ಸಹಬಾಳ್ವೆ ಪ್ರಯುಕ್ತ ಬಾಗಲಕೋಟೆಯಿಂದ ಪಾದಯಾತ್ರೆ; ಉಡುಪಿ ಜಿಲ್ಲೆ ತಲುಪಿದ ನಾಗರಾಜ್ಗೆ ಕುಂದಾಪುರದಲ್ಲಿ ಸನ್ಮಾನ
ಉಡುಪಿ : ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿರುವ ಸಹಬಾಳ್ವೆ ಸಮಾವೇಶದ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಬಾಗಲ ಕೋಟೆಯಿಂದ ಉಡುಪಿಯವರೆಗೆ ಪಾದಯಾತ್ರೆ ಹೊರಟಿರುವ ಬಾಗಲ ಕೋಟೆಯ ಜಿಯೋಸ್ಪೇಸಿಯಲ್ ಇಂಜಿನಿಯರ್ ನಾಗರಾಜ ಎಸ್.ಕೆ. ಶುಕ್ರವಾರ ಕುಂದಾಪುರ ತಲುಪಿದ್ದಾರೆ.
ಹಳೆ ಬಾಗಲಕೋಟೆ ನಗರದಿಂದ ಮೇ 8ರಂದು ಪಾದಯಾತ್ರೆ ಹೊರಟಿದ್ದು, ಹುಬ್ಬಳ್ಳಿ, ಅಂಕೋಲ ಮಾರ್ಗವಾಗಿ ಮೇ 13ರಂದು ಸಂಜೆ ವೇಳೆ ಕುಂದಾಪುರಕ್ಕೆ ತಲುಪಿದ್ದೇನೆ. ದಾರಿಯುದ್ದಕ್ಕೂ ಸಹಬಾಳ್ವೆ ಸಮಾವೇಶದ ಕರ ಪತ್ರವನ್ನು ಹಂಚುತ್ತ, ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಕೊಂಡು ಬಂದಿದ್ದೇನೆ ಎಂದು ನಾಗರಾಜ್ ಎಸ್.ಕೆ. ತಿಳಿಸಿದರು.
ಸಹಬಾಳ್ವೆ ಸಮಾವೇಶದ ಪ್ರಚಾರ ಹಾಗೂ ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿ ರುವ ಧರ್ಮಗಳ ನಡುವಿನ ಧ್ವೇಷ ದೂರ ಮಾಡಿ, ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆಯನ್ನು ನಡೆಸಿದ್ದೇನೆ. ಈ ಹಿಂದೆ ರೈತ ಹೋರಾಟ ವನ್ನು ಬೆಂಬಲಿಸಿ 5000 ಕಿ.ಮೀ. ಪಾದಯಾತ್ರೆ ನಡೆಸಿದ್ದೇನೆ ಎಂದು ಅವರು ಹೇಳಿದರು.
ಕುಂದಾಪುರದಲ್ಲಿ ಸನ್ಮಾನ: ಉಡುಪಿ ಜಿಲ್ಲೆಗೆ ಆಗಮಿಸಿದ ನಾಗರಾಜ್ ಅವರನ್ನು ನಮ್ಮ ನಾಡ ಒಕ್ಕೂಟ ಹಾಗು ಕಿದ್ಮಾ ಫೌಂಡೇಶನ್ ಸಹಭಾಗಿತ್ವದಲ್ಲಿ ಕುಂದಾಪುರದಲ್ಲಿ ಹುಸೇನ್ ಹೈಕಾಡಿಯವರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಕಿದ್ಮಾ ಫೌಂಡೇಶನ ಅಧ್ಯಕ್ಷ ಅಬು ಮೊಹಮ್ಮದ್, ಕಾರ್ಯದರ್ಶಿ ರಫೀಕ್ ವಂಡ್ಸೆ, ರಿಯಾದ್ ಘಟಕದ ಅಧ್ಯಕ್ಷ ಅಬ್ದುಲ್ ಸಲಾಮ್ ಮೌಲಾನಾ, ಪ್ರದಾನ ಕಾರ್ಯದರ್ಶಿ ಅಶ್ರಫ್ ಶೈಖ್ ಕೋಟೇಶ್ವರ, ಜೊತೆ ಕಾರ್ಯದರ್ಶಿ ಮೊಹಮ್ಮದ್ ಮುಜಿಕ್ಕಿರ್, ಕುಂದಾಪುರ ಘಟಕದ ಸದ್ಯಸ್ಯರಾದ ಯಾಸಿನ್ ಶಿರೂರ್ ಬೇದ್ರೆ, ಇಬ್ರಾಹಿಂ, ಮೊಹಮ್ಮದ್ ಇಲ್ಯಾಸ್, ಹನೀಫ್ ಕುಂದಾಪುರ, ರಿಯಾಜ್ ಶಿರೂರ್ ಉಪಸ್ಥಿತರಿದ್ದರು.