ಕುಂ.ವೀರಭದ್ರಪ್ಪ, ಸಿದ್ದರಾಮಯ್ಯ, ಎಚ್ಡಿಕೆ, ದಿನೇಶ್ ಅಮೀನ್ಮಟ್ಟು ಸಹಿತ 61 ಮಂದಿಗೆ ಇನ್ನೊಂದು ಕೊಲೆ ಬೆದರಿಕೆ ಪತ್ರ

ಕುಂ.ವೀರಭದ್ರಪ್ಪ, ಸಿದ್ದರಾಮಯ್ಯ, ದಿನೇಶ್ ಅಮೀನ್ಮಟ್ಟು
ವಿಜಯನಗರ: ಮೇ 13: ‘ಸಾಹಿತಿ ಕುಂ. ವೀರಭದ್ರಪ್ಪ(ಕುಂವೀ), ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ 61 ಮಂದಿ ಸಾಹಿತಿಗಳಿಗೆ ಕೊಲೆ ಬೆದರಿಕೆಯಿರುವ ಇನ್ನೊಂದು ಪತ್ರ ಕುಂ. ವೀರಭದ್ರಪ್ಪ ಅವರ ಮನೆಗೆ ಬಂದಿದೆ.
ಪತ್ರಕರ್ತ ದಿನೇಶ್ ಅಮೀನ್ಮಟ್ಟು, ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿ ಬರಗೂರು ರಾಮಚಂದ್ರ, ಬಂಜಗೆರೆ ಜಯಪ್ರಕಾಶ್ ಅವರಿಗೂ ಜೀವ ಬೆದರಿಕೆ ಹಾಕಲಾಗಿದೆ.
'ಸಾಹಿತಿಗಳು, ಪ್ರೊಫೆಸರ್ಗಳು, ಬುದ್ಧಿಜೀವಿಗಳು ಹಾಗೂ ನಿಮ್ಮ ದುಷ್ಟಕೂಟವು ದೇಶ ವಿರೋಧಿ, ಸಂವಿಧಾನ ವಿರೋಧಿ, ಹಿಂದೂ ಸಮಾಜ ಹೀಯಾಳಿಸುವ ಹೇಳಿಕೆಗಳನ್ನು ಕೊಡುತ್ತೀರಿ. ಮುಸ್ಲಿಂ ರಾಕ್ಷಸರ ಪರ ಮಾತನಾಡುತ್ತೀರಿ. ನೀವೆಲ್ಲ ಕ್ಷಮೆ ಕೇಳಬೇಕು. ಇಲ್ಲ ಸಾಯಲು ಸಿದ್ಧರಾಗಿ. ಜೈ ಹಿಂದೂ ರಾಷ್ಟ್ರ, ಸಹಿಷ್ಣು ಹಿಂದೂ' ಎಂಬ ಸಾಲಿನೊಂದಿಗೆ ಪತ್ರ ಕೊನೆಗೊಳ್ಳುತ್ತದೆ.
ಸಾಹಿತಿ ಕುಂ.ವೀರಭದ್ರಪ್ಪ ಪ್ರತಿಕ್ರಿಯೆ
‘ಈ ಹಿಂದಿನಂತೆಯೇ ಜೀವ ಬೆದರಿಕೆ ಪತ್ರ ಬಂದಿದೆ. ಈ ಸಲ ಚಿತ್ರದುರ್ಗದಿಂದ ಪೋಸ್ಟ್ ಮಾಡಲಾಗಿದೆ. ಶನಿವಾರ(ಮೇ 14) ಚಿತ್ರದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬೇಕು. ಈಗ ಅಲ್ಲಿಂದಲೇ ಪತ್ರ ಬಂದಿದ್ದು, ಇದರ ಹಿಂದಿನ ಮರ್ಮ ಏನೆಂಬುದು ಗೊತ್ತಾಗುತ್ತಿಲ್ಲ’ ಎಂದು ಕುಂ.ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ.







