ಮಳಲಿ ಮಸೀದಿಯ ಕುರಿತು ಶರಣ್ ಪಂಪ್ವೆಲ್ರ ಹೇಳಿಕೆಗೆ ಯುನಿವೆಫ್ ಖಂಡನೆ
ಮಂಗಳೂರು: ಮಳಲಿಯ ಮಸೀದಿಗೆ ಸಂಬಂಧಿಸಿದಂತೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಅಲ್ಲಿ ಮುಂಚೆ ದೇವಾಲಯವಿತ್ತು ಎಂಬ ಕಪೋಕಲ್ಪಿತ ಹೇಳಿಕೆ ನೀಡಿ ಪರಿಸ್ಥಿತಿಯನ್ನು ವಿವಾದಾಸ್ಪದಗೊಳಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಹಿಂದುತ್ವ ಸಂಘಟನೆಯ ಶರಣ್ ಪಂಪ್ವೆಲ್ ನೀಡಿರುವ ಹೇಳಿಕೆಯು ಖಂಡನೀಯ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
ಬಳಿಕ ಜಿಲ್ಲಾಧಿಕಾರಿಯು ಕೋರ್ಟ್ ತೀರ್ಪು ಸಿಗುವ ತನಕ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದರೂ ಬುಧವಾರ ಕೇರಳದ ಜ್ಯೋತಿಷಿಯ ಮೂಲಕ ತಾಂಬೂಲ ಪ್ರಶ್ನೆಯ ಮೂಲಕ ಅಲ್ಲಿ ಶಿವನ ಆರಾಧನೆಯನ್ನು ಮುಂಚೆ ಮಾಡಲಾಗಿತ್ತು ಎಂಬ ಅವೈಜ್ಞಾನಿಕ ಹೇಳಿಕೆಯನ್ನು ನೀಡಲಾಗಿದೆ. ಅದನ್ನು ಮುಂದಿಟ್ಟುಕೊಂಡು ಶರಣ್ ಪಂಪ್ವೆಲ್ ಮಸೀದಿಯನ್ನು ಹಿಂದೂಗಳಿಗೆ ಮರಳಿ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದಿರುವುದು ಅಕ್ಷಮ್ಯ. ಪರಿಸ್ಥಿತಿಯ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುತ್ತಿರುವ ಕೆಲವು ಶಕ್ತಿಗಳು ಈ ವಿಚಾರವನ್ನು ವಿವಾದಾಸ್ಪದ ಮಾಡಿ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನವನ್ನು ಮಾಡುತ್ತಿರುವಾಗ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುನಿವೆಫ್ ಆಗ್ರಹಿಸಿದೆ.