ದ.ಕ.ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಅಸಹಾಯಕರೇ ? : ಡಿವೈಎಫ್ಐ ಪ್ರಶ್ನೆ
ಮಳಲಿ ಮಸೀದಿ ವಿಚಾರ

ಮಂಗಳೂರು: ಮಳಲಿ ಪೇಟೆಯ ಪುರಾತನ ಜುಮಾ ಮಸೀದಿಗೆ ಸಂಬಂಧಿಸಿದಂತೆ ಹಿಂದುತ್ವ ಸಂಘಟನೆಗಳು ನಡೆಸುವ ಕೋಮುಗಲಭೆಯ ಪಿತೂರಿಯ ಮುಂದೆ ದ.ಕ.ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ಯಾಕೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಮಸೀದಿಯ ಜಾಗದಲ್ಲಿ ಹಿಂದೆ ಏನಿತ್ತು ಎಂದು ವೈದಿಕರನ್ನು ಕರೆಸಿ ತಾಂಬೂಲ ಪ್ರಶ್ನೆ ಇಡುವುದು, ಅದರ ಆಧಾರದಲ್ಲಿ ಮಸೀದಿ ಹೌದೊ, ಅಲ್ಲವೊ ಎಂದು ನಿರ್ಧರಿಸಲು ವಿಶ್ವ ಹಿಂದೂ ಪರಿಷತ್ನವರು ಯಾರು? ಅವರಿಗೆ ಇದೆಲ್ಲಾ ಅಧಿಕಾರ ದಕ್ಕಿದ್ದು ಹೇಗೆ? ದ.ಕ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ವಿಹಿಪಂನ ಶರಣ್ ಪಂಪ್ವೆಲ್ರಂತಹವರ ಮುಂದೆ ಅಸಹಾಯಕರಂತೆ ನಿಲ್ಲುವುದು ಯಾಕೆ ಎಂದು ಪ್ರಶ್ನಿಸಿರುವ ಮುನೀರ್ ಕಾಟಿಪಳ್ಳ ಅನಗತ್ಯವಾಗಿ ಮಸೀದಿ ನವೀಕರಣದಲ್ಲಿ ಮೂಗು ತೂರಿಸಿರುವ, ತಾಂಬೂಲ ಪ್ರಶ್ನೆಯಂತಹ ಜನರ ಭಾವನೆ, ನಂಬಿಕೆಗಳನ್ನು ದುರುಪಯೋಗಪಡಿಸಿ ಕೋಮುಗಲಭೆಗೆ ಪಿತೂರಿ ನಡೆಸುತ್ತಿರುವ ಶರಣ್ ಪಂಪ್ವೆಲ್ ಮತ್ತಿತರರನ್ನು ಪೊಲೀಸರು ತಕ್ಷಣ ಬಂಧಿಸಿ ಜೈಲಿಗಟ್ಟಬೇಕು. ಮಳಲಿ ಗ್ರಾಮ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.