ಮೊಬೈಲ್, ಅತಿ ಸ್ಪರ್ಧೆಯಿಂದ ಮಕ್ಕಳನ್ನು ಹೊರಗಿಡಿ: ಡಾ.ಭಂಡಾರಿ

ಉಡುಪಿ : ಮಕ್ಕಳನ್ನು ಮೊಬೈಲ್ನಿಂದ ಹೊರಗಿಡಿ. ಅತಿಯಾದ ಸ್ಪರ್ಧೆಗಳು ಕೂಡ ಒಳ್ಳೆಯದಲ್ಲ. ಬೇರೆ ಮಕ್ಕಳ ಜತೆಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರೊಂದಿಗೆ ೧೦ ದಿನಗಳ ಕಾಲ ಹಮ್ಮಿಕೊಂಡಿದ್ದ ಬಾಲಲೀಲೆ ಮಕ್ಕಳ ರಂಗ ಶಿಬಿರದ ಸಮಾರೋಪದಲ್ಲಿ ಗುರುವಾರ ಅವರು ಮಾತನಾಡುತ್ತಿ ದ್ದರು.
ಕೊರೊನಾ ಕಾಲದಲ್ಲಿ ನಡೆದ ಆನ್ಲೈನ್ ತರಗತಿಗಳಿಂದಾಗಿ ಮಕ್ಕಳು ಮೊಬೈಲ್ ಮೇಲೆ ಹೆಚ್ಚು ಅವಲಂಬಿತರಾ ದರು. ಆಗ ತರಗತಿಯ ಜತೆಗೆ ಮೊಬೈಲ್ ಗೇಮ್ಗಳನ್ನು ಆಡಿದರು. ಆನ್ಲೈನ್ ತರಗತಿ ಮುಗಿದರೂ ಗೇಮ್ ಗಳಿಂದಾಗಿ ಮಕ್ಕಳು ಇನ್ನೂ ಮೊಬೈಲ್ ಬಿಡುತ್ತಿಲ್ಲ. ಹೆತ್ತವರು ಮಕ್ಕಳನ್ನು ಮೊಬೈಲ್ನಿಂದ ಹೊರಗಿಡಿ ಎಂದು ಅವರು ಸಲಹೆ ನೀಡಿದರು.
ಹೆತ್ತವರಿಗೆ ತನ್ನ ಮಗುವನ್ನು ಬೇರೆಯವರ ಮಕ್ಕಳ ಜತೆಗೆ ಹೋಲಿಕೆ ಮಾಡುವ ಕಾಯಿಲೆ ಇದೆ. ಇದು ಮಕ್ಕಳಲ್ಲಿ ಕೀಳರಿಮೆಯನ್ನು ಉಂಟು ಮಾಡುತ್ತದೆ. ಆದುದರಿಂದ ಹೋಲಿಕೆ ಮಾಡುವುದನ್ನು ಹೆತ್ತವರು ನಿಲ್ಲಿಸಬೇಕು. ಅತಿ ಯಾದ ಸ್ಪರ್ಧೆಯು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾಲೆಗಳು ಅಂಕ ಗಳಿಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಅಂಕಕ್ಕಾಗಿ ವಿಪರೀತ ಸ್ಪರ್ಧೆಗಳು ಏರ್ಪಟ್ಟಿದೆ. ಇದು ಒಳ್ಳೆಯದಲ್ಲ ಎಂದರು.
ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಗೌರವಾಧ್ಯಕ್ಷ ಎಂ.ಎಸ್.ಭಟ್, ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು, ರಂಗಶಿಬಿರದ ನಿರ್ದೇಶಕ ಗಣೇಶ್ ಸಗ್ರಿ ಉಪಸ್ಥಿತರಿದ್ದರು. ಮಕ್ಕಳೇ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಬಿರಾರ್ಥಿಗಳಿಂದ ವೆಂಕಟೇಶ ಪ್ರಸಾದ್ ರಚಿಸಿರುವ ಅರಣ್ಯ ಪರ್ವ ನಾಟಕ ಪ್ರದರ್ಶನಗೊಂಡಿತು.







