ಮಧ್ಯಪ್ರದೇಶ: ದರ್ಗಾ ಸಮೀಪ ವಿಗ್ರಹ ಪ್ರತಿಷ್ಠಾಪಿಸಲು ಯತ್ನ: ಎರಡು ಗುಂಪುಗಳ ನಡುವೆ ಘರ್ಷಣೆ
ಭೋಪಾಲ, ಮೇ 17: ಮಧ್ಯಪ್ರದೇಶದ ನೀಮಚ್ ನಲ್ಲಿ ಹಿಂದೂ ಹಾಗೂ ಮುಸ್ಲಿಮರ ಗುಂಪುಗಳ ನಡುವೆ ಸೋಮವಾರ ರಾತ್ರಿ ಘರ್ಷಣೆ ಭುಗಿಲೆದ್ದ ಬಳಿಕ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ.
ನಗರದ ಹಳೆಯ ಕಛೇಹ್ರಿ ಪ್ರದೇಶದಲ್ಲಿರುವ ದರ್ಗಾದ ಸಮೀಪ ಹನಮಾನ್ ವಿಗ್ರಹ ಪ್ರತಿಷ್ಠಾಪಿಸುವ ಕುರಿತ ವಿವಾದ ಘರ್ಷಣೆಗೆ ಕಾರಣವಾಯಿತು. ವಿವಾದವನ್ನು ಪರಿಹರಿಸಲು ಪೊಲೀಸರು ಎರಡು ಗುಂಪುಗಳ ನಡುವೆ ಮಾತುಕತೆ ಏರ್ಪಡಿಸಿದ್ದ ಸಂದರ್ಭ ಅನಾಮಿಕ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು ಎಂದು ನೀಮಚ್ ಪೊಲೀಸ್ ಅಧೀಕ್ಷಕ ಸೂರಜ್ ವರ್ಮಾ ಅವರು ಹೇಳಿದ್ದಾರೆ.
ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದವು ಹಾಗೂ ಮೂರು ಬೈಕ್ಗಳಿಗೆ ಹಾನಿ ಉಂಟು ಮಾಡಿದರು. ಈ ಘರ್ಷಣೆಯಲ್ಲಿ ಬಾಲಕನೋರ್ವ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ಕಾರ್ಯಕ್ರಮ, ರ್ಯಾಲಿ ಆಯೋಜಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಅಲ್ಲದೆ, ಇಂತಹ ಘಟನೆಗಳಿಗೆ ಸಂಬಂಧಿಸಿ ಯಾವುದೇ ಘೋಷಣೆ ಮಾಡುವುದನ್ನು ನಿರ್ಬಂಧಿಸಿದೆ.