ಜನರಿಗೆ ಸಮಾನ ನಾಗರಿಕ ಸಂಹಿತೆ ಅಗತ್ಯವಿದೆ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು
![ಜನರಿಗೆ ಸಮಾನ ನಾಗರಿಕ ಸಂಹಿತೆ ಅಗತ್ಯವಿದೆ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಜನರಿಗೆ ಸಮಾನ ನಾಗರಿಕ ಸಂಹಿತೆ ಅಗತ್ಯವಿದೆ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು](https://www.varthabharati.in/sites/default/files/images/articles/2022/05/31/337105-1653962544.jpg)
ಕಿರಣ್ ರಿಜಿಜು
ಹೊಸದಿಲ್ಲಿ: "ಸಮಾನ ನಾಗರಿಕ ಸಂಹಿತೆ ಬಿಜೆಪಿಯ ಚುನಾವಣಾ ಭರವಸೆ. ಜನರಿಗೆ ಅದರ ಅಗತ್ಯವಿದೆ ಎನ್ನುವುದು ನನ್ನ ಭಾವನೆ. ಒಂದು ದೇಶ ಒಂದು ಕಾನೂನು ದೇಶಕ್ಕೆ ಒಳ್ಳೆಯದು" ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಈ ಅಂಶವನ್ನು ಅವರು ಸ್ಪಷ್ಟಪಡಿಸಿದರು. ಹಲವು ರಾಜ್ಯ ಸರ್ಕಾರಗಳು ಸಮಾನ ನಾಗರಿಕ ಸಂಹಿತೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು.
ಕೇಂದ್ರ ಸರ್ಕಾರ ಈ ಸಂಬಂಧ ಶಾಸನ ತರಲು ಏಕೆ ಮುಂಚೂಣಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದಾಗ, "ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ದೇಶಕ್ಕೆ ಇದು ಅಗತ್ಯವಿದೆ ಎಂದಷ್ಟೇ ಹೇಳಬಲ್ಲೆ. ದೇಶದ ಜನ ಸಮಾನತೆ, ಸಂಯುಕ್ತ ಭ್ರಾತೃತ್ವ ಬಯಸಿದ್ದಾರೆ. ಒಂದು ದೇಶ ಒಂದು ಕಾನೂನು ಎನ್ನುವುದು ಒಳ್ಳೆಯದು. ಇದು ಪ್ರತಿ ದೇಶಕ್ಕೆ ಒಳ್ಳೆಯ ಸಿದ್ಧಾಂತ ಎನ್ನುವುದು ನನ್ನ ಭಾವನೆ. ಯಾವಾಗ ಎಂದು ನಾನು ಹೇಳಲು ಬಯಸುವುದಿಲ್ಲ. ಆದರೆ ದೇಶದ ಜನತೆಗೆ ಯುಸಿಸಿ ಬೇಕು" ಎಂದು ಹೇಳಿದರು.
ತಮ್ಮ ಪ್ರಾಂತ್ಯಗಳಲ್ಲಿ ಈ ಸಂಬಂಧ ಮಸೂದೆ ರೂಪಿಸಲು ಕೆಲ ರಾಜ್ಯಗಳು ಕೇಂದ್ರವನ್ನು ಸಂಪರ್ಕಿಸಿವೆಯೇ ಎಂದು ಕೇಳಿದ ಪ್ರಶ್ನೆಗೆ, ಯಾವುದೇ ರಾಜ್ಯಗಳು ಕಾನೂನು ಸಚಿವಾಲಯದ ನೆರವು ಯಾಚಿಸಿದಲ್ಲಿ, ಖಂಡಿತವಾಗಿಯೂ ಎಲ್ಲ ಅಗತ್ಯ ಬೆಂಬಲ ಮತ್ತು ಪರಿಣತಿಯನ್ನು ಒದಗಿಸಲಾಗುವುದು. ಯಾವುದೇ ರಾಜ್ಯಗಳು ಸಂಪರ್ಕಿಸಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಲಾರೆ. ಆದರೆ ನಾವು ಎಲ್ಲ ನೆರವು ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಕಡೆಯಿಂದ ದೇಶದ್ರೋಹ ಪ್ರಕರಣ ದುರ್ಬಳಕೆಯಾಗಿಲ್ಲ ಎಂದು ಅವರು ಸಮರ್ಥಿಸಿಕೊಂಡರು.