ಅತಿಕ್ರಮಣ ತೆರವುಗೊಳಿಸದಿದ್ದರೆ ಬುಲ್ಡೋಝರ್ ಹರಿಸುತ್ತೇವೆ: ದಿಲ್ಲಿ ಬಿಜೆಪಿ ಅಧ್ಯಕ್ಷನಿಗೆ ಆಪ್ ಎಚ್ಚರಿಕೆ
ಹೊಸದಿಲ್ಲಿ: ದಿಲ್ಲಿಯ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಸಾರ್ವಜನಿಕರ ಭೂಮಿಯನ್ನು ಅತಿಕ್ರಮಿಸಿ ಮನೆ ಹಾಗೂ ಕಚೇರಿಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷ, ನಾಳೆ ಬೆಳಗ್ಗೆ 11 ಗಂಟೆಯೊಳಗೆ ಅತಿಕ್ರಮಣವನ್ನು ತೆರವು ಗೊಳಿಸದಿದ್ದರೆ ಗುಪ್ತಾ ಅವರ ಮನೆಗೆ ಬುಲ್ಡೋಝರ್ಗಳೊಂದಿಗೆ ಹೋಗುವುದಾಗಿ ಆಪ್ ಎಚ್ಚರಿಕೆ ನೀಡಿದೆ.
ಧ್ವಂಸ ಕಾರ್ಯವನ್ನು ನಿಲ್ಲಿಸಲು ಮಧ್ಯಪ್ರವೇಶಿಸಿದ ನಂತರ ಆಗ್ನೇಯ ದಿಲ್ಲಿಯ ಮದನ್ಪುರ್ ಖಾದರ್ ಪ್ರದೇಶದಿಂದ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ನಿನ್ನೆ ಬಂಧಿಸಲಾಗಿತ್ತು. ಆ ಬಳಿಕ ಎರಡೂ ಪಕ್ಷಗಳ ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ.
"ಆದೇಶ ಗುಪ್ತಾ ಅವರು ತನ್ನ ಮನೆ ಹಾಗೂ ಕಚೇರಿ ನಿರ್ಮಾಣಕ್ಕಾಗಿ ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿದ್ದಾರೆ. ನಾವು ದೂರುಗಳನ್ನು ಸಲ್ಲಿಸಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಎಎಪಿ ತಿಳಿಸಿದೆ.
ಬುಲ್ಡೋಝರ್ಗಳ ಬೆದರಿಕೆಯ ಮೂಲಕ "ಹಣ ಸುಲಿಗೆ ಮಾಡುವ ಬಿಜೆಪಿಯ ದೊಡ್ಡ ಯೋಜನೆ" ಇದಾಗಿದೆ ಎಂದು ಇಂದು ಬೆಳಗ್ಗೆ ಹೇಳಿರುವ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರಾಷ್ಟ್ರ ರಾಜಧಾನಿಯಲ್ಲಿ 63 ಲಕ್ಷ ಮನೆಗಳನ್ನು ಕೆಡವಲು ಬಿಜೆಪಿ ಯೋಜಿಸಿದೆ ಎಂದು ಆಪಾದಿಸಿದ್ದಾರೆ.