ಮಥುರಾದ ಶಾಹಿ ಈದ್ಗಾ ಸ್ಥಳಾಂತರ ಕೋರಿ ಮನವಿ: ಜುಲೈ 20ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
ಮಥುರಾ, ಮೇ 21: ಕಾಟ್ರ ಕೇಶವ ದೇವ್ ದೇಗುಲದ ಸ್ಥಳದಿಂದ ಶಾಹಿ ಮಸೀದಿ ಈದ್ಗಾವನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿ ನಾಗಾ ಬಾಬಾ ಅವರ ಅನುಯಾಯಿ ಗೋಪಾಲ ಬಾಬಾ ಅವರು ಕಳೆದ ವರ್ಷ ಸಲ್ಲಿಸಿದ ಮನವಿಯ ವಿಚಾರಣೆಯ ಮುಂದಿನ ದಿನಾಂಕವನ್ನು ಉತ್ತರಪ್ರದೇಶದ ತ್ವರಿತ ನ್ಯಾಯಾಲಯ ಜುಲೈ 20ಕ್ಕೆ ನಿಗದಿಪಡಿಸಿದೆ.
ಉತ್ತರಪ್ರದೇಶದ ಬಾರ್ ಕೌನ್ಸಿಲ್ ಮೇ 20ರಂದು ಕೆಲಸ ಸ್ಥಗಿತಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಲಾಗಿದೆ ಎಂದು ದೂರುದಾರರ ಪರ ನ್ಯಾಯವಾದಿ ದೀಪಕ್ ಶರ್ಮಾ ಅವರು ಹೇಳಿದ್ದಾರೆ. ಕಾಟ್ರ ಕೇಶವ ದೇವ ದೇಗುಲದ 13.37 ಎಕರೆ ಜಮೀನಿನ ಒಂದು ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಶಾಹಿ ಮಸೀದಿ ಈದ್ಗಾವನ್ನು ಸ್ಥಳಾಂತರಿಸುವಂತೆ ಪರಮಾತ್ಮ ಕೃಷ್ಣನ ಅನುಯಾಯಿ ಎಂದು ಪ್ರತಿಪಾದಿಸುತ್ತಿರುವ ಗೋಪಾಲ ಬಾಬಾ 2021 ಸೆಪ್ಟಂಬರ್ 20ರಂದು ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದರು. ತರುವಾಯ ಮಥುರಾ ಜಿಲ್ಲಾ ನ್ಯಾಯಾಧೀಶರ ಆದೇಶದಂತೆ ಈ ಮನವಿಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ (ತ್ವರಿತ ನ್ಯಾಯಾಲಯ) ನೀರಜ್ ಗೌಂಡ್ ಅವರಿಗೆ ವರ್ಗಾಯಿಸಲಾಗಿತ್ತು ಎಂದು ಶರ್ಮಾ ಅವರು ತಿಳಿಸಿದ್ದಾರೆ.