ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗುವುದು: ನೀಟ್ ಪಿಜಿಯ 10ನೆ ರ್ಯಾಂಕ್ ಪಡೆದ ಡಾ. ನಿಬ್ರಾಝ್

ಮಂಗಳೂರು, ಜೂ. 2: ‘‘ನಾವು ಶ್ರಮ ಪಟ್ಟರೆ ಅದಕ್ಕೆ ತಕ್ಕುದಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹಾಗಾಗಿ ಪ್ರಕ್ರಿಯೆಯ ಮೇಲೆ ನಂಬಿಕೆ ಇರಿಸಿ ಸವಾಲನ್ನು ಎದುರಿಸಿ.’’ಇದು ಈ ಬಾರಿಯ ನೀಟ್ ಪಿಜಿ ಪರೀಕ್ಷೆಯಲ್ಲಿ ದೇಶಕ್ಕೆ 10ನೆ ರ್ಯಾಂಕ್ ಪಡೆದ ಕಾಸರಗೋಡು ಮೂಲದ ಮಂಗಳೂರು ಫಾದರ್ ಮುಲ್ಲರ್ ಕಾಲೇಜಿನ ವಿದ್ಯಾರ್ಥಿ ಡಾ. ನಿಬ್ರಾಝ್ ಉಲ್ ಹಕ್ ಉಮರ್ ಅವರು ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ನೀಡುವ ಸಂದೇಶ.
ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ಸ್ (ಎನ್ಬಿಇ) ಸ್ನಾತಕೋತ್ತರ ಪದವಿಗಾಗಿ (ನೀಟ್ ಪಿಜಿ) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, 10ನೆ ರ್ಯಾಂಕ್ ಗಳಿಸಿರುವ ಡಾ. ನಿಬ್ರಾಝ್ ತನ್ನ ತವರಿನ ಜತೆಗೆ ತಾನು ಶಿಕ್ಷಣ ಪಡೆದ ಮಂಗಳೂರಿನ ನೆಲಕ್ಕೂ ಗೌರವ ತಂದಿದ್ದಾರೆ.
ಮೂಲತ: ಕಾಸರಗೋಡಿನ ಡಾ. ಮೊಯ್ದೀನ್ ಹಾಗೂ ಗೃಹಿಣಿ ನಸ್ರೀಮಾ ದಂಪತಿಯ ಪುತ್ರರಾಗಿರುವ ಡಾ. ನಿಬ್ರಾಝ್ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ತನ್ನ ಸಾಧನೆಯ ಸಂತಸ ಹಂಚಿಕೊಳ್ಳುವ ಜತೆಗೆ ತನ್ನ ಅಧ್ಯಯನ, ತನ್ನ ಪೋಷಕರ ಪ್ರೇರಣೆ ಹಾಗೂ ಮಂಗಳೂರಿನಲ್ಲಿ ತಾನು ಪಡೆದ ಅನುಭವವನ್ನು ‘ವಾರ್ತಾಭಾರತಿ’ ಜತೆ ಅವರು ಹಂಚಿಕೊಂಡಿದ್ದಾರೆ.
ತಂದೆಯ ಹಾದಿ ಅನುಸರಿಸಿದ್ದೆ, ಅದುವೇ ನನಗೆ ಸೂಕ್ತ
‘‘ತಂದೆಯಂತೆ ವೈದ್ಯಕೀಯ ವೃತ್ತಿಯನ್ನು ಅನುಸರಿಸಿದ್ದೆ. ಅದುವೇ ನನಗೆ ಸೂಕ್ತವಾದುದು ಎಂದು ನನಗೀಗ ಮನದಟ್ಟಾಗಿದೆ. ಈ ಬಾರಿ ನೀಟ್ ಪಿಜಿ ಪರೀಕ್ಷೆ ಎದುರಿಸುವಾಗ ನನ್ನ ಗುರಿ 100ರಿಂದ 1000ದೊಳಗಿನ ರ್ಯಾಂಕ್ ಪಡೆಯುವುದಾಗಿತ್ತು. ಆದರೆ 10ನೆ ರ್ಯಾಂಕ್ ಪಡೆದಿರುವುದಕ್ಕೆ ನನ್ನ ಶ್ರಮದ ಜತೆಗೆ ಸಹಕರಿಸಿದ ಮ್ಯಾರೋ ಕೋಚಿಂಗ್ ಕೇಂದ್ರ ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ನನ್ನ ತಾಯಿಯ ಒತ್ತಾಸೆ, ತಂದೆಯ ಪ್ರೋತ್ಸಾಹ ಹಾಗೂ ದೇವರ ಅನುಗ್ರಹವೇ ಕಾರಣ’’ ಎಂದು ಪ್ರತಿಕ್ರಿಯಿಸಿದ್ದಾರೆ ಡಾ. ನಿಬ್ರಾಝ್.
‘‘ನನ್ನ ತಂದೆಯೂ ಮಂಗಳೂರಿನ ಕೆಎಂಸಿಯಲ್ಲಿ ವೈದ್ಯಕೀಯ ಪಿಜಿ ಶಿಕ್ಷಣ ಪಡೆದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪದವಿ ಪಡೆದವರು. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ತ್ರಿಶೂರ್ನಲ್ಲಿ ಪಡೆದಿದ್ದೆ. ಬಳಿಕ ಕಳೆದ ಐದೂವರೆ ವರ್ಷಗಳಿಂದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದೇನೆ. ಮುಂದೆ ಎಐಎಂಎಸ್ ಪರೀಕ್ಷೆ ಎದುರಿಸುವ ಗುರಿ ಇದ್ದು, ಜನರಲ್ ಮೆಡಿಸಿನ್ನಲ್ಲಿ ಎಂಡಿ ಮಾಡುವ ಆಸಕ್ತಿಯನ್ನು ಹೊಂದಿದ್ದೇನೆ’’ ಎನ್ನುವ ನಿಬ್ರಾಝ್ಗೆ, ಭಾರತದಲ್ಲೇ ತನ್ನ ಶಿಕ್ಷಣ ಮುಂದುವರಿಸಿ ವೈದ್ಯಕೀಯ ವೃತ್ತಿಯನ್ನು ಮುಂದುವರಿಸುವ ಆಸೆಯಂತೆ.
ಉನ್ನತ ವ್ಯಾಸಂಗ ಹಾಗೂ ವೈದ್ಯಕೀಯ ವೃತ್ತಿಗಾಗಿ ವಿದೇಶಕ್ಕೆ ತೆರಳುವ ಯುವ ವೈದ್ಯರ ಕುರಿತಂತೆ ವಾರ್ತಾಭಾರತಿ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ. ನಿಬ್ರಾಝ್, ‘‘ನಾನು ನನ್ನ ಭಾರತವನ್ನು ಅತಿಯಾಗಿ ಇಷ್ಟ ಪಡುತ್ತೇನೆ. ಕಾರಣ ನಾನು 10ನೆವರೆಗೆ ವಿದೇಶದಲ್ಲಿ ಬೆಳೆದ ಕಾರಣವೂ ಇರಬಹುದೇನೋ. ಆದರೆ ನನಗೆ ನನ್ನ ದೇಶದಲ್ಲಿಯೇ ಕಲಿತು ಇಲ್ಲೇ ನನ್ನ ವೃತ್ತಿಯನ್ನು ಮಾಡುವಾಸೆ. ಯುವ ವೈದ್ಯರು ವಿದೇಶದಲ್ಲಿ ವೃತ್ತಿಯನ್ನು ಅರಸಿಕೊಂಡು ಹೋಗಲು ಕಾರಣ ಅಲ್ಲಿನ ವೈದ್ಯರಿಗೆ ಸಿಗುವ ಸೌಲಭ್ಯ ಹಾಗೂ ಇಲ್ಲಿನ ಕೆಲಸದ ಒತ್ತಡ ಆಗಿರಬಹುದು. ಅದು ಅವರ ವೈಯಕ್ತಿಕ ವಿಚಾರ’’ ಎನ್ನುತ್ತಾರವರು.
ನಾನು ಸುಮಾರು ಐದಾರು ವರ್ಷಗಳಿಂದ ಮಂಗಳೂರಿನಲ್ಲಿದ್ದೇನೆ. ನಾನು ತುಂಬಾ ಇಷ್ಟಪಡುವ ಜಾಗ ಇದು. ಜತೆಗೆ ಇಲ್ಲಿನ ಪ್ರಾಕೃತಿಕ ಸೌಂದರ್ಯ, ಬೀಚ್ಗಳು ಎಲ್ಲರಿಗೂ ಆಕರ್ಷಣೀಯ. ನಾನು ಕಲಿತ ಕಾಲೇಜು, ಅಲ್ಲಿನ ಪ್ರೊಫೆಸರ್ಗಳು ಕೂಡಾ ನನಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಹಿಂದೆಲ್ಲಾ ಕ್ರಿಕೆಟ್ ಆಟವೆಂದರೆ ಇಷ್ಟ ಪಡುತ್ತಿದ್ದೆ. ಆದರೆ ಇತ್ತೀಚೆಗೆ ಕೆಲ ವರ್ಷಗಳಿಂದ ಬ್ಯಾಡ್ಮಿಂಟನ್ ನನ್ನ ಮೆಚ್ಚಿನ ಆಟ. ಬೆಳಗ್ಗಿನ ಒಂದೆರಡು ಗಂಟೆ ನಾನು ಬ್ಯಾಡ್ಮಿಂಟನ್ನಲ್ಲಿ ಕಳೆಯುತ್ತೇನೆ. ನನ್ನ ತಂದೆಯೂ ಬ್ಯಾಂಡ್ಮಿಂಟನ್ ಆಟಗಾರ. ಹಾಗಾಗಿಯೇ ನಾನೂ ಆಕರ್ಷಿತನಾಗಿರಬಹುದು ಎನ್ನುತ್ತಾರೆ ನಿಬ್ರಾಝ್.
‘‘ನಾನು ಕಲಿಕೆಯಲ್ಲಿ ಓರ್ವ ಸಾಮಾನ್ಯ ವಿದ್ಯಾರ್ಥಿ. ನಾನು ಕಳೆದ ಬಾರಿಯೂ ನೀಟ್ ಪಿಜಿ ಪರೀಕ್ಷೆ ಬರೆದಿದ್ದೆ. ಅದರಲ್ಲಿ ನನಗೆ 10000 ರ್ಯಾಂಕ್ ಬಂದಿತ್ತು. ನನ್ನ ತಾಯಿ ಮಾತ್ರ ನೀನು ಮತ್ತೆ ಪ್ರಯತ್ನಿಸು ಎಂದು ತಾಯಿ ಒತ್ತಾಸೆಯಾಗಿ ನನ್ನ ಬೆನ್ನ ಹಿಂದೆ ನಿಂತಿದ್ದರು. ಹಾಗಾಗಿ ಮತ್ತೆ ಪರೀಕ್ಷೆ ಎದುರಿಸಿದೆ. ನಾನು 100ರಿಂದ 1000ದೊಳಗೆ ರ್ಯಾಂಕ್ ನಿರೀಕ್ಷಿಸಿದ್ದೆ. ಸುಮಾರು ಎಂಟು ತಿಂಗಳ ಕಾಲ ಅತ್ಯಂತ ಜತನದಿಂದ ಸ್ವಯಂ ಅಧ್ಯಯನಕ್ಕೆ, ಹೆಚ್ಚಿನ ಅವಧಿಯನ್ನು ಮೀಸಲಿಟ್ಟಿದ್ದೆ. ಹಳೆಯ ಪ್ರಶ್ನಾವಳಿಗಳನ್ನು ಬಗೆಹರಿಸಲು ಶ್ರಮಿಸಿದ್ದೆ. ಅದರ ಫಲವೇ ನಾನು ಪಡೆದ 10ನೆ ರ್ಯಾಂಕ್. ನಿಜಕ್ಕೂ ಖುಷಿಯಾಗಿದೆ’’
.ಡಾ. ನಿಬ್ರಾಝ್,