ಸಂಘಟನೆಯ ಹೋರಾಟವನ್ನು ದಾಳಿ ಎನ್ನುವುದು ಖಂಡನೀಯ: ಕ್ಯಾಂಪಸ್ ಫ್ರಂಟ್
ಬೆಂಗಳೂರು, ಮೇ 2: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಯು ಶಿಕ್ಷಣ ಸಚಿವರ ಮನೆ ಮುಂದೆ ನಡೆಸಿದ ಪ್ರತಿಭಟನೆಯನ್ನು ದಾಳಿ ಎಂದು ಬಿಂಬಿಸುವ ಮುಖಾಂತರ ರಾಜ್ಯ ಬಿಜೆಪಿ ಸರಕಾರ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ನಡೆಸುತ್ತಿದೆ, ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.
ಗುರುವಾರ ಸುದ್ದಿಗಾರರೊಂದಿಗೆ ಕ್ಯಾಂಪಸ್ ಫ್ರಂಟ್ನ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಅವರು ಮಾತನಾಡಿ, ಸಂವಿಧಾನಬಾಹಿರವಾಗಿ ಪಠ್ಯ ಪರಿಷ್ಕರಣೆ ನಡೆಸಿದ್ದು, ಕುವೆಂಪು ಅವರಿಗೆ ಅವಮಾನಗೈದ ರೋಹಿತ್ ಚಕ್ರತೀರ್ಥರಂತಹ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದ ರಾಜ್ಯ ಸರಕಾರ, ಇದೀಗ ಇದರ ವಿರುದ್ದ ಧ್ವನಿ ಎತ್ತುವವರನ್ನು ಗುರಿಯಾಗಿಸುತ್ತಿರುವುದು ಹೇಡಿತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಕನ್ನಡಿಗರಿಗೆ ಒಪ್ಪಲು ಸಾಧ್ಯವಿಲ್ಲ. ಇದೇ ಹಠಮಾರಿ ಧೋರಣೆಯನ್ನು ರಾಜ್ಯ ಸರಕಾರ ವ್ಯಕ್ತಪಡಿಸುವುದಾದರೆ ವಿದ್ಯಾರ್ಥಿ ಹೋರಾಟವು ಇನ್ನೂ ತೀವ್ರತೆಯನ್ನು ಪಡೆದುಕೊಳ್ಳಲಿದೆ. ಈಗಾಗಲೇ ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದ ಬಂಧಿತ ವಿದ್ಯಾರ್ಥಿ ನಾಯಕರನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.





