ಮಂಗಳೂರು: ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ, ಭದ್ರತೆ, ಸಬಲೀಕರಣಕ್ಕೆ ಆಗ್ರಹ
ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಮುಸ್ಲಿಂ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ

ಮಂಗಳೂರು : ಸಿಪಿಎಂ ಕರ್ನಾಟಕ ರಾಜ್ಯ ಸಮಿತಿಯು ನಗರದಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮಾವೇಶದ ಎರಡನೇ ದಿನವಾದ ಬುಧವಾರ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ, ಪರಿಹಾರ, ಪುನರ್ವಸತಿ, ಸಬಲೀಕರಣಕ್ಕೆ ಸಂಬಂಧಿಸಿ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಎರಡನೇ ದಿನದ ಪ್ರತಿನಿಧಿ ಅಧಿವೇಶನವು ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ೪೦೦ ಪ್ರತಿನಿಧಿಗಳು ಪಾಲ್ಗೊಂಡ ಈ ಸಮಾವೇಶದಲ್ಲಿ ಮುಸ್ಲಿಮರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.
ಧಾರ್ಮಿಕ ಅಲ್ಪಸಂಖ್ಯಾತರು ಅದರಲ್ಲೂ ಪ್ರಧಾನವಾಗಿ ಮುಸ್ಲಿಂ ಸಮುದಾಯ ಕೋಮುಹಿಂಸೆಗಳಿಂದ ಜರ್ಜರಿತಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಕೋಮು ಹಿಂಸೆಗೆ ಗುರಿಯಾಗುತ್ತಿರುವ ಅಲ್ಪಸಂಖ್ಯಾತ ಸಂತ್ರಸ್ತರಿಗೆ ಯಾವುದೆ ರಕ್ಷಣೆ ದೊರಕುತ್ತಿಲ್ಲ. ಪರಿಹಾರ ನೀಡದೆ ತಾರತಮ್ಯ ಎಸಗಲಾಗುತ್ತಿದೆ. ಈ ಕಳವಳಕಾರಿ ಬೆಳವಣಿಗೆಗಳಿಂದ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳು ಆತಂಕ, ತಬ್ಬಲಿತನಕ್ಕೆ ಒಳಗಾಗಿವೆ. ಇಂತಹ ಅನಾದಾರ, ಅಸಹಿಷ್ಣುತೆ, ತಾರತಮ್ಯ ಪ್ರಜಾಸತ್ತಾತ್ಮಕ, ಜಾತ್ಯತೀತ ಸಂವಿಧಾನ ಹೊಂದಿರುವ ದೇಶದ ಘನತೆಗೆ ತಕ್ಕುದಲ್ಲ. ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳ ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆಗೆ ಸರಕಾರಗಳು ತಕ್ಷಣ ಮುಂದಾಗಬೇಕು. ಕೋಮು ಹಿಂಸೆಗೆ ಬಲಿಯಾಗುವ ಸಂತ್ರಸ್ತರಿಗೆ ರಕ್ಷಣೆ, ಪರಿಹಾರ, ಪುನರ್ವಸತಿಯನ್ನು ಖಾತರಿ ಪಡಿಸುವ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಲಾಯಿತು.
ಹಾಗೆಯೆ ಜಸ್ಟಿಸ್ ಸಾಚಾರ್, ರಂಗನಾಥ ಮಿಶ್ರ ವರದಿಯ ಪ್ರಕಾರ ಮುಸ್ಲಿಮರು ಅತ್ಯಂತ ಹಿಂದುಳಿದಿರುವ ಸಮುದಾಯವಾಗಿದ್ದಾರೆ. ಪರಿಹಾರವಾಗಿ ಈ ಸಮಿತಿಗಳು ಹಲವು ಶಿಫಾರಸ್ಸುಗಳನ್ನು ಮಾಡಿವೆ. ಆದರೆ ಮತೀಯವಾದಿ ಸಿದ್ಧಾಂತಗಳ ಮೇಲುಗೈಯ ಈ ಸಂದರ್ಭದಲ್ಲಿ ಶಿಫಾರಸ್ಸುಗಳ ಜಾರಿಯ ಪ್ರಶ್ನೆ ಮೂಲೆಗೊತ್ತಲ್ಪಟ್ಟಿದೆ. ದೇಶದ ಜನಸಂಖ್ಯೆಯ ಶೇ.೧೫ರಷ್ಟಿರುವ ಸಮುದಾಯವೊಂದನ್ನು ಸಬಲೀಕರಣಗೊಳಿಸುವುದು ದೇಶದ ಅಭಿವೃದ್ದಿಯ ನಿಟ್ಟಿನಲ್ಲಿಯೂ ಪ್ರಧಾನವಾಗಿದೆ. ಈ ಹಿನ್ನಲೆಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಶಿಕ್ಷಣ, ವಸತಿ, ಸಾಮಾಜಿಕ ಕಲ್ಯಾಣಗಳಿಗೆ ಸರಕಾರ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿದೆ.
ಚಿಂತಕ, ಎಲ್ಐಸಿ ಎಂಪ್ಲಾಯೀಸ್ ಅಸೋಸಿಯೇಶನ್ನ ರಾಷ್ಟೀಯ ಅಧ್ಯಕ್ಷ ಅಮಾನುಲ್ಲಾ ಖಾನ್ ಸಮಾವೇಶವನ್ನು ಉದ್ಘಾಟಿಸಿದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ. ಪ್ರಕಾಶ್ ಸಮಾರೋಪ ಭಾಷಣ ಮಾಡಿದರು.
ಪಕ್ಷದ ಮುಖಂಡರಾದ ಸೈಯದ್ ಮುಜೀಬ್, ಯು ಬಸವರಾಜ್, ಶೇಕ್ ಷಾ ಖಾದ್ರಿ ಸಿಂಧನೂರು, ಖಾಸಿಂ ಸರ್ದಾರ್ ಕೊಪ್ಪಳ, ಅಕ್ರಂ ಪಾಷಾ ಬಾಗೇಪಲ್ಲಿ, ಕೆ. ನಿಲಾ, ಕೆ.ಎಸ್.ವಿಮಲಾ, ಯಮುನಾ ಗಾಂವ್ಕರ್, ಕೆ.ಯಾದವ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.







.jpeg)


