ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ: ಎಸ್ಸೈ ಉದಯರವಿ
ಸಂಪ್ಯ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಮುಖಂಡರ ಸಭೆ

ಪುತ್ತೂರು, ಮೇ 23: ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ನಿತ್ಯ ಧ್ವನಿವರ್ಧಕ ಬಳಸಲು ಸರಕಾರದ ಆದೇಶದಂತೆ ಅನುಮತಿ ಪಡೆದುಕೊಳ್ಳುವುದು ಹಾಗೂ ಆದೇಶದಲ್ಲಿ ಸೂಚಿಸಿರುವಂತೆ ಶಬ್ದ ಮಿತಿ ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಸೈ ಉದಯರವಿ ತಿಳಿಸಿದ್ದಾರೆ.
ಅವರು ಸೋಮವಾರ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮತ್ತು ಮೆರವಣಿಗೆಗೆ ಧ್ವನಿವರ್ಧಕ ಬಳಸುವ ವಿಚಾರವಾಗಿ ಹಾಗೂ ಧ್ವನಿವರ್ಧಕ ಶಬ್ದ ಮಿತಿ ಪಾಲನೆಯ ಕುರಿತು ಗ್ರಾಮಾಂತರ ಠಾಣೆಯಲ್ಲಿ ನಡೆದ ಧಾರ್ಮಿಕ ಕೇಂದ್ರಗಳ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಈ ಮಾಹಿತಿ ನೀಡಿದರು.
ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಿತ್ಯ ಧ್ವನಿ ವರ್ಧಕ ಬಳಸುವ ಹಾಗೂ ಮೆರವಣಿಗೆಗಳಿಗೆ ಧ್ವನಿವರ್ಧಕ ಬಳಸುವ ಕುರಿತು ಮಾಹಿತಿ ನೀಡಿದ ಸಂಪ್ಯ ಠಾಣೆಯ ಎಸ್ಸೈ, ಮಸೀದಿ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ನಿತ್ಯ ಧ್ವನಿವರ್ಧಕ ಬಳಸುವವರು ಸರಕಾರದ ಆದೇಶದಂತೆ ಧ್ವನಿವರ್ಧಕ ಬಳಸಲು ಅನುಮತಿ ಪಡೆಯುವುದು ಹಾಗೂ ಆದೇಶದಲ್ಲಿ ಸೂಚಿಸಿರುವಂತೆ ಶಬ್ದ ಮಿತಿ ಪಾಲಿಸುವುದು ಕಡ್ಡಾಯವಾಗಿದೆ. ಬೆಳಗ್ಗೆ ಗಂಟೆ 6ರಿಂದ ರಾತ್ರಿ 10ರ ತನಕ 55 ಡೆಸಿಬಲ್ ಶಬ್ದ ಮಿತಿಯೊಂದಿಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ. ಸಂಬಂಧಪಟ್ಟ ಧಾರ್ಮಿಕ ಕೇಂದ್ರಗಳ ಸಂಘಟಕರು 15 ದಿನದೊಳಗೆ ಧ್ವನಿವರ್ಧಕ ಬಳಕೆಗಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದರು.
ಅರ್ಜಿ ನಮೂನೆ ಠಾಣೆಯಲ್ಲೇ ಲಭ್ಯವಿದ್ದು, ಅರ್ಜಿಯನ್ನು ಭರ್ತಿ ಮಾಡಿ ಠಾಣೆಯಲ್ಲೇ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಡಿವೈಎಸ್ಪಿ ಅವರಿಂದ ಅನುಮತಿ ನೀಡುವ ಪ್ರಕ್ರಿಯೆ ನಡೆಯಲಿದೆ. ಪ್ರಸಕ್ತ ಧ್ವನಿವರ್ಧಕ ಬಳಸಿಕೊಂಡು ಇದ್ದವರ ಪೈಕಿ ಅನುಮತಿ ಪಡೆದುಕೊಳ್ಳಲು ಇಚ್ಛಿಸದವರು ಸ್ವತಃ ತಾವಾಗಿಯೇ ಧ್ವನಿವರ್ಧಕ ತೆರವು ಮಾಡಬಹುದಾಗಿದೆ ಎಂದು ತಿಳಿಸಿದರು.
ಪರವಾನಿಗೆ ಪಡೆದುಕೊಂಡ ಬಳಿಕ ಶಬ್ದ ಮಿತಿ ಪಾಲನೆ ಕಡ್ಡಾಯವಾಗಿದ್ದು, ಸಂಬಂಧಪಟ್ಟ ಎಲೆಕ್ಟ್ರಿಶಿಯನ್ ತಜ್ಞರ ಮೂಲಕ ಪರಿಶೀಲನೆ ಕಾರ್ಯ ಇಲಾಖೆಯಿಂದ ನಡೆಯಲಿದೆ. ಅನುಮತಿಯ ನಿಯಮಗಳ ಪಾಲನೆಯಾಗದಿದ್ದಲ್ಲಿ ಇಲಾಖೆಯಿಂದ ತೆರವುಗೊಳಿಸುವ ಕಾನೂನು ಕ್ರಮವೂ ಇರಲಿದೆ ಎಂದು ಅವರು ತಿಳಿಸಿದರು.
ಮಳೆಗಾಲದಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಳ್ಳತನ, ಅಂಗಡಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಈ ಬಗ್ಗೆ ಜನತೆ ಎಚ್ಚರ ವಹಿಸಬೇಕು. ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಇರುವವರು ಮಳೆಗಾಲಕ್ಕೆ ಮುಂಚಿತವಾಗಿ ಅದನ್ನು ಸರಿಪಡಿಸಿಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸುಳಿವು ಲಭಿಸಿದರೆ ಈ ಕುರಿತು ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಅವರು ತಿಳಿಸಿದರು.
ಠಾಣೆಯ ಸಿಬ್ಬಂದಿ ಪ್ರವೀಣ್ ರೈ ಸ್ವಾಗತಿಸಿ, ವಂದಿಸಿದರು.







