ವರದಕ್ಷಿಣೆ ಕಿರುಕುಳ; ಇಬ್ಬರು ಮಕ್ಕಳ ಸಹಿತ ಮೂವರು ಸಹೋದರಿಯರು ಆತ್ಮಹತ್ಯೆ
![ವರದಕ್ಷಿಣೆ ಕಿರುಕುಳ; ಇಬ್ಬರು ಮಕ್ಕಳ ಸಹಿತ ಮೂವರು ಸಹೋದರಿಯರು ಆತ್ಮಹತ್ಯೆ ವರದಕ್ಷಿಣೆ ಕಿರುಕುಳ; ಇಬ್ಬರು ಮಕ್ಕಳ ಸಹಿತ ಮೂವರು ಸಹೋದರಿಯರು ಆತ್ಮಹತ್ಯೆ](https://www.varthabharati.in/sites/default/files/images/articles/2022/05/29/336892-1653790888.jpg)
(ಫೋಟೊ- ndtv.com)
ಜೈಪುರ: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮೂವರು ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರ ಪೈಕಿ ಇಬ್ಬರು ಗರ್ಭಿಣಿಯರು ಎನ್ನಲಾಗಿದ್ದು, ನಾಲ್ಕು ವರ್ಷದ ಗಂಡು ಮಗು ಹಾಗೂ 27 ದಿನದ ಹಸುಳೆ ಕೂಡಾ ಮೃತಪಟ್ಟಿವೆ.
ಮೃತ ಮಹಿಳೆಯರನ್ನು ಕಲು ಮೀನಾ (25), ಮಮತಾ (23) ಮತ್ತು ಕಮಲೇಶ್ (20) ಎಂದು ಗುರುತಿಸಲಾಗಿದೆ. ಈ ಮೂವರೂ ದುಡು ಜೈಪುರ ಜಿಲ್ಲೆಯ ಚಾಪಿಯಾ ಎಂಬ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಸಹೋದರರನ್ನು ವಿವಾಹವಾಗಿದ್ದರು. ಮನೆಯಲ್ಲಿ ಮೂವರೂ ಮಹಿಳೆಯರಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತಿತ್ತು ಎನ್ನುವುದು ಕುಟುಂಬದವರ ಆರೋಪ.
"ವರದಕ್ಷಿಣೆಗಾಗಿ ಸಹೋದರಿಯರಿಗೆ ಹೊಡೆದು ಕಿರುಕುಳ ನೀಡಲಾಗುತ್ತಿತ್ತು. ಮೇ 25ರಂದು ಮೂವರೂ ನಾಪತ್ತೆಯಾಗಿದ್ದರು. ಅವರ ಪತ್ತೆಗೆ ಹರಸಾಹಸ ಮಾಡಿದ್ದೆವು. ಸ್ಥಳೀಯ ಠಾಣೆ, ಮಹಿಳಾ ಸಹಾಯವಾಣಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರನ್ನೂ ನೀಡಿದ್ದೆವು. ಆದರೆ ಯಾರ ನೆರವೂ ಸಿಗಲಿಲ್ಲ" ಎಂದು ಮಹಿಳೆಯರ ಸಹೋದರ ಸಂಬಂಧಿ ಹೇಮರಾಜ್ ಮೀನಾ ಹೇಳಿದ್ದಾರೆ.
ಮಹಿಳೆಯರು ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟಿಲ್ಲವಾದರೂ, ಕಿರಿಯ ಸಹೋದರಿ ವಾಟ್ಸಪ್ ಸ್ಟೇಟಸ್ನಲ್ಲಿ "ನಾವು ಹೋಗುತ್ತಿದ್ದೇವೆ. ಖುಷಿಯಾಗಿರಿ. ನಮ್ಮ ಸಾವಿಗೆ ಕಾರಣ ಭಾವಂದಿರು. ಪ್ರತಿದಿನ ಸಾಯುವುದಕ್ಕಿಂತ ಒಮ್ಮೆ ಸಾಯುವುದು ಲೇಸು" ಎಂದು ಬರೆದಿದ್ದರು.