ಬೆಂಗಳೂರು: ಲಂಚ ಬೇಡಿಕೆ ಆರೋಪ; ಉಪ ತಹಶೀಲ್ದಾರ್ ಎಸಿಬಿ ಬಲೆಗೆ
ಬೆಂಗಳೂರು, ಮೇ 21: ಆದೇಶವೊಂದರ ಸಂಬಂಧ 5 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಉಪ ತಹಶೀಲ್ದಾರ್ ಮಹೇಶ್ ಎಂಬುವರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿದೆ.
ಇಲ್ಲಿನ ಬೇಗೂರು ನಿವಾಸಿವೊಬ್ಬರು ಕೊಡ್ಲು ಗ್ರಾಮದ ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ರೆವೆನ್ಯೂ ಅಪೀಲ್ ಪ್ರಕರಣವೊಂದು ವಿಚಾರಣೆ ನಡೆಯುತ್ತಿದ್ದು, ಇದಕ್ಕೆ ನಿವಾಸಿಯ ಪರವಾಗಿ ಆದೇಶ ನೀಡಲು ಆರೋಪಿ ಉಪ ತಹಶೀಲ್ದಾರ್ ಮಹೇಶ್ 5 ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ದೂರಿನನ್ವಯ ಕಾರ್ಯಾಚರಣೆ ನಡೆಸಿದಾಗ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಸಹಾಯಕ ಚೇತನ್ಕುಮಾರ್ ಮುಖಾಂತರ 5 ಲಕ್ಷ ರೂ. ಲಂಚ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
Next Story