ಪೋಷಕರಿಬ್ಬರನ್ನೂ ಕಳೆದುಕೊಂಡ 3 ಮಕ್ಕಳಿಗೆ ಸಮಗ್ರ ಕಿಟ್ ವಿತರಣೆ
![ಪೋಷಕರಿಬ್ಬರನ್ನೂ ಕಳೆದುಕೊಂಡ 3 ಮಕ್ಕಳಿಗೆ ಸಮಗ್ರ ಕಿಟ್ ವಿತರಣೆ ಪೋಷಕರಿಬ್ಬರನ್ನೂ ಕಳೆದುಕೊಂಡ 3 ಮಕ್ಕಳಿಗೆ ಸಮಗ್ರ ಕಿಟ್ ವಿತರಣೆ](https://www.varthabharati.in/sites/default/files/images/articles/2022/05/30/337045-1653922968.jpg)
ಉಡುಪಿ : ಕೋವಿಡ್-೧೯ರಿಂದ ಪೋಷಕರಿಬ್ಬರನ್ನೂ ಕಳೆದು ಕೊಂಡ ಜಿಲ್ಲೆಯ ಮೂವರು ಮಕ್ಕಳಿಗೆ ಕೇಂದ್ರ ಸರಕಾರದ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ಸ್ ಯೋಜನೆ ಅಡಿಯಲ್ಲಿ ಅನುಮೋದನೆಗೊಂಡ ಅಂಚೆ ಪಾಸ್ ಪುಸ್ತಕ, ಆಯುಷ್ಮಾನ್ ಕಾರ್ಡ್, ಪ್ರಧಾನ ಮಂತ್ರಿಗಳಿಂದ ಮಕ್ಕಳಿಗೆ ಪತ್ರ, ಸ್ನೇಹ ಪತ್ರ ಸೇರಿದಂತೆ ಸಮಗ್ರ ಕಿಟ್ಗಳನ್ನು ಸೋಮವಾರ ಜಿಪಂ ಸಭಾಂಗಣದಲ್ಲಿ ವಿತರಿಸಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಕೋವಿಡ್ ಸಂದರ್ಭದಲ್ಲಿ ಜನತೆ ಎದುರಿಸಿದ ಕಷ್ಟ ನಷ್ಟಗಳನ್ನು ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆ ಸಂದಭರ್ದಲ್ಲಿ ಎದುರಿಸಿದ ಬಾಧಕಗಳು ಇಂದಿಗೂ ನಮ್ಮ ಕಣ್ಣ ಮುಂದಿದೆ ಎಂದು ತಿಳಿಸಿದರು.
ಪೋಷಕರನ್ನು ಕಳೆದುಕೊಂಡ ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಹಾಗೂ ಅವರು ಶೈಕ್ಷಣಿಕ ಮತ್ತು ಆರ್ಥಿಕ ವಾಗಿ ಸಬಲರಾಗಲು ಈ ಯೋಜನೆ ಸಹಾಯಕವಾಗಿದೆ ಅವರುಗಳು ಇನ್ನೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕಬೇಕು. ಮುಂದೆ ಮಕ್ಕಳಿಗೆ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿಪಂ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ವೀಣಾ ವಿವೇಕಾನಂದ, ಶಿಶು ಅಭಿವೃದ್ಧಿ ಇಲಾಖೆಯ ನೋಡಲ್ ಅಧಿಕಾರಿ ಕುಮಾರ್ ನಾಯ್ಕ್, ಅಮೃತಾ ಕಲಾ ಉಪಸ್ಥಿತರಿದ್ದರು.
ಮಕ್ಕಳಿಗೆ ಪ್ರತಿ ತಿಂಗಳು ಸ್ಟೈಫಂಡ್
ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಕೋವಿಡ್ನಿಂದ ಇಬ್ಬರೂ ಪೋಷಕರು ಕಳೆದುಕೊಂಡ ೧೮ ವರ್ಷದ ಒಳಗಿನ ಮಕ್ಕಳಿಗೆ ಈ ಯೋಜನೆ ದೊರಕುತ್ತಿದ್ದು, ಅದರಂತೆ ಪ್ರತಿಯೊಬ್ಬರ ಖಾತೆಯಲ್ಲಿ ೮ಲಕ್ಷ ರೂ. ಠೇವಣಿ ಇಡಲಾಗುತ್ತದೆ. ಫಲಾನುಭವಿಗಳಿಗೆ ೨೩ ವರ್ಷ ಪೂರೈಸುವ ತನಕ ಜಿಲ್ಲಾಧಿಕಾರಿ ಗಳ ಜೊತೆ ಮಕ್ಕಳು ಜಂಟಿ ಖಾತೆ ಹೊಂದಿರುತ್ತಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.
ಅಂಚೆ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ೧೮ ವರ್ಷ ಪೂರ್ಣಗೊಂಡ ನಂತರ ಮತ್ತು ೨೩ ವಯಸ್ಸಿನ ತನಕ ಪ್ರತಿ ತಿಂಗಳು ಸ್ಟೈಪಂಡ್ ರೀತಿ ನೀಡಲಾಗುತ್ತದೆ. ಫಲಾನುಭವಿಗಳು ೨೩ ವರ್ಷ ಪೂರೈಸಿದಾಗ ಅವರ ಮುಂದಿನ ಭವಿಷ್ಯದ ಉದ್ದೇಶಕ್ಕಾಗಿ ೧೦ ಲಕ್ಷ ರೂ. ಒಟ್ಟು ಮೊತ್ತವನ್ನು ಆರ್ಥಿಕ ನೆರವಾಗಿ ನೀಡಲಾಗುವುದು. ಅದೇ ರೀತಿ ೫ ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಕೂಡ ನೀಡಲಾಗುವುದು ಎಂದರು.