ಮಂಗಳೂರು ‘ಕೋಮುವಾದಿ’ಗಳ ಕೇಂದ್ರವಲ್ಲ : ಸಸಿಕಾಂತ್ ಸೆಂಥಿಲ್
‘ಸಾಮರಸ್ಯ ಮಂಗಳೂರು’ ವತಿಯಿಂದ ‘ಸೌಹಾರ್ದ ಸಮ್ಮಿಲನ’ ಕಾರ್ಯಕ್ರಮ

ಮಂಗಳೂರು : ಮಂಗಳೂರು ಕೋಮುವಾದಿಗಳ ಕೇಂದ್ರ ಎಂಬ ಭಾವನೆ ಕೆಲವರಲ್ಲಿದೆ. ಸುಮಾರು ಎರಡುವರೆ ವರ್ಷಗಳ ಕಾಲ ದ.ಕ.ಜಿಲ್ಲಾಧಿಕಾರಿಯಾಗಿದ್ದಾಗ ಇಲ್ಲಿನ ಸ್ಥಿತಿಗತಿಗಳನ್ನು ತುಂಬಾ ಹತ್ತಿರದಿಂದ ತಿಳಿದು ಕೊಂಡಿರುವ ನನಗೆ ಮಂಗಳೂರು ಕೋಮುವಾದಿಗಳ ಕೇಂದ್ರವೆಂದು ಅನಿಸಿಲ್ಲ. ಇಲ್ಲಿನ ಶೇ.೧೦ರಷ್ಟು ಮಂದಿ ಮಾತ್ರ ಕೋಮು ಸಾಮರಸ್ಯ ಹದಗೆಡಿಸುತ್ತಿದ್ದಾರೆ. ಉಳಿದಂತೆ ಶೇ.೯೦ರಷ್ಟು ಮಂದಿ ಕೋಮು ಸಾಮರಸ್ಯಕ್ಕೆ ಹಾತೊರೆಯುತ್ತಿದ್ದಾರೆ. ಹಾಗಾಗಿ ಮಂಗಳೂರು ಯಾವತ್ತೂ ‘ಕೋಮುವಾದಿ’ಗಳ ಕೇಂದ್ರವಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟರು.
‘ಸಾಮರಸ್ಯ ಮಂಗಳೂರು‘ ಇದರ ವತಿಯಿಂದ ರವಿವಾರ ನಗರದ ಸಿವಿ ನಾಯಕ್ ಹಾಲ್ನಲ್ಲಿ ನಡೆದ ‘ಸೌಹಾರ್ದ ಸಮ್ಮಿಲನ’ ಉದ್ಘಾಟಿಸಿ ಅವರು ಮಾತನಾಡಿದರು.
ನೀವು ದಿನನಿತ್ಯ ಮಂಗಳೂರಿನಲ್ಲಿ ಸಂಚರಿಸುವಾಗ ಎಷ್ಟು ಮಂದಿಯ ಜೊತೆ ಮಾತುಕತೆ ನಡೆಸಿದಿರಿ, ವ್ಯವಹರಿಸಿದಿರಿ ಎಂಬುದರ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ. ಆವಾಗ ನಿಮ್ಮ ಮನಸ್ಸಿನಲ್ಲಿ ಕಿಂಚಿತ್ತೂ ಕೋಮುವಾದದ ಅನುಭವ ಆಗಿರುವುವುದಿಲ್ಲ. ಅದರ ಸುಳಿವೂ ಸಿಕ್ಕಿರುವುದಿಲ್ಲ. ಶೇ.೧೦ರಷ್ಟು ಮಂದಿ ಜನರಲ್ಲಿ ಮಾತ್ರ ಕೋಮುವಾದದ ಅಥವಾ ವಿಭಜನೆಯ ಮನಸ್ಥಿತಿ ಇದೆ ಎಂದ ಸಸಿಕಾಂತ್ ಸೆಂಥಿಲ್ ನೀನು ಹಿಂದೂ ಪರ ಇದ್ದೀಯಾ ಅಥವಾ ಮುಸ್ಲಿಂ ಪರ ಇದ್ದೀಯಾ? ಎಂದು ಕೇಳುವ ಬದಲು ನೀನು ಭಾರತದ ಪರ ಇದ್ದೀಯಾ? ಎಂದು ಕೇಳುತ್ತಲೇ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸಬೇಕು. ವಿಭಜನೆಯ ಮನಸ್ಥಿತಿಯನ್ನು ಕಂಡು ಸುಮ್ಮನಿ ರದೆ ಅದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.
ಭಾರತವನ್ನು ನಂಬುವವರು ಮತ್ತು ನಂಬದವರು ಯಾರು ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳ ಬೇಕು. ನಾವು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಉತ್ತಮ ಶಿಕ್ಷಣ, ಆಸ್ತಿ ಸಂಪಾದಿಸಿಕೊಟ್ಟರೆ ಸಾಲದು. ನೆಮ್ಮದಿಯಿಂದ ಬದುಕುವ ವಾತಾವರಣವನ್ನೂ ಕೂಡ ಸೃಷ್ಟಿಸಬೇಕು. ಅದಕ್ಕಾಗಿಯಾದರೂ ನಾವು ನ್ಯಾಯದ ಪರ ನಿಲ್ಲಬೇಕು. ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಹಾಗಂತ ಬೀದಿಗಿಳಿಯಬೇಕು ಅಂತ ನಾನು ಹೇಳುವುದಿಲ್ಲ. ಅವರವರ ಇತಿಮಿತಿಯೊಳಗೆ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಭಜನೆಯ ಮನಸ್ಥಿತಿಯ ಶೇ.೧೦ರಷ್ಟು ಮಂದಿಯ ಜೊತೆ ಜಗಳವಾಡುವ ಬದಲು ಜನರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.
ಹುಬ್ಬಳ್ಳಿ-ಧಾರವಾಡದ ವಿರಕ್ತಮಠದ ಗುರುಪಾದೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಯಾಗಿ ಭಾಗವಹಿಸಿದ್ದ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶಿಕಾರಿಪುರ ಕೃಷ್ಣಮೂರ್ತಿ ಮಾತನಾಡಿ ಸಾಮರಸ್ಯದಿಂದ ಕೂಡಿದ ಮಂಗಳೂರನ್ನು ಮಾಧ್ಯಮಗಳು ಅಪಾಯಕಾರಿ ನಗರ ಎಂದು ಬಿಂಬಿಸಿದೆ. ಆದಾಗ್ಯೂ ಸಾಮರಸ್ಯ ಬಯಸುವ ಎಲ್ಲರೂ ಶಿಕ್ಷಣದ ಮೂಲಕ ಮನುಷ್ಯ ಧರ್ಮದ ಸಮನ್ವಯತೆ ಸಾಧಿಸುವ ಕೆಲಸ ಮಾಡಬೇಕಿದೆ ಎಂದರು.
ದೇರೇಬೈಲ್ ಚರ್ಚ್ನ ಫಾ. ಜೋಸೆಫ್ ಮಾರ್ಟಿಸ್ ಮಾತನಾಡಿ ಭಾರತವು ಮೌಲ್ಯಯುತವಾದ, ವೈವಿಧ್ಯತೆಯ, ನೆಮ್ಮದಿಯ, ಒಗ್ಗಟ್ಟಿನ, ಪ್ರೀತಿಭರಿತ ದೇಶವಾಗಿದೆ ಎಂದು ಹೇಳಲು ನನಗೆ ಹೆಮ್ಮೆಯಿದೆ. ಜಗತ್ತಿನ ಯಾವ ರಾಷ್ಟ್ರದಲ್ಲೂ ಕೂಡ ಇಂತಹ ವೈವಿಧ್ಯತೆ ಕಾಣಲು ಸಾಧ್ಯವಿಲ್ಲ. ಭವಿಷ್ಯದಲ್ಲೂ ಈ ಐಕ್ಯತೆ, ಸೌಹಾರ್ದವನ್ನು ಉಳಿಸಿ, ಬೆಳೆಸಬೇಕಿದೆ ಎಂದರು.
ಸಾಮಾಜಿಕ ಚಿಂತಕ ಇಸಾಕ್ ಪುತ್ತೂರು ಮಾತನಾಡಿ ಯಾವ ಧರ್ಮವೂ ಕೋಮುವಾದವನ್ನು ಪ್ರತಿಪಾದಿ ಸುತ್ತಿಲ್ಲ. ಆದರೆ ಕೆಲವರು ಧರ್ಮವನ್ನು ದುರುಪಯೋಗಪಡಿಸುತ್ತಿದ್ದಾರೆ. ಧರ್ಮಗಳ ಮೌಲ್ಯವನ್ನು ನಾಶಗೊಳಿಸಿ ಕೆಡುಕುಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಧರ್ಮವನ್ನು ಕೋಮುವಾದದಿಂದ ಮುಕ್ತಗೊಳಿಸುವ ಸಲುವಾಗಿ ಇಂತಹ ಸೌಹಾರ್ದ ಸಮ್ಮಿಲನವನ್ನು ಹೆಚ್ಚೆಚ್ಚು ಆಯೋಜಿಸಬೇಕಿದೆ ಎಂದರು.
ಉಡುಪಿ ಸಹಬಾಳ್ವೆಯ ಅಧ್ಯಕ್ಷ ಅಮೃತ್ ಶೆಣೈ, ಸತ್ಯ ಸಾರಮನಿ ಯುವ ವೇದಿಕೆಯ ಕೇಂದ್ರ ಸಮಿತಿಯ ಅಧ್ಯಕ್ಷ ರಘು ಧರ್ಮಸೇನ ಬೆಳ್ತಂಗಡಿ, ಯುವ ಪತ್ರಕರ್ತ ರಾ. ಚಿಂತನ್, ವಿರಕ್ತ ಮಠದ ಉಪಾಧ್ಯಕ್ಷೆ ಮಂಜುಳಾ ಹಿರೇಮಠ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಮಾತನಾಡಿದರು.
ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಮಂಜುಳಾ ವೈ. ನಾಯಕ್ ಸ್ವಾಗತಿಸಿದರು. ಸಾಮರಸ್ಯ ಮಂಗಳೂರು ಇದರ ಸಂಚಾಲಕ ಮುಹಮ್ಮದ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.