ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು; ಅಂಗಾಂಗ ದಾನ ವಿಫಲ
ಮಂಗಳೂರು : ನಗರದ ಬಿಕರ್ನಕಟ್ಟೆಯ ಸಮೀಪ ರವಿವಾರ ಮುಂಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕುಡುಪು ಕಟ್ಟೆಯ ಧೀರಜ್ (25) ಮಂಗಳವಾರ ಮೃತಪಟ್ಟಿದ್ದಾರೆ.
ರವಿವಾರ ಮುಂಜಾವ ಸುಮಾರು 2.15ಕ್ಕೆ ಧೀರಜ್ ತನ್ನ ಸ್ನೇಹಿತ ಗಣೇಶ್ನೊಂದಿಗೆ ಸ್ಕೂಟರ್ನಲ್ಲಿ ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ನಂತೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೭೩ಲ್ಲಿ ತೆರಳುತ್ತಿದ್ದಾಗ ಬಿಕರ್ನಕಟ್ಟೆಯ ಉಸ್ಮಾನಿಯಾ ಕಾಂಪ್ಲೆಕ್ಸ್ ಮುಂಭಾಗ ನಿಯಂತ್ರಣ ತಪ್ಪಿ ಸ್ಕೂಟರ್ ಡಿವೈಡರ್ಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಇಬ್ಬರೂ ಗಂಭೀರ ಗಾಯಗೊಂಡು ರಸ್ತೆಗೆ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಂಗಾಂಗ ದಾನ ವಿಫಲ: ಧೀರಜ್ರ ಮಿದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಸೋಮವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ಹಾಗಾಗಿ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಅದರಂತೆ ಅಂಗಾಂಗಗಳನ್ನು ಪಡೆಯಲು ಚೆನ್ನೈನಿಂದ ತಜ್ಞರ ತಂಡ ಚಾರ್ಟರ್ ವಿಮಾನದಲ್ಲಿ ಆಗಮಿಸಿತ್ತು. ಆದರೆ ಈ ತಂಡ ಮಂಗಳೂರು ತಲಪುವಾಗ ವಿಳಂಬವಾಯಿತು. ಆ ವೇಳೆ ಧೀರಜ್ ಕೊನೆಯುಸಿರೆಳೆದಿದ್ದರು. ಹಾಗಾಗಿ ಅಂಗಾಂಗ ದಾನ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.