ಪಠ್ಯಪುಸ್ತಕದಿಂದ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಭಾಷಣ ಹಿಂಪಡೆಯಲು ಆಗ್ರಹಿಸಿ ಸಿಎಫ್ಐ ಪ್ರತಿಭಟನೆ

ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಭಾಷಣವನ್ನು ೨೦೨೨-೨೩ನೇ ಸಾಲಿನ ಹತ್ತನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿರು ವುದು ಶಿಕ್ಷಣದ ಕೇಸರೀಕರಣದ ಮುಂದುವರಿದ ಭಾಗವಾಗಿದೆ. ಇದನ್ನು ಶೀಘ್ರ ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಮಂಗಳ ವಾರ ಕೈಕಂಬ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯಿತು.
ಸಿಎಫ್ಐ ಮಂಗಳೂರು ನಗರ ಅಧ್ಯಕ್ಷ ಶರ್ಫುಧ್ಧೀನ್ ಬಜ್ಪೆ ಮಾತನಾಡಿ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡಗೇವಾರ್ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಗದ್ಯಪುಸ್ತಕದಲ್ಲಿ ಐದನೇ ಪಠ್ಯವಾಗಿ ಸೇರಿಸಿದೆ. ದೇಶಾದ್ಯಂತ ನರಮೇಧಗಳನ್ನು ನಡೆಸಿದ ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಸಂಘಟನೆಯಾದ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಹೇಗೆ ಆದರ್ಶ ಪುರುಷನಾಗಲು ಸಾಧ್ಯವೆಂದು ಪ್ರಶ್ನಿಸಿದರು.
ಪಠ್ಯ ಪುಸ್ತಕವನ್ನು ಬ್ರಾಹ್ಮಣೀಕರಣಗೊಳಿಸುವ ಗುರಿಯೊಂದಿಗೆ ಸಂಘದ ಗರಡಿಯಲ್ಲಿ ಪಳಗಿರುವ ರೋಹಿತ್ ಚಕ್ರತೀರ್ಥ ಅವರಂತಹವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಅರಿತು ಸಮಾಜದಲ್ಲಿ ಸೌಹಾರ್ದ, ಸಾಮರಸ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಕಲಿಕೆ, ವಿದ್ಯೆಯನ್ನು ನೀಡಬೇಕೇ ಹೊರತು ಹಿಂದೂ ರಾಷ್ಟ್ರವೆಂಬ ಸಂವಿಧಾನಕ್ಕೆ ಅಪಚಾರವೆಸಗುವ ದೇಶವಿರೋಧಿ ಆಲೋಚನೆ ಹೊಂದಿದ್ದ ವ್ಯಕ್ತಿಗಳ ಭಾಷಣ ಹೇಳಿ ಕೊಡುವುದಲ್ಲ. ಸರಕಾರದ ಈ ಕೃತ್ಯ ನೈಜ ಸ್ವಾತಂತ್ರ್ಯ ಹೋರಾಟಗಾರರರಿಗೆ ಅಪಮಾನ ಮಾಡುವಂತಿದೆ ಎಂದು ಆರೋಪಿಸಿದರು.
ಸಿಎಫ್ಐ ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೋಡಿ, ಮಂಗಳೂರು ಗ್ರಾಮಾಂತರ ಕಾರ್ಯದರ್ಶಿ ಸರ್ಫ್ರಾಝ್, ಉಪಾಧ್ಯಕ್ಷ ಝಾಹೀರ್, ಕೋಶಾಧಿಕಾರಿ ಹಕೀಮ್, ಸಮಿತಿ ಸದಸ್ಯರಾದ ಶಿಹಾಮ್, ಬಿಲಾಲ್, ನಿಝಾಮ್ ಮತ್ತಿತರರು ನೇತೃತ್ವ ವಹಿಸಿದ್ದರು.







