ಕುತುಬ್ ಮಿನಾರ್ ಒಂದು ಆರಾಧನಾ ಸ್ಥಳವಲ್ಲ, ಅದರ ಈಗಿನ ಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ: ಪುರಾತತ್ವ ಇಲಾಖೆ ಹೇಳಿಕೆ
"ಸ್ಮಾರಕದಲ್ಲಿ ಆರಾಧನೆ ಪ್ರಾರಂಭಿಸಲು ಕಾನೂನಿನಲ್ಲಿ ಆಸ್ಪದವಿಲ್ಲ"
ಹೊಸದಿಲ್ಲಿ: ಮೆಹ್ರೋಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದ ನಿರ್ಮಾಣಕ್ಕಾಗಿ 27 ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಿಕೊಂಡು ಅಲ್ಲಿನ ದೇವಳಗಳನ್ನು ಪುನರ್ ಸ್ಥಾಪಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆಗೆ ಪ್ರತಿಕ್ರಿಯಿಸಿದ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಕುತುಬ್ ಮಿನಾರ್ ಆರಾಧನೆಯ ಸ್ಥಳವಲ್ಲ, ಅದರ ಈಗಿನ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಮೆಹ್ರೋಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಲವು ಕೆತ್ತನೆಗಳು ಇರುವುದನ್ನು ಒಪ್ಪಿಕೊಂಡಿರುವ ಇಲಾಖೆ, ಅದೇ ಸಮಯ ಈ ನಿರ್ಮಾಣವು 1914ರಿಂದ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆ 1904 ಅನ್ವಯ ಸಂರಕ್ಷಿತ ಸ್ಮಾರಕವಾಗಿದೆ ಹಾಗೂ ಅದನ್ನು ಅದೇ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ.
ಇಂತಹ ಒಂದು ಸ್ಮಾರಕದಲ್ಲಿ ದೇವರ ಆರಾಧನೆಯನ್ನು ಪ್ರಾರಂಭಿಸಲು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆ 1958 ಅನ್ವಯ ಯಾವುದೇ ಆಸ್ಪದವಿಲ್ಲ ಹಾಗೂ ಅರ್ಜಿದಾರರು ಹೇಳಿದಂತೆ ದೇವಸ್ಥಾನಗಳನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಜೈನ ತೀರ್ಥಂಕರ ರಿಷಬ್ ದೇವ್ ಅವರ ಪರವಾಗಿ ಹರಿ ಶಂಕರ್ ಜೈನ್ ಎಂಬವರು ಅರ್ಜಿ ಸಲ್ಲಿಸಿದ್ದರು. ಇದನ್ನು ವಿರೋಧಿಸಿ ಪುರಾತತ್ವ ಇಲಾಖೆ ಮೇಲಿನಂತೆ ನ್ಯಾಯಾಲಯದಲ್ಲಿ ಹೇಳಿದೆ.