ಮಂಗಳೂರಿನಲ್ಲಿ ಅಂ.ರಾ.ಮಟ್ಟದ ಫರ್ನಿಚರ್ ಕ್ಲಸ್ಟರ್ ಸ್ಥಾಪನೆ; ಎಣ್ಣೆಹೊಳೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಉಡುಪಿ, ಜೂ.1: ದೊಡ್ಡ ಸಂಖ್ಯೆಯ ಯುವಕರಿಗೆ ಉದ್ಯೋಗ ನೀಡುವಂತಹ ಅಂತಾರಾಷ್ಟ್ರೀ/ಯ ಮಟ್ಟದ ಫರ್ನಿಚರ್ ಕ್ಲಸ್ಟರ್ ಒಂದನ್ನು ಮಂಗಳೂರು ಸಮೀಪದಲ್ಲಿ ಇದೇ ವರ್ಷದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕಾರ್ಕಳ ತಾಲೂಕು ಮರ್ಣೆ ಸಮೀಪದ ಎಣ್ಣೆಹೊಳೆಯಲ್ಲಿ ಸುಮಾರು೧೦೮ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಎಣ್ಣೆಹೊಳೆ ಏತ ನೀರಾವರಿ ಯೋಜನೆಯನ್ನು ಲೋಕಾರ್ಪಣೆ ಗೊಳಿಸಿ ಅವರು ಮಾತನಾಡುತಿದ್ದರು.
ಈ ಫರ್ನಿಚರ್ ಕ್ಲಸ್ಟರ್ನಲ್ಲಿ ವಿಶ್ವದ ತಜ್ಞರು ಸಹ ಕಾರ್ಯ ನಿರ್ವಹಿಸಲಿದ್ದು, ತಮ್ಮ ಜ್ಞಾನ ಹಾಗೂ ಅನುಭವವನ್ನು ಸ್ಥಳೀಯರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಈ ಕ್ಲಸ್ಟರ್ ಕಾರ್ಕಳದಲ್ಲಿರುವ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಮರದ ಕೆತ್ತನೆ ಕೆಲಸಗಾರರು ಶಿಲ್ಪಿಗಳಿಗೂ ಅನುಕೂಲ ಕರವಾಗಿರಲಿದೆ ಎಂದವರು ವಿವರಿಸಿದರು.
ಹಸಿರು ಇಂಧನ ಅಭಿವೃದ್ಧಿ: ಕರಾವಳಿ ಪ್ರದೇಶದಲ್ಲಿ ಹಸಿರು ಇಂಧನವನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಹಸಿರು ಇಂಧನ ಆಧಾರಿತ ಆಧುನಿಕ ಕೈಗಾರಿಕಾ ಹಬ್ ಒಂದು ಸಹ ಇಲ್ಲಿ ತಲೆ ಎತ್ತಲಿದೆ. ಈ ರೀತಿ ಸಮಗ್ರ, ಸಶಕ್ತ, ಸಮೃದ್ಧಿ ಕರ್ನಾಟಕ ಕಟ್ಟುವ ಬದ್ಧತೆಯನ್ನು ಸರಕಾರ ತೋರುತ್ತಿದೆ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ಕಾರ್ಕಳದಲ್ಲಿ ಟೆಕ್ಸ್ಟೈಲ್ ಪಾರ್ಕ್: ಕಾರ್ಕಳದಲ್ಲಿ ಟೈಕ್ಸ್ಟೈಲ್ ಪಾರ್ಕ್ ಒಂದರ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಇದರೊಂದಿಗೆ ಕಾರ್ಕಳದಲ್ಲಿ ಸುಮಾರು ೪೩ ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದವರು ಭರವಸೆ ನೀಡಿದರು.
ಕಾರ್ಕಳದಲ್ಲಿ ಪ್ರಾಚೀನ ಜೈನಬಸದಿಗಳು ಸೇರಿದಂತೆವಿವಿಧ ಪ್ರವಾಸಿ ತಾಣಗಳ ಟೂರಿಸಂ ಸರ್ಕೀಟ್ನ್ನು ಅಭಿವೃದ್ದಿಗೊಳಿಸಲಾಗುವುದು. ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಹಾಗೂ ಯಾತ್ರಾ ಪ್ರವಾಸೋದ್ಯಮವನ್ನು ಈ ವರ್ಷ ಅಭಿವೃದ್ಧಿ ಮಾಡಲಾಗುವುದು. ಉದ್ಯೋಗ ಹೆಚ್ಚಳ, ಕೈಗಾರಿಕೆ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಕರಾವಳಿ ಜಿಲ್ಲೆಗಳನ್ನು ಆಧುನಿಕ ಅಭಿವೃದ್ಧಿಯ ಜಿಲ್ಲೆಗಳನ್ನಾಗಿ ಮಾಡಬೇಕೆಂದು ಕರಾವಳಿ ಭಾಗದ ಸಚಿವರಿಗೆ ಸೂಚನೆಗಳನ್ನು ನೀಡಿದ್ದೇನೆ. ಇದಕ್ಕಾಗಿ ಪೂರಕ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ರೂಪಿಸಲಾಗಿದೆ. ಸಾಗರಮಾಲಾ ಯೋಜನೆಯಡಿ ೨,೪೦೦ ಕೋಟಿ ರೂ.ಗಳ ೨೪ ಯೋಜನೆಗಳಿಗೆ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಒಪ್ಪಿಗೆ ದೊರಕಿದ ಬಳಿಕ ಇವುಗಳನ್ನು ಅನುಷ್ಠಾನಗೊಳಿ ಸಲಾಗುವುದು ಎಂದರು.
ಕಾರವಾರ ಮತ್ತು ಮಂಗಳೂರು ಬಂದರುಗಳ ವಿಸ್ತರಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.ಈ ಎರಡು ಬಂದರುಗಳಲ್ಲಿ ಹೆಚ್ಚಿನ ಪ್ರಮಾಣದ ಹಡಗು ಗಳು ತಂಗಲು ಹಾಗೂ ಅಲ್ಲಿನ ಚಟುವಟಿಕೆಗಳಿಗೆ ಜಮೀನು ನೀಡಲಾಗಿದೆ. ಕರಾವಳಿಯ ಎಂಟು ಮೀನುಗಾರಿಕಾ ಬಂದರಿಗೆ ಯೋಜನೆ ರೂಪಿಸಿದ್ದು, ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ೧೦೦ ಹೈಸ್ಪೀಡ್ ಆಳಸಮುದ್ರದ ಮೀನುಗಾರಿಕಾ ಬೋಟುಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.
ಬಹುಕಾಲದಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆ ಉಂಟು ಮಾಡುತಿದ್ದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ನಮ್ಮ ಸರಕಾರ ಬಗೆಹರಿಸಿದ್ದು, ೬,೩೩,೦೦೦ ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪ್ರದೇಶದಿಂದ ಹೊರಗುಳಿಸಿ, ಉಳುಮೆ ಮಾಡುತ್ತಿರುವವರಿಗೆ, ಅಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರು ವವರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಲಾಗಿದೆ. ಕೊಡಗು, ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಉಳುಮೆ ಮಾಡುವವರಿಗೆ ಜಮೀನಿನ ಹಕ್ಕನ್ನು ನೀಡಲು ವಿಶೇಷವಾದ ಕಾನೂನನ್ನು ರಚಿಸಿ, ಜಮೀನಿನ ಹಕ್ಕುಪತ್ರವನ್ನು ನೀಡಲಾಗುವುದು ಎಂದರು.
ಜನರಿಗೆ ನ್ಯಾಯ ಒದಗಿಸುವ ಜನಸ್ಪಂದನೆಯ ಕೆಲಸವನ್ನು ಸರಕಾರ ಮಾಡುತ್ತಿದೆ. ಬಹಳ ವರ್ಷಗಳಿಂದ ಇರುವ ಈ ಸಮಸ್ಯೆಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಒದಗಿಸುವ ಬದ್ಧತೆ ನಮ್ಮ ಸರಕಾರಕ್ಕಿದೆ ಎಂದವರು ಹೇಳಿದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಕ್ರಮಗಳಿಗೆ ೨೮ ಸಾವಿರ ಕೋಟಿ ಅನುದಾನ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಪರಿಶಿಷ್ಟ ಜನಾಂಗದ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ೭೫ ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆ್ಯಸಿಡ್ ದಾಳಿಗೆ ಒಳಗಾಗಿರುವ ಹೆಣ್ಣುಮಕ್ಕಳಿಗೆ ನೀಡಲಾಗುತ್ತಿದ್ದ ಮಾಸಿಕ ಧನಸಹಾಯವನ್ನು ೩೦೦೦ ರೂ.ನಿಂದ ೧೦ ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಂಧ್ಯಾ ಸುರಕ್ಷೆ, ವಿಧವೆಯರು, ಅಂಗವಿಕಲರಿಗೆ ಮಾಸಾಶನ ಹೆಚ್ಚಳ, ರೈತ ವಿದ್ಯಾನಿಧಿಯ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ, ೬೦ ವರ್ಷ ವಯೋಮಾನದವರಿಗೆ ಆರೋಗ್ಯ ತಪಾಸಣೆ, ಕಿಮೋ ಥೆರಪಿಗಾಗಿ ೧೦ ಹೊಸ ಕೇಂದ್ರಗಳು, ೬೦ ಸಾವಿರ ಸೈಕಲ್ ಡಯಾಲಿಸಿಸ್ ವ್ಯವಸ್ಥೆ ಮಾಡುವ ಮೂಲಕ ದುಡಿಯುವ ವರ್ಗಕ್ಕೆ ಸಹಾಯ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, ಎಣ್ಣೆಹೊಳೆ ಏತ ನೀರಾವರಿ ಯೋಜನೆಯಿಂದ ಪರಿಸರದ ೯ ಗ್ರಾಮಗಳ ೪೫೦೦ ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದರ ಮೂಲಕ ಎರಡು ಕೆರೆಗಳನ್ನು ತುಂಬಿಸಲಾಗುತ್ತದೆ. ೪೫ಚೆಕ್ಡ್ಯಾಮ್ಗಳನ್ನು ಸಹ ಕಟ್ಟಿ ನೀರು ನಿಲ್ಲಿಸುವ ಕೆಲಸ ಮಾಡಲಾಗಿದೆ ಎಂದರು.
ಬಿಜೆಪಿ ಸರಕಾರ ನೀರಾವರಿ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡುತ್ತಿದೆ. ಈ ಬಾರಿ ಕೃಷ್ಣ ಮೇಲ್ದಂಡೆ ಯೋಜನೆಗೆ 5000 ಕೋಟಿ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ತಲಾ ಒಂದು ಸಾವಿರ, ಎತ್ತಿನಹೊಳೆ ಯೋಜನೆಗೆ 3000 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ ಒಟ್ಟು ೨೮ ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಿದ್ದೇವೆ ಎಂದು ಕಾರಜೋಳ ನುಡಿದರು.
ಅಧ್ಯಕ್ಷತೆ ವಹಿಸಿದ ರಾಜ್ಯ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ, ಒಂದೂವರೆ ವರ್ಷದಲ್ಲೇ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಇಲ್ಲಿನ ೧೫೦೦ ಹೆಕ್ಟೇರ್ ಪ್ರದೇಶಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ೨೦೦ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಳ್ಳಲಿವೆ ಎಂದರು.
ಕಾರ್ಕಳದ ಬೈಲೂರಿನಲ್ಲಿ ವಿಶಿಷ್ಟ ರೀತಿಯ ಪರಶುರಾಮ ಪಾರ್ಕ್ ನಿರ್ಮಾಣ ಗೊಳ್ಳುತಿದ್ದು ಮುಂದಿನ ನವೆಂಬರ್ಗೆ ಉದ್ಘಾಟನೆಗೊಳ್ಳಲಿದೆ. ವಾರಾಹಿ ನದಿಯಿಂದ ಕಾರ್ಕಳ ಹಾಗೂ ಕಾಪು ತಾಲೂಕುಗಳಿಗೆ ನೀರು ಒದಗಿಸುವ ೧೨೦೦ ಕೋಟಿ ರೂ. ಬೃಹತ್ ಯೋಜನೆಗೆ ಸರಕಾರದ ಮಂಜೂರಾತಿ ದೊರಕಿದೆ. ಇದರಿಂದ ಪ್ರತಿ ಮನೆಗೂ ನೀರು ಸರಬರಾಜು ಆಗಲಿದೆ ಎಂದರು.
ಕಾರ್ಕಳ ಮರದ ಕೆತ್ತನೆ ಹಾಗೂ ಶಿಲ್ಪಕಲಾ ನೈಪುಣ್ಯಕ್ಕೆ ಹೆಸರಾಗಿದ್ದು, ಇಲ್ಲಿನ ಶಿಲ್ಪಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರಿಗೆ ಇನ್ನಷ್ಟು ಉತ್ತೇಜನೆ ನೀಡಲು ಕಾರ್ಕಳದಲ್ಲಿ ಪ್ರತ್ಯೇಕ ಕ್ಲಸ್ಟರ್ ಆಗ ಬೇಕು ಎಂದು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಬಿ.ಎಂ.ಸುಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.
