ಕಾಶ್ಮೀರಿ ಪಂಡಿತನ ಹತ್ಯೆ: ಜಮ್ಮು-ಕಾಶ್ಮೀರದಲ್ಲಿ ರಾತ್ರೋರಾತ್ರಿ ಪ್ರತಿಭಟನೆ
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ದ ಘೋಷಣೆ
![ಕಾಶ್ಮೀರಿ ಪಂಡಿತನ ಹತ್ಯೆ: ಜಮ್ಮು-ಕಾಶ್ಮೀರದಲ್ಲಿ ರಾತ್ರೋರಾತ್ರಿ ಪ್ರತಿಭಟನೆ ಕಾಶ್ಮೀರಿ ಪಂಡಿತನ ಹತ್ಯೆ: ಜಮ್ಮು-ಕಾಶ್ಮೀರದಲ್ಲಿ ರಾತ್ರೋರಾತ್ರಿ ಪ್ರತಿಭಟನೆ](https://www.varthabharati.in/sites/default/files/images/articles/2022/05/13/334956-1652418948.jpg)
Photo:NDTV
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದಲ್ಲಿ ತಮ್ಮ ಸಮುದಾಯದ 36 ವರ್ಷದ ವ್ಯಕ್ತಿಯ ಹತ್ಯೆಯ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ಸುರಕ್ಷತೆಗೆ ಆಗ್ರಹಿಸಿ ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು.
ಸಮುದಾಯದ ಸದಸ್ಯರು ರಸ್ತೆಗಳನ್ನು ತಡೆದು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಘೋಷಣೆಗಳು ಮೊಳಗಿದವು.
ಹಲವೆಡೆ ಕ್ಯಾಂಡಲ್ಲೈಟ್ ಮೆರವಣಿಗೆಯೂ ನಡೆಯಿತು.
ಮತ್ತೊಂದು ಉದ್ದೇಶಿತ ದಾಳಿಯಂತೆ ಕಂಡುಬಂದ ಘಟನೆಯಲ್ಲಿ ಭಯೋತ್ಪಾದಕರು ಗುರುವಾರ ಬುದ್ಗಾಮ್ ಜಿಲ್ಲೆಯ ಚದೂರ ಗ್ರಾಮದ ತಹಸೀಲ್ದಾರ್ ಕಚೇರಿಗೆ ನುಗ್ಗಿ ರಾಹುಲ್ ಭಟ್ ಎಂಬುವರ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡ ನಂತರ ರಾಹುಲ್ ಭಟ್ ಕಳೆದ 10 ವರ್ಷಗಳಿಂದ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ರಾಹುಲ್ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಜಮ್ಮುವಿಗೆ ಕೊಂಡೊಯ್ಯಲಾಗುತ್ತಿದೆ.
ಕಳೆದ ಆರು ತಿಂಗಳಲ್ಲಿ ಹತ್ಯೆಯಾದ ಮೂರನೇ ಕಾಶ್ಮೀರಿ ಪಂಡಿತ ರಾಹುಲ್ ಭಟ್. ಇನ್ನಿಬ್ಬರು ಗಾಯಗೊಂಡಿದ್ದಾರೆ.