅವರಿಗೆ ರಾಜಕೀಯ ಕಾರ್ಯದರ್ಶಿ, ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಲಾಯಿತು. ಕಳೆದ ಚುನಾವಣೆಯಲ್ಲಿ ಸೋತ ಬಳಿಕ ಪ್ರಮೋದ್ ಮಧ್ವರಾಜ್ ಅವರು ಯಾವುದೇ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದರು.
ಪ್ರಮೋದ್ಗೆ ಪಕ್ಷದೊಂದಿಗೆ ಇದ್ದ ಭಿನ್ನಮತ ಸರಿಪಡಿಸಲು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಪ್ರಮೋದ್ರನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಜಿಲ್ಲಾಧ್ಯಕ್ಷರ ವಿರುದ್ಧ ಹಾಗೂ ಸಣ್ಣಪುಟ್ಟ ಸಬೂಬು ಹೇಳುವ ಬದಲು ಪಕ್ಷ ಬಿಟ್ಟ ಹಿನ್ನೆಲೆ ಏನು ಎನ್ನುವುದು ಜನರಿಗೆ ತಿಳಿಸಬೇಕು. ಅವರಿಗೆ ಐಟಿ ಸಮಸ್ಯೆ, ಉದ್ಯೋಗ ಸಮಸ್ಯೆ ಅಥವಾ ಯಾವುದೇ ಒತ್ತಡವಿತ್ತೇ ಎಂದು ಸಾರ್ವಜನಿಕರೆದುರು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲಾ ಗೌರವವನ್ನು ನೀಡಿದೆ. ಅವರು ಪಕ್ಷ ತೊರೆದ ಬಗ್ಗೆ ಓರ್ವ ಆತ್ಮೀಯ ಸ್ನೇಹಿತನಾಗಿ ನನಗೆ ನೋವಿದೆ. ನಮ್ಮ ಪಕ್ಷಕ್ಕಿಂತ ಒಳ್ಳೆ ಸ್ಥಾನ ನೀಡುವ ಆಶ್ವಾಸನೆಯ ಹಿನ್ನೆಲೆಯಲ್ಲಿ ಅವರು ಆ ಪಕ್ಷಕ್ಕೆ ಹೋಗಿರಬಹುದು ಎಂದು ಗೋಪಾಲ ಪೂಜಾರಿ ಹೇಳಿದರು.