ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ | ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ: ಪಿಯುಸಿಎಲ್

ಬೆಂಗಳೂರು, ಮೇ 23: ‘ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರದ ಹಕ್ಕು ಸಂರಕ್ಷಣೆ ಸುಗ್ರೀವಾಜ್ಞೆ ಹೊರಡಿಸಬೇಕಾದ ಸನ್ನಿವೇಶ, ತುರ್ತಾಗಲಿ ಇರಲಿಲ್ಲ. ಇದು ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ. ಇದು ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ವಿಧಿಸಿರುವ ಅಧಿಕಾರ ವಿಭಜನೆಯ ತತ್ವಗಳ ಅಣಕ' ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಕರ್ನಾಟಕ ಟೀಕಿಸಿದೆ.
ಸೋಮವಾರ ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಪಿಯುಸಿಎಲ್ ಅಧ್ಯಕ್ಷ, ನ್ಯಾಯವಾದಿ ಅರವಿಂದ್ ನಾರಾಯಣ್, ಪ್ರಧಾನ ಕಾರ್ಯದರ್ಶಿ ರಾಬಿನ್ ಕ್ರಿಸ್ಟೋಫರ್ ಹಾಗೂ ಬೆಂಗಳೂರು ನಗರ ಘಟಕದ ಅಧ್ಯಕ್ಷ ಶುಜಾಯತುಲ್ಲಾಹ್, ‘ಮತಾಂತರ ನಿಷೇಧ ತಿದ್ದುಪಡಿ ಎಲ್ಲ ಭಾರತೀಯರಿಗೆ ಸಂವಿಧಾನ ಖಾತ್ರಿ ಪಡಿಸಿರುವ ಸಾಂವಿಧಾನಿಕ ಸ್ವತಂತ್ರಗಳ ಮೇಲಿನ ದಾಳಿಯಾಗಿದೆ. ಇದರಿಂದಾಗಿ ಈವರೆಗೂ ವಿವಿಧ ಧರ್ಮಗಳು, ನಂಬಿಕೆಗಳ ನಡುವೆ ಇದ್ದ ಶ್ರೀಮಂತ ಸಾಂಸ್ಕೃತಿಕ ಸಂಬಂಧಗಳು ಮತ್ತು ಜಾತ್ಯತೀತ ತತ್ವಗಳಿಗೆ ಮತ್ತು ಸೌಹಾರ್ದತೆಗೆ ಮಸಿ ಬಳಿದಂತೆ ಆಗಿದೆ' ಎಂದು ಆಕ್ಷೇಪಿಸಿದ್ದಾರೆ.
‘ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಲ್ಪಸಂಖ್ಯಾತರು ಭಯ ಮತ್ತು ಅಭದ್ರತೆಗಳಿಂದ ನರಳುತ್ತಿವೆ. ಚರ್ಚ್ಗಳನ್ನು ಒಡೆಯುವ ಬೆದರಿಕೆಯನ್ನು ಹಿಂದುತ್ವ ಸಂಘಟನೆಗಳು ನೇರವಾಗಿ ಹಾಕುತ್ತಿವೆ. ಮತೀಯ ಪೊಲೀಸ್ಗಿರಿ ಹೆಸರಿನಲ್ಲಿ ಅಲ್ಪಸಂಖ್ಯಾತರ ಚಲನವಲನಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಅಝಾನ್ ಮೇಲಿನ ನಿರ್ಬಂಧ, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ, ಹಿಜಾಬ್ ನಿರ್ಬಂಧ ಇತ್ಯಾದಿ ಕ್ರಮಗಳ ಮೂಲಕ ಮುಸ್ಲಿಮರನ್ನು ಭಯ ಮತ್ತು ಅಭದ್ರತೆಯಿಂದ ನರಳುವಂತೆ ಮಾಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.
‘ಸಮಾನತೆ, ಬಂಧುತ್ವ, ಘನತೆಯನ್ನು ಎತ್ತಿಹಿಡಿಯುವ, ಭೇದ-ಭಾವವನ್ನು ಒಪ್ಪದಿರುವ ಸಾಂವಿಧಾನಿಕ ಶ್ರೇಷ್ಠ ಪರಿಕಲ್ಪನೆಗಳ ಮೇಲೆ ದಾಳಿ ಎಸುಗುತ್ತಿರುವ ಹಿಂದೂತ್ವ ಗುಂಪುಗಳ ಚಟುವಟಿಕೆಯನ್ನು ಗಮನಿಸಿ, ನಿಗ್ರಹಿಸುವ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಈ ಸ್ಥಿತಿಯಲ್ಲಿ ರಾಜ್ಯಪಾಲರು ಹೊರಡಿಸಿರುವ ಸುಗ್ರಿವಾಜ್ಞೆ ಮತ್ತು ಸಂಪುಟದ ನಿರ್ಧಾರವು ಈ ಪುಂಡರ ಗುಂಪುಗಳಿಗೆ ಸರಕಾರದ ಬೆಂಬಲ ಇದೆ ಎನ್ನುವುದನ್ನು ಸ್ಪಷ್ಟ. ಈ ಸುಗ್ರೀವಾಜ್ಞೆಯನ್ನು ಹೊರಡಿಸುವ ಮುನ್ನ ರಾಜ್ಯಪಾಲರು, ಅಲ್ಪಸಂಖ್ಯಾತರ ಮೇಲೆ ನಡೆದ ಈ ಎಲ್ಲ ಹಲ್ಲೆ, ದಾಳಿಗಳನ್ನು ಗಮನಕ್ಕೆ ತೆಗೆದುಕೊಳ್ಳದಿರುವುದು ಕಳವಳಕಾರಿ ಸಂಗತಿ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಪಿಯುಸಿಎಲ್ ತನ್ನ ಇತ್ತೀಚಿನ ವರದಿಯಲ್ಲಿ (CRIMINALISING THE PRACTICE OF FAITH) ಕ್ರೈಸ್ತರ ವಿರುದ್ಧ ನಡೆದ ಈ ರೀತಿಯ 62 ನಿರ್ದಿಷ್ಟ ಪ್ರಕರಣಗಳನ್ನು ದಾಖಲಿಸಿದೆ. ಮತಾಂತರ ಎಂಬ ಭಯ ಸೃಷ್ಟಿಸಿ ಅದನ್ನು ಮುಂದು ಮಾಡಿ, ಕುಕೃತ್ಯ ನಡೆಸಿರುವುದನ್ನು ಈ ವರದಿ ಅನಾವರಣಗೂಳಿಸಿದೆ. ಈ ಸುಗ್ರೀವಾಜ್ಞೆ ಸಂಘ ಪರಿವಾರದ ಕಾನೂನುಬಾಹಿರ ಮತ್ತು ಬಲವಂತದ ಬೆದರಿಕೆಗಳಿಗೆ ಕಾನೂನಿನ ಮಾನ್ಯತೆ ದೂರಕಿಸಿಕೊಡುತ್ತದೆ. ಈ ಸುಗ್ರೀವಾಜ್ಞೆಯಿಂದಾಗಿ, ಅಲ್ಪಸಂಖ್ಯಾತರ ಮೇಲಿನ ಹಲ್ಲೆ ದಾಳಿಗೆ ಸಂಬಂಧಿಸಿದಂತೆ ಅಪಾಯಕಾರಿಯಾದ ಹೊಸ ಹಂತ ತಲುಪಿದಂತಾಗಿದೆ' ಎಂದು ಅವರು ಟೀಕಿಸಿದ್ದಾರೆ.
ಈ ಸುಗ್ರೀವಾಜ್ಞೆ ಕಾನೂನುಬಾಹಿರ ಮತಾಂತರದ ವಿರುದ್ಧವಿದೆ ಎಂಬ ಮುಖವಾಡವನ್ನೂ ಕಳಚಿಟ್ಟಿದೆ. ಈಗ ಮತಾಂತರ ಆಗಬೇಕಾದರೆ ಆಡಳಿತಶಾಹಿ ಪೊಲಿಸ್ ನಿರ್ಬಂಧಗಳ ವ್ಯಾಪ್ತಿಯಲ್ಲಿ ಆಗಬೇಕಾಗುತ್ತದೆ. ಸುಗ್ರಿವಾಜ್ಞೆಯ 8ನೆ ನಿಯಮದ ಪ್ರಕಾರ ಮತಾಂತರಗೊಳ್ಳುವ ವ್ಯಕ್ತಿ ಮತ್ತು ಮತಾಂತರ ಪ್ರಕ್ರಿಯೆ ನಡೆಸುವ ವ್ಯಕ್ತಿಯು 30ದಿವಸ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಅರ್ಜಿ ಕೊಡಬೇಕು ಎಂದರೆ ನಮಗೆ ಸಂವಿಧಾನ ನೀಡಿದ ಹಕ್ಕುಗಳ ರಕ್ಷಣೆಗೆ ಹೋರಾಡುವುದು ಇಂದಿನ ಅನಿವಾರ್ಯತೆ ಹೊರತುಪಡಿಸಿ ನಮಗೆ ಬೇರೆ ದಾರಿಯಿಲ್ಲ' ಎಂದು ಅವರು ತಿಳಿಸಿದ್ದಾರೆ.
‘ಪ್ರೇಮ ವಿವಾಹಗಳನ್ನು ಅದರಲ್ಲಿಯೂ ವಿಶೇಷವಾಗಿ, ಅಂತರ ಧರ್ಮೀಯ ವಿವಾಹಗಳನ್ನು ಮದುವೆಯ ಭರವಸೆಯೊಂದಿಗಿನ ಮತಾಂತರ ಎಂಬುದರ ಕೆಳಗೆ ಅಪರಾಧ ಎಂದು ಪರಿಗಣಿಸಬಹುದಾಗಿದೆ. ಇದು ತಮಗೆ ಬೇಕಾದವರನ್ನು ವಿವಾಹವಾಗುವ ಮತ್ತು ಬೇಕಾದ ಧರ್ಮವನ್ನು ಆಯ್ಕೆ ಮಾಡಿ ಕೊಳ್ಳುವ ಸಂವಿಧಾನದತ್ತ ಹಕ್ಕನ್ನು ನಿರಾಕರಿಸುತ್ತದೆ'
-ಅರವಿಂದ್ ನಾರಾಯಣ್ ಪಿಯುಸಿಎಲ್-ಕರ್ನಾಟಕ ಅಧ್ಯಕ್ಷ







