ಐಪಿಎಲ್ ವೈಫಲ್ಯದಿಂದ ಹೊರಬಂದು ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿ ಸಿರಾಜ್

Photo:twitter
ಹೊಸದಿಲ್ಲಿ: ಇತ್ತೀಚೆಗೆ ಕೊನೆಗೊಂಡಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗದ ಬೌಲರ್ ಮುಹಮ್ಮದ್ ಸಿರಾಜ್ ಗೆ ದುಃಸ್ವಪ್ನವಾಗಿ ಪರಿಣಮಿಸಿತು. ಭಾರತದ ಉದಯೋನ್ಮುಖ ವೇಗದ ಬೌಲಿಂಗ್ ತಾರೆಗಳಲ್ಲಿ ಒಬ್ಬರಾಗಿರುವ ಸಿರಾಜ್ ಇಂಗ್ಲೆಂಡ್ ವಿರುದ್ಧದ ಸರಣಿ-ನಿರ್ಣಾಯಕ ಐದನೇ ಟೆಸ್ಟ್ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳುವ ಭರವಸೆ ಯಲ್ಲಿದ್ದಾರೆ.
ಈ ವರ್ಷದ ಐಪಿಎಲ್ನಲ್ಲಿ ಸಿರಾಜ್ 15 ಪಂದ್ಯಗಳಲ್ಲಿ ಆಡಿದ್ದರೂ 10.07 ಎಕಾನಮಿ ದರದಲ್ಲಿ ಕೇವಲ ಒಂಬತ್ತು ವಿಕೆಟ್ ಗಳಿಸಲಷ್ಟೇ ಶಕ್ತರಾಗಿದ್ದರು. ಟೂರ್ನಿಯಲ್ಲಿ ಎದುರಾಳಿ ಆಟಗಾರರಿಗೆ 31 ಸಿಕ್ಸರ್ ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಬೌಲರ್ ವೊಬ್ಬ ಬಿಟ್ಟುಕೊಟ್ಟ ಅತ್ಯಧಿಕ ಸಿಕ್ಸರ್ ಆಗಿದೆ.
"ಕಳೆದ ಎರಡು ಐಪಿಎಲ್ ಗಳಲ್ಲಿ ನನ್ನ ಪ್ರದರ್ಶನ ಮಟ್ಟ ಉತ್ತಮವಾಗಿತ್ತು. ಆದರೆ ಈ ಬಾರಿ ಅದು ಕುಸಿದಿದೆ. ನಾನು ಕಳೆದ ಎರಡು ವರ್ಷಗಳಲ್ಲಿ ಏನು ಮಾಡಿದ್ದೇನೆ ಎನ್ನುವುದನ್ನು ಗಮನಿಸುವೆ. ಈ ವರ್ಷದ ಐಪಿಎಲ್ ನನ್ನ ವೃತ್ತಿಬದುಕಿನ ಕೆಟ್ಟ ಹಂತವಾಗಿದೆ. ಆದರೆ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಪುನರಾಗಮನವನ್ನು ಮಾಡುತ್ತೇನೆ. ನಾನು ನನ್ನ ಸಾಮರ್ಥ್ಯದ ಮೇಲೆ ಕೆಲಸ ಮಾಡುತ್ತೇನೆ, ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಡುತ್ತೇನೆ"ಎಂದು ಸಿರಾಜ್ ಹೇಳಿದರು.
ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸಿರಾಜ್ ಜುಲೈ 1 ರಿಂದ 5ರವರೆಗೆ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದಾರೆ. ಕಳೆದ ವರ್ಷ ಭಾರತ ತಂಡದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಕಾರಣ ಐದನೇ ಟೆಸ್ಟ್ ಪಂದ್ಯವನ್ನು ಜುಲೈಗೆ ಮರು ನಿಗದಿಪಡಿಸಲಾಗಿದೆ.
"ಟೆಸ್ಟ್ಗಾಗಿ ನನ್ನ ಸಿದ್ಧತೆಗಳು ಉತ್ತಮವಾಗಿ ನಡೆಯುತ್ತಿವೆ. ಇಂಗ್ಲೆಂಡ್ನಲ್ಲಿ, ಡ್ಯೂಕ್ಸ್ ಬಾಲ್ ಅನ್ನು ಬಳಸಲಾಗುತ್ತದೆ, ಇಂಗ್ಲೆಂಡ್ ವಾತಾವರಣದಲ್ಲಿ ಬೌಲ್ ಮಾಡುವುದು ಯಾವಾಗಲೂ ಒಳ್ಳೆಯದು ಹಾಗೂ ಇದು ಬೌಲರ್ಗಳಿಗೆ ಸಹಾಯಕವಾಗಿದೆ" ಎಂದು ಹೈದರಾಬಾದ್ ಮೂಲದ ವೇಗಿ ಹೇಳಿದ್ದಾರೆ.







