VIDEO- ಸಾಗರ: ಆನಂದಪುರದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ನಮಾಝ್ ಬಳಿಕ ಸಂವಿಧಾನದ ಪೀಠಿಕೆ ಪಠಣ

ಶಿವಮೊಗ್ಗ, ಮೇ.14: ಸಾಗರ ತಾಲೂಕಿನ ಆನಂದಪುರದ ಜಾಮಿಯಾ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಬಳಿಕ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಅದರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಶುಕ್ರವಾರದ ನಮಾಝ್ ಬಳಿಕ ಸಾಗರದ ವಕೀಲರಾದ ಮುಹಮ್ಮದ್ ಜಕ್ರಿಯಾ ಸಂವಿಧಾನ ರಚನೆಯಾದ ಸಂದರ್ಭ ಹಾಗೂ ಅದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಆಮೇಲೆ ಎಲ್ಲರೂ, ಭಾರತ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ವಾಗಿ ರೂಪಿಸುವ, ಭ್ರಾತೃತ್ವದ ಭಾವನೆ ಮೂಡಿಸುವ ದೃಢಸಂಕಲ್ಪ ಮಾಡಿದ್ದೇವೆ ಎಂಬ ಸಂವಿಧಾನದ ಪ್ರಸ್ತಾವ ಓದಿದರು.
ಮಸೀದಿ ಆವರಣದಲ್ಲಿ ಮುಸಲ್ಮಾನರು ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಸಂವಿ ಧಾನ ಕುರಿತಂತೆ ಅರಿವು ಪಡೆಯಲು ಮುಸಲ್ಮಾನರ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ರೀತಿಯ ಪರಿಪಾಠ ಬೆಳೆಯಬೇಕು ಎಂಬ ಸದುದ್ದೇಶ ಈ ಕಾರ್ಯಕ್ರಮದ ಹಿಂದೆ ಇದೆ ಎಂದು ಮಸೀದಿಯ ಆಡಳಿತ ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಜಾಮಿಯಾ ಮಸೀದಿ 1632ರಲ್ಲಿ ಕೆಳದಿ ಅರಸ ವೀರಭದ್ರ ನಾಯಕರಿಂದ ನಿರ್ಮಾಣಗೊಂಡಿದೆ. ಆನಂದಪುರದ ಕೋಟೆಯನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದರು. ವಿಷಯ ತಿಳಿದ ಟಿಪ್ಪು ಸುಲ್ತಾನ್ ತನ್ನ ಸೇನೆಯನ್ನು ಕಳುಹಿಸಿ ಕೋಟೆಯನ್ನು ಮರು ವಶಪಡಿಸಿಕೊಂಡ. ನಂತರ ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸಿದ. ಇದೆಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.







