ಅತಿಯಾದ ಭಾವನಾತ್ಮಕದಿಂದ ಸತ್ಯ ಗೋಚರಿಸದು: ವಿವೇಕ ಆಳ್ವ

ಬಂಟ್ವಾಳ, ಮೇ 28: ಸಂಶೋಧನೆ ಮತ್ತು ಇತಿಹಾಸ ಪ್ರಜ್ಞೆ ಎಲ್ಲರಿಗೂ ಅಗತ್ಯ. ಸಂಕುಚಿತ ಮನೋಧರ್ಮ ಮತ್ತು ಅತಿಯಾದ ಭಾವನಾತ್ಮಕದಿಂದ ಸತ್ಯ ಗೋಚರಿಸುತ್ತಿಲ್ಲ. ಇಂತಹ ಅಡ್ಡಿಗಳನ್ನು ಬದಿಗೆ ಸರಿಸಿ ಶುದ್ದ ಕಣ್ಣಿನಿಂದ ಸಮಾಜವನ್ನು ನೋಡುವಂತಾಗಬೇಕು ಎಂದು ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ನುಡಿದರು.
ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ವತಿಯಿಂದ ಬಿ.ಸಿ.ರೋಡಿನ ಸಂಚಯಗಿರಿಯ ತುಳು ಬದುಕು ವಸ್ತು ಸಂಗ್ರಹಾಲಯದ ಸಭಾಂಗಣದಲ್ಲಿ ನಡೆದ 'ತುಳುವ ಇತಿಹಾಸ ಶೋಧ – ವೀಕ್ಷಣೆ ಮತ್ತು ಅವಲೋಕನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಫ್ರಾನ್ಸ್ ನ ಸಂಶೋಧಕ ವಿನ್ಸೆಂಟ್ ಮಾತನಾಡಿ, ಫ್ರಾನ್ಸ್ ನಲ್ಲಿ ಇತಿಹಾಸ ಮ್ಯೂಸಿಯಂಗೆ ಬಹಳ ಮಹತ್ವ ಇದೆ. ಬಂಟ್ವಾಳದ ವಸ್ತು ಸಂಗ್ರಹಾಲಯ ತುಳುನಾಡಿನ ಜನ ಜೀವನದ ಪ್ರತಿಬಿಂಬ. ಜಾಗತಿಕ ಮಹತ್ವವುಳ್ಳದ್ದು ಎಂದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಮಾತನಾಡಿ, ತುಳು ನಾಡು ಸಮೃದ್ಧ ಪ್ರಕೃತಿಯ ನಾಡು. ಬಹು ಸಂಖ್ಯೆಯಲ್ಲಿ ಇಲ್ಲಿ ಹುಲಿಗಳಿತ್ತು. ಸಂಸ್ಕೃತಿಯ ನಾಶದ ಪ್ರಾಯಶ್ಚಿತವಾಗಿ ಸಂಸ್ಕೃತಿಯ ವೈಭವೀಕರಣ ನಡೆಯುತ್ತಿದ್ದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಶುಭ ಹಾರೈಸಿದರು. ರಾಣಿ ಅಬ್ಬಕ ಮತ್ತು ತುಳುನಾಡಿನ ಆಡಳಿತ ವ್ಯವಸ್ಥೆ, ಭೌತಿಕ ಸಂಸ್ಕೃತಿಗಳು ಕಟ್ಟಿಕೊಡುವ ತುಳುನಾಡಿನ ಇತಿಹಾಸ ಮೊದಲಾದ ವಿಷಯಗಳಲ್ಲಿ ವಿಚಾರ ಗೋಷ್ಠಿ ನಡೆಯಿತು.
ವಿದ್ಯಾರ್ಥಿಗಳಾದ ಹೇಮಂತ್ ಕುಮಾರ್, ಸ್ಪರ್ಶ ಪಂಜಿಕಲ್ ಅನಿಸಿಕೆ ವ್ಯಕ್ತಪಡಿಸಿದರು. ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ ಕೈರೋಡಿ ಪ್ರಸ್ತಾವನೆಗೈದರು.







