ಉಡುಪಿ: ನಗರದಲ್ಲಿ ಇ ತ್ಯಾಜ್ಯ ಸಂಗ್ರಹ ಘಟಕ ಉದ್ಘಾಟನೆ

ಉಡುಪಿ : ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರೋಟರಿ ಕ್ಲಬ್ ಉಡುಪಿ ರಾಯಲ್ ಇವರ ಆಶ್ರಯದಲ್ಲಿ ಇಂದ್ರಾಳಿಯ ಶ್ರೀಕೃಷ್ಣ ಪೆಟ್ರೋಲಿಯಂನ ಸಹಭಾಗಿತ್ವದಲ್ಲಿ ಬೃಹತ್ ಈ ತ್ಯಾಜ್ಯ ಸಂಗ್ರಹ ಘಟಕವನ್ನು ಸೋಮವಾರ ಇಂದ್ರಾಳಿಯಲ್ಲಿ ರೋಟರಿ ಜಿಲ್ಲೆ ೩೧೮೨ರ ಗವರ್ನರ್ ರಾಮಚಂದ್ರ ಮೂರ್ತಿ ಸಾರ್ವಜನಿಕ ಉಪಯೋಗಕ್ಕಾಗಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೆಚ್ಚುತ್ತಿರುವ ತಂತ್ರಜ್ಞಾನ ಯುಗದಲ್ಲಿ ಈ ತ್ಯಾಜ್ಯಗಳ ಉತ್ಪಾದನೆ ಹೇರಳವಾಗಿದ್ದು ಅವು ಭೂಮಿಗೆ ಮಾರಕವಾಗಲಿದೆ. ಅವುಗಳನ್ನು ಸಂಗ್ರಹಿಸಿ ನಾಶ ಮಾಡುವಂತಹ ಅಥವಾ ಮರು ಬಳಕೆ ಮಾಡುವ ಪ್ರಯತ್ನಗಳನ್ನು ಮಾಡುವಲ್ಲಿ ಜನಜಾಗ್ರತಿ ಮೂಡಿಸ ಬೇಕಾಗಿದೆ.ಈ ನಿಟ್ಟಿ ಉಡುಪಿಯಲ್ಲಿ ನಡೆದಿರುವ ಪ್ರಯತ್ನ ಶ್ಲಾಘನೀಯವಾಗಿದ್ದು ಇದು ರಾಜ್ಯದ ಎಲ್ಲ ಕಡೆಗಳಲ್ಲೂ ನಡೆಯಲು ಸ್ಪೂರ್ತಿಯಾಗಲಿದೆ ಎಂದರು.
ಉಡುಪಿ ನಗರಭಾಗದಲ್ಲಿ ಈ ತ್ಯಾಜ್ಯ ಮುಕ್ತ ಮಾಡುವಲ್ಲಿ ಸಣ್ಣ ಪ್ರಯತ್ನ ಇದಾಗಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದು ಕೊಳ್ಳಬೇಕು ಮತ್ತು ಇದು ರಾಷ್ಟ್ರೀಯ ಹೆದ್ದಾರಿ ೧೬೯ ಅ ಪಕ್ಕದಲ್ಲಿರುವ ಇಂದ್ರಾಳಿ ಶ್ರೀಕೃಷ್ಣ ಪೆಟ್ರೋಲ್ ಬಂಕ್ ಎದುರು ಅಳವಡಿಸಲಾಗಿದೆ ಎಂದುಘಟಕದ ಪ್ರಾಯೋಜಕ ಲಕ್ಷ್ಮಿಕಾಂತ್ ಬೆಸ್ಕೂರ್ ಮಾಹಿತಿ ನೀಡಿದರು.
ರಾಯಲ್ನ ಅಧ್ಯಕ್ಷರಾದ ತೇಜೇಶ್ವರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಭಾರತಿ ಪ್ರಶಾಂತ್, ರಾಜು ಕಸ್ತೂರ್ಬಾ ನಗರ, ಅಶೋಕ್ ನಾಯ್ಕ್, ಮಂಜುನಾಥ್ ಮಣಿಪಾಲ, ವಲಯ ೪ರ ಸಹಾಯಕ ಗವರ್ನರ್ ಡಾ.ಸುರೇಶ ಶೆಣೈ, ವಲಯ ಸೇನಾನಿ ಉಮೇಶ್ ರಾವ್, ನಿಯೋಜಿತ ಸಹಾಯಕ ಗವನರ್ರ್ ರಾಮಚಂದ್ರ ಉಪಾಧ್ಯ, ಕ್ಲಬ್ ನಿರ್ದೇಶಕ ಸುಧಾಕರ್, ಕೀರ್ತಿರಾಜ್, ಮಹಮ್ಮದ್ ಮೌಲಾ ಮತ್ತಿತ ರರು ಹಾಜರಿದ್ದರು.
ಸ್ಥಾಪಕ ಅಧ್ಯಕ್ಷ ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಂಗಳ ಚಂದ್ರಕಾಂತ್ ವಂದಿಸಿದರು.







