ಗೌಣ ವಿಚಾರಗಳು ಕಲಿಕೆಗೆ ಬೇಕೇ?
ಮಕ್ಕಳು ಶಾಲೆಗೆ ಹೋಗುವ ಉದ್ದೇಶವಾದರೂ ಏನು? ವಿದ್ಯೆ (ಜ್ಞಾನ) ಪಡೆದು ತಾವು ಕೈಗೊಂಡ ವೃತ್ತಿಯಲ್ಲಿ ಸಾರ್ಥಕತೆಯನ್ನು ಕಾಣುವುದಾಗಿದೆ ಅಲ್ಲವೇ.
ಇಂದು ನಮ್ಮ ಶಿಕ್ಷಣ ಸಂಸ್ಥೆಗಳು, ಅದರಲ್ಲೂ ಖಾಸಗಿ ಇಂಟರ್ನ್ಯಾಷನಲ್ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ಶಾಲೆಯ ಮಕ್ಕಳು ಸಮವಸ್ತ್ರ, ಶೂ, ಟೈ ಇಲ್ಲದೆ ಶಾಲೆಗೆ ಬರಬಾರದು ಎಂಬ ನಿಯಮವನ್ನು ಜಾರಿಗೊಳಿಸಿ ಮಕ್ಕಳನ್ನು ಮತ್ತು ಪೋಷಕರನ್ನು ಭಯಭೀತರನ್ನಾಗಿಸುವುದು ಸರ್ವೇಸಾಮಾನ್ಯವಾಗಿದೆ.
ಬಡವ-ಬಲ್ಲಿದ ಎಂಬ ತಾರತಮ್ಯ ಹೋಗಬೇಕಾದರೆ ಸಮವಸ್ತ್ರ ಅಗತ್ಯ ಬೇಕೇಬೇಕು ಎಂಬುದು ಸಮವಸ್ತ್ರ ಪರ ವಾದವಾಗಿದೆ. ಇದು ನಿಜವೇ. ಶಾಲಾ ವಿದ್ಯಾರ್ಥಿಗಳು ಪ್ರವಾಸ ಹೋಗುವ ಹೊತ್ತಿಗೆ ವಿದ್ಯಾರ್ಥಿಗಳು ಕಾಣೆಯಾದಾಗ ಅವರನ್ನು ಪತ್ತೆ ಹಚ್ಚಲು ಸಮವಸ್ತ್ರ ನೆರವಾಗುತ್ತದೆ ನಿಜ. ಆದರೆ ಕಲಿಕೆಗೆ ಸಮವಸ್ತ್ರ ಅಗತ್ಯವಿಲ್ಲ. ಕಲಿಕೆಗೆ ಬೇಕಾದುದು ಕಲಿಯುವ ವಸ್ತು/ವಿಷಯ ತನ್ನ ಅವಶ್ಯಕತೆಯನ್ನು ಪೂರೈಸುವುದಿದ್ದರೆ, ತನ್ನ ಆಸಕ್ತಿಯ ವಿಷಯವಾಗಿದ್ದರೆ, ಕಲಿಕೆ ಆನಂದದಾಯಕವಾಗಿದ್ದರೆ ಮಾತ್ರ. ಅದರ ಹೊರತು ಬಾಹ್ಯ ವಿಚಾರಗಳಾದ ಹಿಜಾಬ್/ಸಮವಸ್ತ್ರ ಇತ್ಯಾದಿಗಳಿಂದಲ್ಲ.
ಅತೀ ಬಡ ಮಕ್ಕಳ ಬಟ್ಟೆ ಹರಿದರೆ ಅದಕ್ಕೆ ವ್ಯವಸ್ಥೆ ಮಾಡಿಸುವುದು, ಮಧ್ಯಾಹ್ನದ ಬಿಸಿ ಊಟ ಒದಗಿಸುವುದು ಸರಕಾರ ಅಥವಾ ಮೇಲುಸ್ತುವಾರಿ ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಕಲಿಯಬೇಕಾದುದು ನಿಜ. ಆದರೆ ನೈರ್ಮಲ್ಯ ಎಂಬ ಪರಿಕಲ್ಪನೆಯು ಮಕ್ಕಳ ಮನಸ್ಸಲ್ಲೇ ಮೂಡಬೇಕಾಗಿದೆ. ಜೊತೆಯಲ್ಲಿ ಹಿರಿಯರ ಮಾರ್ಗದರ್ಶನವೂ ಬೇಕಾಗಿದೆ.
ಇದರ ಜೊತೆಯಲ್ಲೇ ನಮಗೆದುರಾಗುವ ಇನ್ನೊಂದು ಪ್ರಚಲಿತ ಶೈಕ್ಷಣಿಕ ವಿಷಯವೆಂದರೆ ‘ಪಠ್ಯಪುಸ್ತಕ ಪರಿಷ್ಕರಣೆ’ ಎಂಬ ವಿವಾದಾತ್ಮಕ ಕಾರ್ಯಕ್ರಮ. ಆಗಬೇಕಾದುದು ಪರಿಷ್ಕರಣೆಯ ಸುಧಾರಣೆ. ಈ ಸುಧಾರಣೆ ಆಗಬೇಕಾದುದು curriculum evaluationನಿಂದ. ಅಂದರೆ ಇದರಲ್ಲಿ ಶಿಕ್ಷಣದ್ದೇ ಮುಖ್ಯಪಾತ್ರ ಹೊರತು ಶಿಕ್ಷಣ ತಜ್ಞರೆಂದೆನಿಸಿಕೊಂಡ ಸಾಹಿತಿಗಳು, ಶಿಕ್ಷಣ ಚಿಂತಕರದಲ್ಲ ಎಂದು ನಮ್ರನಾಗಿ ಹೇಳಬಯಸುತ್ತೇನೆ. ಅವಶ್ಯಕತೆ ಇದ್ದಲ್ಲಿ ಅವರ ಸಲಹೆ, ಸೂಚನೆಗಳನ್ನು ಕೇಳಬಹುದು.
ನಿಜವಾದ ಅರ್ಥದಲ್ಲಿ ಪಠ್ಯವನ್ನು ಮೈಗೂಡಿಸಿಕೊಂಡ ಅನುಭವಿ ಶಿಕ್ಷಕನೆಂದೆನಿಸಿಕೊಂಡವನಿಗೆ ಪಠ್ಯಪುಸ್ತಕದ ಅವಶ್ಯಕತೆ ಇದೆಯೇ? ಪಠ್ಯದ ಅರಿವು ಇದ್ದರೆ ಸಾಕಲ್ಲವೇ? ಪಠ್ಯವೆಂದರೆ curricular aims and objectives. ಪಠ್ಯಪುಸ್ತಕವೆಂದರೆ ಟೆಕ್ಸ್ಟ್ಬುಕ್ಸ್. ಇಲ್ಲಿ ಶಿಕ್ಷಕರನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು.
1. ಪಾಠದ ಸಾರಾಂಶವನ್ನು ಮಾತ್ರ ಕೊಡುವವರು ಅಂದರೆ gist teaching ಮಾಡುವವರು.
2. ನೇರವಾಗಿ ಪಾಠ ಮಾಡುವವರು. ಅಂದರೆ text teaching ಮಾಡುವವರು.
3. ಪಾಠದ ಸಂಬಂಧವನ್ನು ಇಂದಿನ ಪ್ರಸಕ್ತ ವಿಚಾರಗಳಿಗೆ, ಆಗುಹೋಗುಗಳಿಗೆ ಸರಿದೂಗಿಸಿ ನೋಡುವವರು.
ಪಾಠದ ಸಾಧ್ಯಾಸಾಧ್ಯತೆಗಳ ಅನ್ವೇಷಣೆಕಾರರು ಅಂದರೆ co-text teaching ಮಾಡುವ ವರ್ಗ. ಇವರು ಅಲ್ಪಸಂಖ್ಯಾತರು. ಇವರಿಂದಲೇ ಪಠ್ಯಪುಸ್ತಕದ ಸುಧಾರಣೆಯಾಗಬೇಕಾಗಿದೆ. ಇವರು ತಮ್ಮ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಚರ್ಚೆಯ ಮೂಲಕ ಪ್ರತಿ ಪಾಠದ ಅರ್ಹತೆಯನ್ನು ನಿರ್ಧರಿಸುವುದು ಸೂಕ್ತ. ಆದರೆ ಆ ಕಾರ್ಯವನ್ನು ಎಷ್ಟು ಮಂದಿ ಮಾಡಬಲ್ಲರು ಎಂಬುವುದೇ ಪ್ರಶ್ನೆ. ಇಲಾಖೆಯ ಸಹಕಾರ, ಸಹಯೋಗದಿಂದ ಮಾಡಿಯಾರು ಎಂದು ನನ್ನ ಭರವಸೆ.







