ಗೌತಮ ಬುದ್ಧನ ಪಂಚಶೀಲಗಳ ಪಾಲನೆಯಿಂದ ನೆಮ್ಮದಿಯ ಜೀವನ: ಬೋಧಿಪ್ರಿಯ ಭಂತೇಜಿ
ಮಂಗಳೂರು : ಗೌತಮ ಬುದ್ಧ ಭೋದಿಸಿದ ಪಂಚಶೀಲಗಳ ಪಾಲನೆಯಿಂದ ಜೀವನದಲ್ಲಿ ನೆಮ್ಮದಿ ಪಡೆಯಲು ಸಾಧ್ಯವಿದೆ ಎಂದು ಮೈಸೂರು ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಬೋಧಿಪ್ರಿಯ ಭಂತೇಜಿ ಹೇಳಿದ್ದಾರೆ.
ಸೋಮವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದ.ಕ ಜಿಲ್ಲಾ ಬೌದ್ಧ ಮಹಾಸಭಾದ ವತಿಯಿಂದ ಆಯೋಜಿಸಲಾದ ೨೫೬೬ನೇ ವೈಶಾಖ ಹುಣ್ಣಿಮೆ ಪವಿತ್ರ ಬುದ್ಧ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಸಂದೇಶ ನೀಡಿದರು.
ಗೌತಮ ಬುದ್ಧರು ಬೋಧಿಸಿದ ಪಂಚ ಶೀಲ ತತ್ವಗಳಾದ ಪ್ರಾಣಿ ಹತ್ಯೆ ಮಾಡದಿರುವುದು, ಸುಳ್ಳು ಹೇಳದಿರು ವುದು, ಮೋಸ, ವ್ಯಭಿಚಾರ, ಮದ್ಯಪಾನ ಮಾಡದಿರುವುದು ಇವು ಜೀವನವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುತ್ತವೆ ಎಂದು ಬೋಧಿಪ್ರಿಯ ಭಂತೇಜಿ ಹೇಳಿದರು.
ದ.ಕ ಜಿಲ್ಲಾ ಬೌದ್ಧ ಮಹಾಸಭಾದ ಅಧ್ಯಕ್ಷ ಆಯುಷ್ಮಾನ್ ಎಂ.ವಿ.ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು.
ದ.ಕ ಜಿಲ್ಲಾ ಬೌದ್ಧ ಮಹಾಸಭಾ ಮಾಜಿ ಅಧ್ಯಕ್ಷ ಆಯುಷ್ಮಾನ್ ಕಾಂತಪ್ಪ ಅಲಂಗಾರ್, ನಾಗಪುರದ ಆಯು ಷ್ಮಾನ್ ಥಾಣಾಜಿ ಭರಾಟೆ, ಮಹಾಉಪಾಸಿಕ ಸಂಜೀವನಿ ಭರಾಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪ್ರಧಾನ ಕಾರ್ಯದರ್ಶಿ ಎಸ್.ಆರ್.ಲಕ್ಷ್ಮಣ, ಜತೆ ಕಾರ್ಯದರ್ಶಿ ಭಾಸ್ಕರ ಕವತ್ತಾರು, ಖಜಾಂಚಿ ಎಂ.ಶಶಿಕಲಾ, ಸಂಘಟನಾ ಕಾರ್ಯದರ್ಶಿಗಳಾದ ಸುಂದರ್ ಉಳ್ಳಾಲ್, ಶಿವರಾಂ ಪೇಜಾವರ ಉಪಸ್ಥಿತರಿದ್ದರು. ಉಪಾಧ್ಯಕ್ಷ ಲಕ್ಷ್ಮಣ ವಾಮಂಜೂರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ದಿನೇಶ್ ಮೂಳೂರು ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಭೋದ್ ವಂದಿಸಿದರು.
ಬುದ್ಧ ಜಯಂತಿ ಪ್ರಯುಕ್ತ ಬೋಧಿಪ್ರಿಯ ಭಂತೇಜಿ ಅವರ ಸಾನಿಧ್ಯದಲ್ಲಿ ಬುದ್ಧವಂದನೆ, ಕರಣೀಯ ಮೆತ್ತ ಸುತ್ತ, ಮಹಾಮಂಗಳ ಸುತ್ತ ಪಠಣ ಹಾಗೂ ಲೋಕ ಶಾಂತಿಗಾಗಿ ಮೈತ್ರಿ ಧ್ಯಾನ ನೆರವೇರಿತು.