ಜ್ಯೋತಿಷಿಗಳಿಂದ ಸಿಗಲಿಲ್ಲ ಸವಾಲಿಗೆ ತಕ್ಕ ಉತ್ತರ; ಬಹುಮಾನದ ಲಕ್ಷ ರೂ. ತಮ್ಮಲ್ಲೇ ಉಳಿಸಿಕೊಂಡ ನರೇಂದ್ರ ನಾಯಕ್

ಮಂಗಳೂರು, ಜೂ.1: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ಇತಿಹಾಸ ಭವಿಷ್ಯದ ಕುರಿತಂತೆ ಭವಿಷ್ಯ ನುಡಿಯಲು ಸವಾಲು ಹಾಕಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ನಿಖರವಾದ ಉತ್ತರ ಹೇಳಲು ವಿಫಲರಾಗಿದ್ದಾರೆ.
ವಿಚಾರವಾದಿ ನರೇಂದ್ರ ನಾಯಕ್ ಅವರು ಮೇ 26ರಂದು ಬೆಳಗ್ಗೆ 11.33ಕ್ಕೆ ಏಳು ಲಕೋಟೆಗಳಲ್ಲಿ ವಿವಿಧ ದೇಶಗಳ ಕರೆನ್ಸಿ, ಕಾಗದಗಳು, ಬರವಣಿಗೆ ಬರೆದಿಟ್ಟ ಪೇಪರ್ ಅನ್ನು ಸೀಲ್ ಮಾಡಿ ಇಟ್ಟಿದ್ದರು. ಈ ಸವಾಲನ್ನು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದರೆ ಅವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಸರಿ ಉತ್ತರವನ್ನು ತಮ್ಮ ವಾಟ್ಸ್ಆ್ಯಪ್ ನಂಬರ್ ಹಾಗೂ ಇಮೈಲ್ ಗೆ ಕಳುಹಿಸಬಹುದು ಎಂದಿದ್ದರು.
ಈ ಹಿಂದೆಯೇ ನರೇಂದ್ರ ನಾಯಕ್ ರವರು ಹೇಳಿರುವಂತೆ ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೆಯ ಕವರ್ ನಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್, 3ನೆಯ ಕವರ್ ನಲ್ಲಿ 10 ದಿರ್ಹಮ್, 4ನೆಯ ಕವರ್ ನಲ್ಲಿ ನೇಪಾಳದ 20 ರೂ., 5ನೆಯ ಕವರ್ ನಲ್ಲಿ ಸಿಂಗಾಪುರದ 10 ಡಾಲರ್, 6ನೆಯದ್ದರಲ್ಲಿ Astrology Flopped miserably Once again ಎಂದು ಬರೆಯಲಾಗಿತ್ತು. 7ನೆಯದ್ದರಲ್ಲಿ 10 ರೂ. ನ ಇಂಡಿಯಾದ ಕರೆನ್ಸಿ ಇಡಲಾಗಿತ್ತು.
ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಉತ್ತರ ನೀಡಲು ಯತ್ನಿಸಿದ್ದಾರೆ. ಆದರೆ ನಾಲ್ವರು ನಿಖರವಾದ ಉತ್ತರ ನೀಡಲು ಸಫಲರಾಗಿಲ್ಲ. ಈ ನಾಲ್ಕು ಉತ್ತರದಲ್ಲಿ ಒಂದು ಕೇಳಿರುವ ಪ್ರಶ್ನೆಗೆ ಹೊರತಾಗಿರುವುದರಿಂದ ಮೂರನ್ನು ಮಾತ್ರ ಪರಿಗಣಿಸಲಾಗಿದೆ. ಇದರಲ್ಲಿ ಓರ್ವರು ಆರು ಖಾಲಿ ಲಕೋಟೆಗಳು ಎಂದು ಉತ್ತರಿಸಿದ್ದಾರೆ. ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ನೋಟು, ವೀಳ್ಯ, ಹೂ, ಕುಂಕುಮ- ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿದ್ದಾರೆ.
ಈ ಮೂಲಕ ಎಲ್ಲಾ ಉತ್ತರಗಳು ತಪ್ಪಾಗಿದೆ. ಈ ಮೂಲಕ ಜೋತಿಷ್ಯ ಸುಳ್ಳು ಎಂಬ ತಮ್ಮ ವಾದವೇ ಮತ್ತೊಮ್ಮೆ ಗೆದ್ದಿದೆ. ಅತ್ಯಂತ ವೈಜ್ಞಾನಿಕ ಹಾಗೂ ಕಾನೂನು ರೀತಿಯಲ್ಲಿ ಜ್ಯೋತಿಷಿಗಳು ಏನಿದೆ ಎಂಬುದನ್ನು ನಿಖರವಾಗಿ ತಿಳಿಸಬೇಕಾದ ವಿಷಯಗಳನ್ನು ಕವರ್ ನಲ್ಲಿ ತುಂಬಿ ಸೀಲ್ ಮಾಡಲಾಗಿತ್ತು. ಅದಕ್ಕೆ ಕೆಲ ಪತ್ರಕರ್ತರು ಕೂಡಾ ಸಹಿ ಮಾಡಿದ್ದರು ಎಂದು ನರೇಂದ್ರ ನಾಯಕ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರು.
ಸವಾಲಿನ ಬಗ್ಗೆ ಮಾದ್ಯಮ, ಫೇಸ್ಬುಕ್ ನಲ್ಲಿ ನೋಡಿ ತಿಳಿದ ಬೆಂಗಳೂರಿನ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ಜ್ಯೋತಿಷಿಯೊಬ್ಬರ ಬಳಿ ಹೋಗಿದ್ದಾಗ ಆತ ತೋರಿದ್ದ ಕೆಲವೊಂದು ಚಮತ್ಕಾರಗಳನ್ನು ಹೇಳಿ ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದ. ನಾನು ವೈಜ್ಞಾನಿಕ ಉತ್ತರ ನೀಡಿದ್ದೆ. ಆತ ಆಗ ಅಚ್ವರಿಗೊಂಡು ನಾನು ಸುಮ್ಮನೆ ಜ್ಯೋತಿಷಿ ಬಳಿ ಹೋಗಿ 500 ರೂ. ಕಳೆದುಕೊಂಡೆ. ಇನ್ನು ಇಂತಹದನ್ನು ನಂಬುವುದಿಲ್ಲ ಎಂದು ಧನ್ಯವಾದ ಸಲ್ಲಿಸಿದ. ಇಂತಹ ವೈಜ್ಞಾನಿಕ ಮನೋಭಾವ ಬೆಳೆಸುವುದೇ ನಮ್ಮ ಉದ್ದೇಶ. ಈ ಹಿಂದೆಯೂ ತಥಾಕಥಿತ ಜ್ಯೋತಿಷಿಗಳಿಗೆ ಇಂತಹ ಸವಾಲು ಎಸೆದಿದ್ದೇನೆ. ಮುಂದೆಯೂ ಸವಾಲು ಸ್ವೀಕರಿಸುವವರಿದ್ದರೆ ನಾನು ಸಿದ್ಧ ಎಂದು ನರೇಂದ್ರ ನಾಯಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಚಾರವಾದಿಗಳ ಸಂಘದ ಸದಸ್ಯ ಶ್ಯಾಮ್ ಸುಂದರ್ ರಾವ್, ಪ್ರಭಾಕರ ಕಾಪಿಕಾಡ್ ಮತ್ತು ಡಾ.ಹರಿಯಪ್ಪ ಪೇಜಾವರ್, ಮಯೂರ್ ಶೆಟ್ಟಿ ಉಪಸ್ಥಿತರಿದ್ದರು.