ಬೆಂಗಳೂರನ್ನು ಭಾರತದ ಬೈಸಿಕಲ್ ಸಿಟಿಯನ್ನಾಗಿಸಲು ಪ್ರಯತ್ನ: ಸಚಿವ ಡಾ.ನಾರಾಯಣಗೌಡ

ಫೈಲ್ ಚಿತ್ರ
ಬೆಂಗಳೂರು, ಜೂ. 2: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್ನೆಸೆಸ್ ಸಹಯೋಗದೊಂದಿಗೆ ‘ವಿಶ್ವ ಸೈಕಲ್ ದಿನಾಚರಣೆ' ಪ್ರಯುಕ್ತ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ' ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸೌಧದ ಮುಂಭಾಗದಲ್ಲಿ ನಾಳೆ(ಜೂ. 3) ಸಚಿವರಾದ ಡಾ.ಅಶ್ವತ್ಥ ನಾರಾಯಣ್ ಅವರು, ಮುರುಗೇಶ್ ನಿರಾಣಿಯವರು ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಲಿದ್ದಾರೆ. ಸೈಕಲ್ ಬಳಕೆಯಿಂದ ಆರೋಗ್ಯದಲ್ಲಾಗುವ ಉತ್ತಮ ಬದಲಾವಣೆಗಳ ಕುರಿತು ಜನರಿಗೆ ತಿಳಿಸುವುದಕ್ಕಾಗಿ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಸೈಕಲ್ ಬಳಸುವಂತೆ ಪ್ರೇರೇಪಿಸುವ ಸಲುವಾಗಿ ಬೈಸಿಕಲ್ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ' ಎಂದರು.
‘ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್ನೆಸೆಸ್ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಸೈಕಲ್ ರ್ಯಾಲಿಯನ್ನು ಆಯೋಜಿಸಲಾಗಿದೆ. ಸೈಕಲ್ ಬಳಕೆ ಹೆಚ್ಚಿಸಿದ್ದಷ್ಟು ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಹಾಗೂ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳಬಹುದು. ಜೊತೆಗೆ ಸಂಚಾರ ದಟ್ಟಣೆ ಸಮಸ್ಯೆಯನ್ನು ಕಡಿಮೆಗೊಳಿಸಬಹುದು. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್ ಬಳಸಬೇಕು' ಎಂದು ಅವರು ಕರೆ ನೀಡಿದರು.
‘ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ರ್ಯಾಲಿ ನಡೆಯಲಿದೆ. ಕರ್ನಾಟಕದ 7 ಐತಿಹಾಸಿಕ ಸ್ಥಳಗಳಾದ ಹಂಪಿ, ಬೇಲೂರು, ರಾಣಿ ಅಬ್ಬಕ್ಕ ಕೋಟೆ, ಗೋಲ್ ಗುಂಬಝ್, ಮೈಸೂರು ಅರಮನೆ, ಮಲ್ಪೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಬೈಸಿಕಲ್ ರ್ಯಾಲಿ ಆಯೋಜಿಸಲಾಗಿದೆ. ನಮ್ಮ-ನಿಮ್ಮ ಸೈಕಲ್ ಫೌಂಡೇಷನ್, ಇವರು ಸ್ಟಾರ್ಟ್ ಅಪ್ ಸೆಲ್, ಬೆಂಗಳೂರು ಇವರ ಸಹಯೋಗದಲ್ಲಿ ‘ಲೀಡ್ ಬೆಂಗಳೂರು ರೈಡ್-2022' ಆಯೋಜಿಸುತ್ತಿದ್ದು, ಇದರಲ್ಲಿ ಜರ್ಮನಿಯ ವಿವಿಧ ಕಂಪೆನಿಗಳ ಸಿಇಒಗಳು ಭಾಗವಹಿಸುತ್ತಿದ್ದಾರೆ.
ಇದರ ಜೊತೆಗೆ ಸುಮಾರು 200 ಸೈಕ್ಲಿಸ್ಟ್ಗಳು ಪಾಲ್ಗೊಳ್ಳಲಿದ್ದಾರೆ. ಜರ್ಮನಿ ರಾಷ್ಟ್ರದ ವಿವಿಧ ಕಂಪೆÀನಿಗಳ ಕಾರ್ಯನಿರ್ವಾಹಕರ ತಂಡವು ಈ ಪ್ರಮುಖ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಇವರು ಭಾರತ ಮತ್ತು ಜರ್ಮನಿ ದೇಶಗಳ ನಡುವಣ ಸೈಕಲ್ ಸಂಸ್ಕøತಿಗೆ ಸಾಕ್ಷಿಯಾಗಲಿದ್ದಾರೆ' ಎಂದು ಡಾ.ನಾರಾಯಣಗೌಡ ಮಾಹಿತಿ ನೀಡಿದರು.







