ಪಕ್ಷ ವಿರೋಧಿ ಚಟುವಟಿಕೆ ಆರೋಪ: ಮಾಜಿ ಕೇಂದ್ರ ಸಚಿವ ಕೆ.ವಿ. ಥಾಮಸ್ ರನ್ನು ಉಚ್ಚಾಟಿಸಿದ ಕಾಂಗ್ರೆಸ್
Photo:twitter
ತಿರುವನಂತಪುರ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಕಾಂಗ್ರೆಸ್ ತನ್ನ ಬಂಡಾಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕೆ. ವಿ. ಥಾಮಸ್ ಅವರನ್ನು ಗುರುವಾರ ಉಚ್ಚಾಟಿಸಿದೆ ಎಂದು ಕೆಪಿಸಿಸಿ ಮುಖ್ಯಸ್ಥ ಕೆ. ಸುಧಾಕರನ್ ಹೇಳಿದ್ದಾರೆ.
ಎಐಸಿಸಿ ಒಪ್ಪಿಗೆ ಮೇರೆಗೆ ಥಾಮಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಅವರು ಹೇಳಿದರು.
ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಕಾಂಗ್ರೆಸ್ ನ ಮೂರು ದಿನಗಳ 'ಚಿಂತನ್ ಶಿವಿರ್' ಎಂಬ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಸುಧಾಕರನ್ ಈ ಕುರಿತು ಘೋಷಣೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೊಚ್ಚಿಯಲ್ಲಿ ನಡೆದ ಎಡಪಕ್ಷದ ನೇತೃತ್ವದ ಉಪಚುನಾವಣೆ ಸಭೆಯಲ್ಲಿ ಸಿಪಿಎಂ ನಾಯಕ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಥಾಮಸ್ ವೇದಿಕೆ ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಥಾಮಸ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದೆ.
ಪಕ್ಷದ ರಾಜ್ಯ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಎಐಸಿಸಿಯ ಹಿರಿಯ ಸದಸ್ಯ ಥಾಮಸ್ ಅವರು ತೃಕ್ಕಾಕರ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಯಲ್ಲಿ ಆಡಳಿತಾರೂಢ ಎಲ್ಡಿಎಫ್ ಅಭ್ಯರ್ಥಿ ಜೋ ಜೋಸೆಫ್ ಪರ ಪ್ರಚಾರ ಮಾಡುವುದಾಗಿ ಬುಧವಾರ ಹೇಳಿದ್ದಾರೆ.
ಆದರೆ, ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.