ಕುಂದಾಪುರ: ರೈತ ಮುಖಂಡರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
![ಕುಂದಾಪುರ: ರೈತ ಮುಖಂಡರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ಕುಂದಾಪುರ: ರೈತ ಮುಖಂಡರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ](https://www.varthabharati.in/sites/default/files/images/articles/2022/05/31/337188-1654012200.jpeg)
ಕುಂದಾಪುರ: ಇತ್ತೀಚೆಗೆ ಕೇಳಿ ಬಂದಿರುವ ರೈತ ಮುಖಂಡರ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡುವ ಸಲುವಾಗಿ ಬೆಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸೋಗಿನಲ್ಲಿ ಆಗಮಿಸಿ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಕುಂದಾಪುರ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಸಮಿತಿ ಮುಖಂಡ ಎಚ್.ನರಸಿಂಹ ಮಾತನಾಡಿ ಬಿಜೆಪಿ ತನ್ನ ವೈಫಲ್ಯ ಮರೆ ಮಾಚಲು ಅಲ್ಪಸಂಖ್ಯಾತ ಮುಸ್ಲಿಂರ ಮೇಲೆ ಅವ್ಯಾಹತವಾಗಿ ಸರಣಿ ದಾಳಿ, ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ, ಶಾಲಾ ಪಠ್ಯಪುಸ್ತಕಗಳಲ್ಲಿ ಸಂಘಪರಿವಾರ ನಾಯಕರ ಸೇರ್ಪಡೆ ವಿವಾದಗಳ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಸರಕಾರ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಸರಕಾರ ತನ್ನ ಗೂಂಡಾ ಕಾರ್ಯಕರ್ತರನ್ನು ಬಳಸಿ ಸರಕಾರ ರಕ್ಷಿಸಿಕೊಳ್ಳಲು ಇಂತಹ ಕೃತ್ಯಗಳನ್ನು ನಡೆಸುತ್ತಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ಬಿಜೆಪಿ ಸರಕಾರವು ಈ ಹಿಂದೆ ರೈತರ ಹೋರಾಟಕ್ಕೆ ಮಣಿದು ರೈತರಿಗೆ ಕಾನೂನಿ ನಲ್ಲಿ ಬೆಂಬಲ ಬೆಲೆ ನೀಡಲು ಒಪ್ಪಿಕೊಂಡು ವಿಶ್ವಾಸ ದ್ರೋಹ ಬಗೆಯಿತು. ಮತ್ತೆ ಹೋರಾಟ ಹತ್ತಿಕ್ಕಲು ಗೂಂಡಾಗಳನ್ನು ಬಳಸಲಾಗುತ್ತಿದೆ. ರಾಜ್ಯದಲ್ಲಿ ಸರಕಾರವಿದ್ದರೂ ನ್ಯಾಯಾಂಗ, ಪೊಲೀಸ್ ವ್ಯವಸ್ಥೆ ದುರ್ಬಲಗೊಳಿಸಿ ಕಾನೂನು ಕೈಗೆತ್ತಿಕೊಳ್ಳುವುದು ಅನಾಗರಿಕ ವರ್ತನೆಯಾಗಿದೆ. ಈ ಹೊಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡ ರಾಜೇಶ್ ವಡೇರಹೋಬಳಿ, ಸಿಐಟಿಯು ಹಿರಿಯ ಮುಖಂಡರಾದ ವಿ.ನರಸಿಂಹ, ಚಂದ್ರಶೇಖರ ವಿ ಮಾತನಾಡಿದರು.