ಅಂಜನಾದ್ರಿ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಿಸಲು ತೀರ್ಮಾನ: ಮುಖ್ಯಮಂತ್ರಿ ಬೊಮ್ಮಾಯಿ

ಧಾರವಾಡ, ಮೇ 15: ‘ಅಂಜನಾದ್ರಿ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ರವಿವಾರ ಹುಬ್ಬಳ್ಳಿಯ ಗೋಕುಲದಲ್ಲಿ ಜೀರ್ಣೋದ್ಧಾರ ವಾಗಿರುವ ದಾರಾವತಿ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಂತ ದೇವರ ಆಶೀರ್ವಾದ ಪಡೆದ ನಂತರ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಿ. ಆತ ಕನ್ನಡ ನಾಡಿನ ವರ ಪುತ್ರ. ಹೊಸಪೇಟೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಈ ಸಾಲಿನ ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಬೆಟ್ಟಕ್ಕೆ ರೋಪ್ ವೇ ನಿಂದ ಹಿಡಿದು, ಕ್ಷೇತ್ರಕ್ಕೆ ಭೇಟಿ ನೀಡುವ ಜನರ ಅನುಕೂಲಕ್ಕಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ನುಡಿದರು.
ಬೇಡಿಕೆಗಳನ್ನು ಪೂರೈಸುವ ಭರವಸೆ: ‘ಅಯೋಧ್ಯೆಯಲ್ಲಿ ರಾಮನ ದೇವಾಲಯ ನಿರ್ಮಿಸಲಾಗುತ್ತಿದ್ದರೆ, ಇಲ್ಲಿ ಆಂಜನೇಯನ ದೇವಸ್ಥಾನದ ಅಭಿವೃದ್ಧಿಯಾಗುತ್ತಿದೆ. ಈ ರಾಜ್ಯದ ಸೇವೆ ಮಾಡುವ ದೊಡ್ಡ ಅವಕಾಶ ಲಭಿಸುವಲ್ಲಿ ಹುಬ್ಬಳ್ಳಿ ಜನರ ಹಾಗೂ ಶಿಗ್ಗಾವಿ ಕ್ಷೇತ್ರದ ಜನರ ಆಶೀರ್ವಾದ ಇದೆ. ಜನರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ನಡೆದುಕೊಳ್ಳುವೆ. ನಾಡಿನ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವೆ ಎಂದರು.
ದೇವಸ್ಥಾನದ ಹಾಗೂ ಸುತ್ತಲಿನ ಬಡಾವಣೆಗೆ ಸಂಬಂಧಿಸಿದಂತೆ ಮಾಡಿರುವ ಬೇಡಿಕೆಯನ್ನು ಪರಿಗಣಿಸಿ, ಅಗತ್ಯವಿರುವ ಕಾನೂನಿನ ಬದಲಾವಣೆ ತಂದು ಅನುಕೂಲ ಮಾಡಿಕೊಡಲಾಗುವುದು ಎಂದ ಅವರು, ಗೋಕುಲದಲ್ಲಿ ಈ ಪುಣ್ಯದ ಕೆಲಸ ಮಾಡಿರುವುದಕ್ಕೆ ಅಭಿನಂದನೆ. ಗೋಕುಲ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿರುವುದನ್ನು ಮೆಲುಕು ಹಾಕಿದರು.
ಗೋಕುಲ ಅತ್ಯಂತ ಕ್ರಿಯಾಶೀಲ ಗ್ರಾಮ. ಕಿರ್ಲೋಸ್ಕರ್ ಕಂಪೆನಿ ಬಂದ ನಂತರ ಗೋಕುಲ ಗ್ರಾಮದ ಪ್ರತಿ ಮನೆಯವರು ಕಿರ್ಲೋಸ್ಕರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ದುಡಿಮೆಯನ್ನು ನಂಬಿರುವ ದೊಡ್ಡ ಯುವಕರ ಪಡೆ ಇಲ್ಲಿದೆ. 21ನೆ ಶತಮಾನ ಜ್ಞಾನದ ಶತಮಾನ. ಮಕ್ಕಳಿಗೆ ವಿದ್ಯೆ ನೀಡಿದರೆ ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಈ ಬಗ್ಗೆ ಲಕ್ಷ್ಯ ನೀಡಬೇಕೆಂದು ಕಿವಿ ಮಾತು ಹೇಳಿದರು.
ಮನಸ್ಸಿನಲ್ಲಿರುವುದನ್ನು ತಿಳಿದು ವರ ಕೊಡುವುದು ಹನುಮ ದೇವರ ವೈಶಿಷ್ಟ್ಯ. ಹನುಮನಿಗೆ ಶ್ರದ್ದಾ ಭಕ್ತಿಯಿಂದ ನಡೆದುಕೊಂಡರೆ ಸಾಕು.ಕೇಳದೆ ಪಡೆಯುವ ಮನೋಶಕ್ತಿ ಇರಬೇಕು. ದುಡಿಮೆ, ಬೆವರಿನಿಂದ ಕಟ್ಟಿರುವ ದೇವಸ್ಥಾನದಲ್ಲಿ ಬೇಡಿದ್ದು ದೊರಕುತ್ತದೆ ಎಂದ ಅವರು, ತಮ್ಮ ಸಾರ್ವಜನಿಕ ಜೀವನದ ಮೊದಲ ಭಾಷಣವನ್ನು ಗೋಕುಲದಲ್ಲಿ ಮಾಡಿದ್ದಾಗಿ ಸ್ಮರಿಸಿದರು. ಅಲ್ಲಿಂದ ಪ್ರಾರಂಭವಾಗಿದ್ದು ಮಾತನಾಡುವುದನ್ನು ನಿಲ್ಲಿಸಿಲ್ಲ. ಗೋಕುಲದಲ್ಲಿನ ಹಲವಾರು ಘಟನೆಗಳನ್ನು ಮೆಲುಕು ಹಾಕಿದರು.
ಪ್ರಧಾನಿ ಮೋದಿಯವರು ಸಂಕಲ್ಪ ಪುರುಷರು. ಹಲವಾರು ವರ್ಷಗಳು ಆಗದಿದ್ದ ಅಭಿವೃದ್ಧಿಯನ್ನು ಭಾರತ ದೇಶದಲ್ಲಿ ಸಾಧ್ಯವಾಗಿಸಿದ್ದಾರೆ. ಅವರ ಪ್ರಯತ್ನ ದಿಂದಾಗಿ ಅಯೋಧ್ಯೆಯಲ್ಲಿರುವ ದೇವಸ್ಥಾನದ ನಿರ್ಮಾಣ, ಸರ್ವರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಶ್ರೀರಾಮನ ದೇವಸ್ಥಾನ ಅದ್ಭುತವಾಗಿ ನಿರ್ಮಾಣವಾಗುತ್ತಿದೆ. ಕಾಶಿ ವಿಶ್ವನಾಥನ ಅಭಿವೃದ್ಧಿಯನ್ನು ನಾವು ಅಲ್ಲಿಗೆ ಭೇಟಿ ನೀಡಿಯೇ ನೋಡಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ್, ಹುಬ್ಬಿಳ್ಳಿ-ಧಾರವಾರ ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿ ಮಠ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.







